G. K. Govind Rao : ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’

Literature : ‘ನಾವಿಬ್ಬರೂ ಪರಸ್ಪರ ಓದಿನ ದೀಕ್ಷೆಯನ್ನು ಪಡೆದುಕೊಂಡಿದ್ದೆವು. ಇಂಗ್ಲಿಷ್ ಸಾಹಿತ್ಯದ ದೊಡ್ಡ ಜಗತ್ತನ್ನು ನನ್ನೊಳಗೆ ತೆರೆದಿದ್ದೇ ಅವರು. ಸಾಹಿತ್ಯದ ಕುರಿತಾದ ಅನೇಕ ಅದ್ಭುತ ಆಲೋಚನೆಗಳ ಪ್ರವೇಶ ಮಾಡಲು ಆ ಓದಿನಿಂದನೇ ನನಗೆ ಸಾಧ್ಯವಾಯಿತು.’ ಡಾ. ಎಚ್. ಎಸ್. ವೆಂಕಟೇಶಮೂರ್ತಿ

G. K. Govind Rao : ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’
ಪ್ರಕಾಶಕ ಬಾಕಿನ, ಹಿರಿಯ ಕವಿ ಪ್ರೊ. ಎಚ್. ಎಸ್. ವೆಂಕಟೇಶಮೂರ್ತಿ, ಪ್ರೊ. ಜಿ. ಕೆ. ಗೋವಿಂದ ರಾವ್
ಶ್ರೀದೇವಿ ಕಳಸದ

Updated on: Oct 15, 2021 | 5:51 PM

G. K. Govind Rao : ಸೂಟು, ಟೈ ಇಲ್ಲದೆ ಎಂದೂ ಕಾಲೇಜನ್ನು ಪ್ರವೇಶಿಸಿದವರಲ್ಲ. ಸ್ಟಾಫ್​ರೂಮಿಗೆ ಬಂದಕೂಡಲೇ ಕೈಕಟ್ಟಿಕೊಂಡು, ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’ ಎಂದು ಪ್ರೊ. ನರಸಿಂಹ ರಾವ್ ಮತ್ತು ನನ್ನನ್ನು ಉದ್ದೇಶಿಸಿ ಹೀಗೆ ತಮಾಷೆ ಮಾಡುತ್ತಿದ್ದರು. ಬಹಳ ಹಾಸ್ಯಪ್ರಜ್ಞೆ ಇತ್ತು ಅವರಲ್ಲಿ. ಇನ್ನು ಚರ್ಚೆಯ ವಿಷಯಕ್ಕೆ ಬಂದರೆ, ಅಂದು ಶುರುವಾದ ವಿಷಯ ಅಂದಿಗೇ. ನಾಳೆ ಮತ್ತೊಂದು ವಿಷಯದ ಬಗೆಗೆ. ಹೀಗೆ ಸದಾ ಜೀವಂತವ್ಯಕ್ತಿತ್ವ ಅವರದು. ವಿದ್ಯಾರ್ಥಿಗಳೊಂದಿಗೆ ಚಹಾ ಕುಡಿಯುತ್ತ, ಓದು ವಿಚಾರಗಳನ್ನು ಹಂಚಿಕೊಳ್ಳುತ್ತ ಸದಾ ಸಮಾಜಮುಖಿ ಬದುಕಿಗೆ ತೆರೆದುಕೊಂಡಿದ್ದರು. ಏನೇ ಸಮಸ್ಯೆ ಬಂದರೂ ಪ್ರಿನ್ಸಿಪಾಲ್​, ‘ ಕರೀರಿ ಗೋವಿಂದರಾವ್ ಅವರನ್ನು’ ಎನ್ನುತ್ತಿದ್ದರು.
ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಹಿರಿಯ ಸಾಹಿತಿ

ಬೆಂಗಳೂರಿನ ಸೆಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ 30 ವರ್ಷಗಳ ಕಾಲ ಇಬ್ಬರೂ ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಂಡಿದ್ದೆವು. ಜಿ. ಕೆ. ಗೋವಿಂದರಾವ್ ಅವರದು ಒಂದು ರೀತಿಯ ಆಕರ್ಷಕ ವ್ಯಕ್ತಿತ್ವ. ವಿದ್ಯಾರ್ಥಿಗಳ ಮೇಲೆ ಗಾಢ ಪ್ರಭಾವ ಬೀರಿದ್ದರು. ಅವರಿದ್ದರೆಂದರೆ ಮುಗಿಯಿತು, ಸ್ಟಾಫ್​ ರೂಮಿನಲ್ಲಿ ಯಾವಾಗಲೂ ಬಿಸಿ ಬಿಸಿ ಚರ್ಚೆಗಳು. ವರ್ತಮಾನದ ಸಂಗತಿಗಳಿದ್ದರಂತೂ ಅದಕ್ಕೆ ತೀವ್ರವಾಗಿ ಸ್ಪಂದಿಸುವುದು, ವಿಮರ್ಶಿಸುವುದು ಹೀಗೆ ಒಟ್ಟಾರೆಯಾಗಿ ಜೀವಂತಿಕೆಯ ವಾತಾವರಣವನ್ನು ಸೃಷ್ಟಿಸಿಬಿಡುತ್ತಿದ್ದರು ಗೆಳೆಯ, ವಿಚಾರವಾದಿ ಗೋವಿಂದರಾವ್.

ನಾವಿಬ್ಬರೂ ಪರಸ್ಪರ ಓದಿನ ದೀಕ್ಷೆಯನ್ನು ಪಡೆದುಕೊಂಡಿದ್ದೆವು. ಇಂಗ್ಲಿಷ್ ಸಾಹಿತ್ಯದ ದೊಡ್ಡ ಜಗತ್ತನ್ನು ನನ್ನೊಳಗೆ ತೆರೆದಿದ್ದೇ ಅವರು. ಸಾಹಿತ್ಯದ ಕುರಿತಾದ ಅನೇಕ ಅದ್ಭುತ ಆಲೋಚನೆಗಳ ಪ್ರವೇಶ ಮಾಡಲು ಆ ಓದಿನಿಂದನೇ ನನಗೆ ಸಾಧ್ಯವಾಯಿತು. ಹ್ಯಾಮ್ಲೆಟ್, ಮ್ಯಾಕ್​ಬೆತ್ ಪಾಠ ಮಾಡಲು ಶುರುಮಾಡಿದರೆ ಪಾತ್ರಗಳನ್ನು ಆವಾಹಿಸಿಕೊಂಡುಬಿಡುತ್ತಿದ್ದರು. ಆ ಧ್ವನಿ, ಅದರ ಏರಿಳಿತ… ಅವರಿಗೆ ನನ್ನಿಂದ ಕುಮಾರವ್ಯಾಸನ ಹುಚ್ಚು ಹಿಡಿಯಿತು. ಹೀಗೆ ನಾವು ಪರಸ್ಪರ ಅನೇಕ ಕನ್ನಡ-ಇಂಗ್ಲಿಷ್ ಪುಸ್ತಕಗಳನ್ನು ಓದುತ್ತ ಸಂವಾದ ನಡೆಸುತ್ತಿದ್ದೆವು.

ಮಹಾನ್ ಸಂಗೀತ ಪ್ರೇಮಿ. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ನೂರಾರು ಸಿ.ಡಿಗಳು ಅವರಲ್ಲಿದ್ದವು.  ನಿರಂತರವಾಗಿ ರಂಗಭೂಮಿ, ಸಿನೆಮಾ, ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಿದ್ದರು. ವರ್ಷಕ್ಕೆ ಒಂದು ಇಂಗ್ಲಿಷ್, ಒಂದು ಕನ್ನಡ ನಾಟಕವನ್ನು ವಿದ್ಯಾರ್ಥಿಗಳಿಂದ ಮಾಡಿಸುತ್ತಿದ್ದರು. ಇಂದು ನಮ್ಮಲ್ಲಿರುವ ಪ್ರತಿಭಾವಂತ ಕಲಾವಿದರುಗಳಲ್ಲಿ ಅನೇಕರು ಅವರ ಗರಡಿಯಲ್ಲೇ ಪಳಗಿದವರು, ಪ್ರಕಾಶ್ ರೈ, ಸುಂದರ್ ವೀಣಾ ಮುಂತಾದವರು.

ಸೂಟು, ಟೈ ಇಲ್ಲದೆ ಎಂದೂ ಕಾಲೇಜನ್ನು ಪ್ರವೇಶಿಸಿದವರಲ್ಲ. ಸ್ಟಾಫ್​ರೂಮಿಗೆ ಬಂದಕೂಡಲೇ ಕೈಕಟ್ಟಿಕೊಂಡು, ‘ಓಹೋ, ಬೆಳಗಾಗಿ ಈ ದೈತ್ಯರ ಮುಖ ನೋಡಬೇಕು ನಾನು?’ ಎಂದು ಪ್ರೊ. ನರಸಿಂಹ ರಾವ್ ಮತ್ತು ನನ್ನನ್ನು ಉದ್ದೇಶಿಸಿ ಹೀಗೆ ತಮಾಷೆ ಮಾಡುತ್ತಿದ್ದರು. ಬಹಳ ಹಾಸ್ಯಪ್ರಜ್ಞೆ ಇತ್ತು ಅವರಲ್ಲಿ. ಇನ್ನು ಚರ್ಚೆಯ ವಿಷಯಕ್ಕೆ ಬಂದರೆ, ಅಂದು ಶುರುವಾದ ವಾಗ್ವಾದ ಅಂದಿಗೇ, ನಾಳೆ ಮತ್ತೊಂದು ವಿಷಯದ ಬಗ್ಗೆ. ಹೀಗೆ ಜೀವಂತವ್ಯಕ್ತಿತ್ವ ಅವರದು. ವಿದ್ಯಾರ್ಥಿಗಳೊಂದಿಗೆ ಚಹಾ ಕುಡಿಯುತ್ತ, ಓದು ವಿಚಾರಗಳನ್ನು ಹಂಚಿಕೊಳ್ಳುತ್ತ ಸದಾ ಸಮಾಜಮುಖಿ ಬದುಕಿಗೆ ತೆರೆದುಕೊಂಡಿದ್ದರು. ಏನೇ ಸಮಸ್ಯೆ ಬಂದರೂ ಪ್ರಿನ್ಸಿಪಾಲ್​, ‘ ಕರೀರಿ ಗೋವಿಂದರಾವ್ ಅವರನ್ನು’ ಎನ್ನುತ್ತಿದ್ದರು.

ಅವರ ಬಗ್ಗೆ ನಾನು ಬರೆದ ಸುನೀತ :

ಮಹಾರಾವ

ರಾವೆಂದರೆ ಒಂದು ಮಹಾರಾವ. ಮತ್ತದೇ ಹಳೆಯ
ನಿಷ್ಪತ್ತಿ. ಉದ್ವಿಗ್ನ ಉರಿಯಿಂದ ಸಿಡಿಮಿಡಿ ಬೆಂಕಿ ಕಿಡಿ.
ಕಿಡಿಯಿಲ್ಲದ್ದೆಂಥ ಬೆಳಕು? ಎಂಬಾಷಾಢ ಗುಡುಗು. ದೇ
ಶಭಕ್ತಾ ಎಂಬ ಚಾವಟಿ ಬೀಸಲ್ಲಿ ಹುರಿಗೊಂಡ ಅದೇ
ಅಂತಸ್ಥ ಭಾವ. ಸದಾ ಎದೆಗವಚಿಕೊಂಡ ಪ್ರೆಸ್ಸಿನ ವಾ
ಸನೆ ಮಾಸದ ಹೊಸಾ ಬುಕ್ಕು. ಇಕ್ಕೆಲಕ್ಕೂ ಕ್ಲಾಸಿಕಲ್
ಗುನುಗಿನ ಲೋಲಕ್ಕು. ಹುಡುಗ ಹ್ಯಾಮ್ಲೆಟ್ಟೀಗ ಲಿಯರ್
ದೊರೆ. ಅಂತರಂಗದಷ್ಟೇ ಬಹಿರಂಗೂ ಮುಖ್ಯವೆಂಬ
ವಾಗ್ಮೋಹ. ಸ್ನಿಗ್ಧತೆ ಮೇಲೊಂದು ಮಾತಿನ ಸೀಸ
ಮಹಲ್ಲು. ತುಟಿ ನಡುವೆ ಹೊಗೆಯುಗುಳ ನಿರ್ಬೂದಿ
ಉರಿಗೆಂಡ. ಎದೆ ತುಂಬ ಪ್ರೀತಿ. ಬತ್ತಿ ನೆನೆಸುವ ಸ್ನೇಹ.
ಕೆಸರ ತಾಗದ ಚಕೋರಿ ದಾಹ. ದಿಲ್ದಾರ್; ಧಾರಾಳಿ.
ಪ್ರತಿ ತರಗತಿಯೂ ನಿತ್ಯ ನಾಟಕ ಶಾಲೆ. ಮ್ಯಾಕ್ಬೆತ್ಮೇಲೆ
ಅವರಾಡುವುದು ಮಾತಲ್ಲ; ಬಯಲು ನೆಕ್ಕುವಗ್ನಿಜ್ವಾಲೆ.

ಇದನ್ನೂ ಓದಿ : G. K. Govind Rao : ‘ಪ್ರೊಫೆಸರ್, ಇನ್ನ್ಯಾರೊಂದಿಗೆ ನಾನು ಜಗಳವಾಡಲಿ’ ನಿರ್ದೇಶಕ ಟಿ.ಎನ್. ಸೀತಾರಾಮ್

Published On - 12:29 pm, Fri, 15 October 21

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us