
ವಿಜಯಪುರ: ಕೊರೊನಾ ರಾಜ್ಯಕ್ಕೆ ವಕ್ಕರಿಸಿದಾಗಿನಿಂದ ಕರ್ನಾಟಕದಲ್ಲಿ ಗಾಂಜಾ ನಶೆಯ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಅದರಲ್ಲೂ ಕೆಲವರು ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ವಿಜಯಪುರದ ಗಾಂಧಿಚೌಕ್ ಪೊಲೀಸರು ಹಾಗೂ ಸಿಇಎನ್ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 15 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ವಿಜಯಪುರ ನಗರದ ಜಮಖಂಡಿ ನಾಕಾ ಬಳಿಯ ಜಮೀನಿನಲ್ಲಿ ಬೇರೆ ಬೆಳೆಯ ಮಧ್ಯೆ ಗಾಂಜಾವನ್ನು ಬೆಳೆಯಲಾಗಿತ್ತು. ಮಾಹಿತಿ ತಿಳಿದುಕೊಂಡು ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ, ಸಿಇಎನ್ ಠಾಣೆ ಸಿಪಿಐ ಸುನಿಲ್ ಕಾಂಬಳೆ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಲಾಗಿದೆ. ಬಡವನಬಾಗೇವಾಡಿ ತಾಲೂಕಿನ ಕರಭಂಟನಾಳ ಗ್ರಾಮ ನಿವಾಸಿ ಕಾಂತು ನೀಲು ನಾಯಕನನ್ನು ಬಂಧಿಸಲಾಗಿದೆ.