Elephant Human Conflict: ಆನೆ- ಮಾನವ ಸಂಘರ್ಷ ತಡೆಗೆ ವಿನೂತನ ತಂತ್ರ; ಗಳಿಕೆ-ನಿಯಂತ್ರಣ ಎರಡೂ ಒಟ್ಟೊಟ್ಟಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2021 | 5:02 PM

ಆನೆ- ಮಾನವ ಸಂಘರ್ಷ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ಇದರಿಂದ ಸಂಘರ್ಷವನ್ನು ತಡೆಗಟ್ಟುವ ಜತೆಗೆ ರೈತರ ಆದಾಯಕ್ಕೂ ಅನುಕೂಲ ಆಗಲಿದೆ ಎಂದು ಕೆವಿಐಸಿ ಗೌರವಾಧ್ಯಕ್ಷ ವಿನಯ್ ಸಕ್ಸೇನಾ ಹೇಳಿದ್ದಾರೆ.

Elephant Human Conflict: ಆನೆ- ಮಾನವ ಸಂಘರ್ಷ ತಡೆಗೆ ವಿನೂತನ ತಂತ್ರ; ಗಳಿಕೆ-ನಿಯಂತ್ರಣ ಎರಡೂ ಒಟ್ಟೊಟ್ಟಿಗೆ
ಆನೆ (ಸಂಗ್ರಹ ಚಿತ್ರ)
Follow us on

ಮಡಿಕೇರಿ: ಆನೆಗಳು ಜೇನುಹುಳುಗಳಿಗೆ ಹೆದರುತ್ತವೆ. ಅವುಗಳ ದೇಹದ ಸೂಕ್ಷ್ಮ ಭಾಗಗಳಾದ ಕಣ್ಣು ಮೊದಲಾದ ಕಡೆ ಅವು ಕಡಿಯುತ್ತವೆ ಎಂದು ಹೆದರುತ್ತವೆ. ಆದ್ದರಿಂದ ಜೇನುಗೂಡಿನ ಬೇಲಿಗಳನ್ನು ನಿರ್ಮಿಸುವ ಮೂಲಕ ಆನೆ-ಮಾನವ ನಡುವಿನ ಸಂಘರ್ಷವನ್ನು ತಡೆಯಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಆಯೋಗದ (ಕೆವಿಐಸಿ) ಗೌರವಾಧ್ಯಕ್ಷ ವಿನಯ್‍ಕುಮಾರ್ ಸಕ್ಸೇನ ಮಾಹಿತಿ ನೀಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾಹಿತಿ ನೀಡಿ, ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಆನೆಗಳು ಹೆಚ್ಚು ಸಮಸ್ಯೆಯನ್ನು ಉಂಟುಮಾಡುವ ಪ್ರದೇಶಗಳನ್ನು ಆಯ್ಕೆ ಮಾಡಿ, ಪ್ರಾರಂಭಿಕವಾಗಿ ಅಂತಹ ಪ್ರದೇಶಗಳಲ್ಲಿ ಜೇನುಗೂಡು ಬೇಲಿ ನಿರ್ಮಿಸುವ ವಿನೂತನ ತಂತ್ರವನ್ನು ರೂಪಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯ ಚೇಳೂರು ಗ್ರಾಮದ ಸುತ್ತಮುತ್ತಲಿನ ನಾಲ್ಕು ಸ್ಥಳಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಯೋಜನೆಯಿಂದ ಆನೆ- ಮಾನವ ಸಂಘರ್ಷವನ್ನು ತಡೆಗಟ್ಟುವುದರ ಜೊತೆಗೆ ಜೇನುಕೃಷಿಗೆ ಸಹಕಾರಿಯಾಗುವುದರ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ. ಆದಿವಾಸಿಗಳ ಹಾಡಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಫಲಶ್ರುತಿಯನ್ನು ಕಂಡುಕೊಳ್ಳುವುದಕ್ಕೆ ಚಿಂತಿಸಲಾಗಿದೆ. ಈ ಯೋಜನೆ ಫಲದಾಯಕ ಎಂದು ಕಾಣಲು ಆರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಆನೆ- ಮಾನವ ಸಂಘರ್ಷ ತಡೆಯುವುದಕ್ಕೆ ಜೇನು ಸಾಕಣೆ

ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದಿಂದ ನಡೆಸಿದ ಜೇನು ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಇದೇ ಸಂದರ್ಭದಲ್ಲಿ ಜೇನುಪೆಟ್ಟಿಗೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದ ಉಪಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಶುಕ್ಲ, ಹಾಗೂ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಸಿ.ಜಿ.ಕುಶಾಲಪ್ಪ, ಎನ್.ಆರ್.ಎಂ. ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಎಸ್.ಎ.ಎಫ್. ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹೆಗ್ಡೆ ಹಾಗೂ ಡಾ. ಕೆಂಚರೆಡ್ಡಿ ಸೇರಿದಂತೆ ರೈತರು ಹಾಗೂ ಪ್ರಾಧ್ಯಾಪಕರು ಇದ್ದರು.

ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾಗಿರುವ ಆನೆ ಹಾವಳಿ ತಡೆಗೆ ರೈಲ್ವೆ ಕಂಬಿಗಳ ಬಳಕೆ