ಈ ಲಕ್ಷ್ಮೀ ಯಾರು? ನನಗೆ ಪರಿಚಯವಿಲ್ಲ -ಶಾಸಕಿ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು

ಸುಳ್ಳು ಹೇಳುವುದು ಬಿಜೆಪಿ ಸಂಸ್ಕೃತಿ ಎಂಬ‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಈ ಲಕ್ಷ್ಮೀ ಯಾರು? ನನಗೆ ಪರಿಚಯವಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಟಾಂಗ್​ ಕೊಟ್ಟಿದ್ದಾರೆ.

ಈ ಲಕ್ಷ್ಮೀ ಯಾರು? ನನಗೆ ಪರಿಚಯವಿಲ್ಲ -ಶಾಸಕಿ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು
ಲಕ್ಷ್ಮಿ ಹೆಬ್ಬಾಳ್ಕರ್ (ಎಡ) , ರಮೇಶ್ ಜಾರಕಿಹೊಳಿ (ಬಲ)

Updated on: Jan 10, 2021 | 7:36 PM

ಬೆಳಗಾವಿ: ಸುಳ್ಳು ಹೇಳುವುದು ಬಿಜೆಪಿ ಸಂಸ್ಕೃತಿ ಎಂಬ‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಈ ಲಕ್ಷ್ಮೀ ಯಾರು? ನನಗೆ ಪರಿಚಯವಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಟಾಂಗ್​ ಕೊಟ್ಟಿದ್ದಾರೆ. ಜ.17ರಂದು ಜಿಲ್ಲೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ‌ ಬಿಜೆಪಿ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲಿಸಿದರು. ಈ ವೇಳೆ, ಸಚಿವ ಹೇಳಿಕೆಯನ್ನು ನೀಡಿದರು.

2023ರಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವೆ ಎಂದು ಜಿಲ್ಲೆಯ ನಾವಗೆಯಲ್ಲಿ ಸಚಿವ ರಮೇಶ್ ಹೇಳಿದರು. ಜ.17ರಂದು ಅಮಿತ್ ಶಾ ಕಾರ್ಯಕ್ರಮವಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಒಂದು ಲಕ್ಷ ಜನ ಬರಬೇಕು. ನಿಮಗೆ ಯಾವ ಸಹಾಯ ಬೇಕು, ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಮೂರರಿಂದ ನಾಲ್ಕು ಲಕ್ಷ ಜನ ಸೇರಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

‘ನಮ್ಮ ಕುಟುಂಬಕ್ಕೆ ಸಂಘಪರಿವಾರ, ಜನಸಂಘದ ಹಿನ್ನೆಲೆ ಇದೆ’
ಜೊತೆಗೆ, ನಮ್ಮ ಕುಟುಂಬಕ್ಕೆ ಸಂಘಪರಿವಾರ, ಜನಸಂಘದ ಹಿನ್ನೆಲೆ ಇದೆ ಎಂದು ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ರಮೇಶ್ ಹೇಳಿದರು. ಜಿಲ್ಲೆಯ ನಾವಗೆ ಗ್ರಾಮದಲ್ಲಿ ಹಿಂದೂ ಸಮಾವೇಶದ ವೇಳೆ ಮಾತನಾಡಿದರು.

ನಾವು ಮೊದಲು ಜನಸಂಘದ ಕರಿ ಟೋಪಿ ಹಾಕುತ್ತಿದ್ದೆವು. ದೀಪದ ಚಿತ್ರವಿದ್ದ ಕರಿ ಟೋಪಿ ಹಾಕ್ತಿದ್ದೆವು ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಸಂಘಟನೆಗಾಗಿ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು. ಬಳಿಕ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಹೋಗಬೇಕಾಯಿತು. ನಮ್ಮ ತಂದೆಯವರು ಜಗನ್ನಾಥ ಜೋಶಿಯವರ ಫಾಲೋವರ್ಸ್. ಗೋವಾ ವಿಮೋಚನೆಗಾಗಿ ಹೋರಾಟ ಮಾಡಿ ಜೈಲಿನಲ್ಲಿದ್ದರು ಎಂದು ಹೇಳಿದರು.

ಒಮ್ಮೆ ಸುರೇಶ್ ಅಂಗಡಿಯವರಿಗೆ ಜನಸಂಘದ ಚಿಹ್ನೆ ಬಗ್ಗೆ ಕೇಳಿದ್ದೆ. ಜನಸಂಘದ ಚಿಹ್ನೆ ಬಗ್ಗೆ ದಿ.ಸುರೇಶ್ ಅಂಗಡಿಯವರಿಗೆ ಗೊತ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

‘ಯುವರಾಜ್ ಜೊತೆ ನಾನು ಫೋಟೋ ತೆಗೆಸಿಕೊಂಡಿರಲಿಲ್ಲ’
ಯುವರಾಜ್ ಅಲಿಯಾಸ್ ಸ್ವಾಮಿಯಿಂದ ವಂಚನೆ ವಿಚಾರವಾಗಿ ಆತ ಒಂದೆರಡು ಬಾರಿ ನನ್ನನ್ನೂ ಭೇಟಿಯಾಗಿದ್ದ.
ದೆಹಲಿ ಕರ್ನಾಟಕ ಭವನದಲ್ಲಿ ಯುವರಾಜ್​ ಭೇಟಿಯಾಗಿದ್ದ. ಆದರೆ, ಅವನ ಜೊತೆ ನಾನು ಫೋಟೋ ತೆಗೆಸಿಕೊಂಡಿರಲಿಲ್ಲ. ಯುವರಾಜ್​ ಜೊತೆ ಫೋಟೋ ತೆಗೆಸಿಕೊಂಡಿದ್ದರೆ ತಪ್ಪಲ್ಲ. ಉನ್ನತ ಹುದ್ದೆಯಲ್ಲಿದ್ದಾಗ ಜನ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಜೊತೆ ಗೌಪ್ಯ ಮಾತುಕತೆ?
ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ರಮೇಶ್ ಸಚಿವ ಜಗದೀಶ್​ ಶೆಟ್ಟರ್​ ಅವರನ್ನು​ ಭೇಟಿಯಾದರು. ಏರ್​ಪೋರ್ಟ್​ನ ವಿಐಪಿ ಲಾಂಜ್​ನಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ ಜೊತೆ ಚರ್ಚೆ ನಡೆಸಿದರು.

ಇದಕ್ಕಾಗಿ ಸಚಿವ ಜಾರಕಿಹೊಳಿ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಯನ್ನು ಅರ್ಧಕ್ಕೆ ನಿಲ್ಲಿಸಿ ಇತ್ತ ಆಗಮಿಸಿದರು. ತರಾತುರಿಯಲ್ಲಿ ಏರ್​ಪೋರ್ಟ್​ಗೆ ಆಗಮಿಸಿದ ಜಾರಕಿಹೊಳಿ ಅಲ್ಲೇ ಇದ್ದ ಅನಿಲ್ ಬೆನಕೆ ಹಾಗೂ ಸಂಜಯ್ ಪಾಟೀಲ್​ರನ್ನ ಹೊರಕಳುಹಿಸಿ ಜಗದೀಶ್ ಶೆಟ್ಟರ್ ಜೊತೆ ಗೌಪ್ಯ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.

ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ!

Published On - 7:32 pm, Sun, 10 January 21