
ಕೊವಿಡ್-19 ಮಹಾಮಾರಿಯಿಂದಾಗಿ, ಐಪಿಎಲ್ 2020 ಆಯೋಜನೆಗೊಳ್ಳುವ ಬಗ್ಗೆಯೇ ಪ್ರಶ್ನೆ ಉದ್ಭವಿಸಿತ್ತು. ಆದರೆ, ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ದೊಡ್ಡ ಕ್ರೀಡಾ ಈವೆಂಟ್ಗಳಲ್ಲೊಂದಾಗಿರುವ ಐಪಿಎಲ್ ಅನ್ನು ವಿದೇಶಕ್ಕೆ ಶಿಫ್ಟ್ ಮಾಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಾಲಿ ಮೈದಾನಗಳ ಹೊರತಾಗಿಯೂ ಟೂರ್ನಮೆಂಟನ್ನು ಅತ್ಯಂತ ಯಶಸ್ವೀಯಾಗಿ ನಡೆಯುವಂತೆ ನೋಡಿಕೊಂಡಿತು. ಟೂರ್ನಿಯುದ್ದಕ್ಕೂ ಯಾವುದೇ ನ್ಯೂನತೆಗಳು ಕಂಡುಬರಲಿಲ್ಲ. ಇದರ ಶ್ರೇಯಸ್ಸು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೂ ಸಲ್ಲುತ್ತದೆ.
ಮುಂಬೈ, ಲೀಗ್ ಹಂತದ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು ನಂತರ ಕ್ವಾಲಿಫೈಯರ್ 1ರಲ್ಲಿ ಇದೇ ಡೆಲ್ಲಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಮೊದಲ ಸುತ್ತಿನ ಪಂದ್ಯಗಳಲ್ಲಿ ಚಾಂಪಿಯನ್ ಟೀಮಿನಂತೆ ಆಡಿ ಎರಡನೇ ಸುತ್ತಿನಲ್ಲಿ ಅಸ್ಥಿರ ಪ್ರದರ್ಶನಗಳನ್ನು ನೀಡಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನ ಪಡೆದ ಡೆಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಮುಂಬೈಗೆ ಸೋತರೂ, ರವಿವಾರದಂದು, ಕ್ವಾಲಿಫೈಯರ್ 2ರಲ್ಲಿ ಸನ್ರೈಸರ್ಸ್ ಹೈದರಾಬಾದನ್ನು 17ರನ್ಗಳಿಂದ ಸೋಲಿಸಿ ಟೂರ್ನಿಯ ಇತಿಹಾಸದಲ್ಲೇ ಮೊದಲಬಾರಿಗೆ ಫೈನಲ್ ಪ್ರವೇಶಿದೆ. ಗಮನಿಸಬೇಕಿರುವ ಅಂಶವೆಂದರೆ, ಈ ಸೀಸನಲ್ಲಿ ಡೆಲ್ಲಿ ಮತ್ತು ಮುಂಬೈ 3 ಸಲ ಮುಖಾಮುಖಿಯಾಗಿವೆ ಮತ್ತು ಪ್ರತಿ ಸಲ ರೋಹಿತ್ ಶರ್ಮ ಟೀಮು ಮೇಲುಗೈ ಸಾಧಿಸಿದೆ. ನಾಲ್ಕನೇ ಬಾರಿಯಾದರೂ ವಿಜಯಲಕ್ಷ್ಮಿ ಶ್ರೇಯಸ್ ಅಯ್ಯರ್ಗೆ ಒಲಿಯುವಳೇ ಎನ್ನುವುದು ಕಾದು ನೋಡಬೇಕಿದೆ.
ಮುಂಬೈ ನಿಸ್ಸಂದೇಹವಾಗಿ ಸರ್ವಾಂಗ ಪ್ರಬಲ ಟೀಮಾಗಿದೆ. ಈ ತಂಡದ ಬ್ಯಾಟ್ಸ್ಮನ್ಗಳು ಟೂರ್ನಿಯಲ್ಲಿ ಇದುವರೆಗೆ 130 ಸಿಕ್ಸ್ರ್ಗಳನ್ನು ಚಚ್ಚಿದ್ದರೆ, ಡೆಲ್ಲಿಯ ಆಟಗಾರರು 84 ಬಾರಿಸಿದ್ದಾರೆ. ಮುಂಬೈ ಟೀಮಿನ ಪ್ರಾಮಿಸಿಂಗ್ ಆಟಗಾರ ಇಶಾನ್ ಕಿಶನ್ ಅವರೊಬ್ಬರ ಬ್ಯಾಟ್ನಿಂದಲೇ 29 ಸಿಕ್ಸ್ರ್ಗಳು ಸಿಡಿದಿವೆ. ಟೂರ್ನಿಯಲ್ಲಿ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಇದುವರೆಗೆ 60 ಬೌಂಡರಿ ಮತ್ತು 10 ಸಿಕ್ಸ್ರ್ಗಳನ್ನು ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಚೇಸ್ ಮಾಡುತ್ತಿದ್ದಾಗ ಕ್ರೀಸ್ನಲ್ಲಿದ್ದ ಸೂರ್ಯ, ‘ನಾನಿದ್ದೀನಿ, ನಿಶ್ಚಿಂತರಾಗಿರಿ,’ ಅಂತ ಡಗೌಟ್ನಲ್ಲಿದ್ದ ತಮ್ಮ ಜೊತೆ ಆಟಗಾರರಿಗೆ ಸನ್ನೆ ಮಾಡಿದ ದೃಶ್ಯ ಮಹಾರಾಷ್ಟ್ರದಲ್ಲಿ ಮನೆಮಾತಾಗಿಬಿಟ್ಟಿದೆ.
ಡೆಲ್ಲಿಯ ಬಿಗ್ ಹಿಟ್ಟರ್ ರಿಷಬ್ ಪಂತ್ರಿಂದ ನಿರೀಕ್ಷಿತ ಪ್ರದರ್ಶನಗಳು ಬರುತ್ತಿಲ್ಲ. ಭಾರಿ ಹೊಡೆತಗಳ ಮತ್ತೊಬ್ಬ ಆಟಗಾರ ಶಿಮ್ರನ್ ಹೆಟ್ಮೆಯರ್ ಇಡೀ ಟೂರ್ನಿಯಲ್ಲಿ ನಿರಾಶಾದಾಯಕ ಆಟವಾಡಿದ್ದಾರೆ. ನಾಯಕ ಅಯ್ಯರ್ ಇದುವರೆಗೆ ಆಡಿರುವ 16 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 454 ರನ್ ಶೇಖರಿಸಿದ್ದಾರೆ. ಅವರು ಬಿಗ್ ಮ್ಯಾಚ್ ಪ್ಲೇಯರ್ ಆಗಿರುವುದರಿಂದ ನಾಳಿನ ಪಂದ್ಯದಲ್ಲಿ ಪರಾಕ್ರಮ ಮೆರೆಯಬಹುದು.
ಡೆಲ್ಲಿಯ ವೇಗದ ಬೌಲರ್ಗಳಾದ ಕಗಿಸೊ ರಬಾಡ ಮತ್ತು ಌನ್ರಿಖ್ ನೊರ್ಕಿಯ ಯಾರಿಗೂ ಕಮ್ಮಿಯಿಲ್ಲ. ಈ ಜೋಡಿ ಮುಂಬೈ ಬ್ಯಾಟ್ಸ್ಮನ್ಗಳಿಗೆ ತೊಂದರೆ ನೀಡುವುದು ನಿಶ್ಚಿತ. ನಾಳೆ, ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ನಡುವೆ ಬಾಯಲ್ಲಿ ನೀರೂರಿಸುವ ಸೆಣಸಾಟ ನಡೆಯುವ ಸಾಧ್ಯತೆ ಇದ್ದೇಯಿದೆ.