
ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕ್ಯಾಡೆಮಿಯಲ್ಲಿ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿರುವ ರೋಹಿತ್ ಮತ್ತು ಇಶಾಂತ್ ತಮ್ಮ ಗಾಯಗಳಿಂದ ಚೇತರಿಸಿಕೊಳ್ಳಲು ಕನಿಷ್ಟ 3-4 ವಾರಗಳಾದರೂ ಬೇಕೆಂದು ಎನ್ಸಿಎ ಅಧಿಕಾರಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸಿದ್ದಾರೆ. ಸೀಮಿತ ಓವರ್ಗಳ ಪಂದ್ಯಗಳಿಗೆ ಇವರಿಬ್ಬರ ಆಯ್ಕೆಯನ್ನು ರಾಷ್ಟ್ರೀಯ ಆಯ್ಕೆ ಮಂಡಳಿ ಪರಿಗಣಿಸಿರಲಿಲ್ಲ. ಡಿಸೆಂಬರ್ 17ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೂ ಇವರನ್ನು ತಂಡದಿಂದ ಹೊರಗಿಡಲಾಗಿತ್ತು.
ಕಳೆದ ವಾರ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೋಹಿತ್, ತೊಡೆನೋವಿನ ಗಾಯ ವಾಸಿಯಾಗಿದೆ, ಆಸ್ಟ್ರೇಲಿಯಾ ವಿರುದ್ಧ ಯುದ್ಧಸನ್ನದ್ಧನಾಗಲು ಗಾಯಗೊಳಗಾದ ಭಾಗವನ್ನು ಬಲಗೊಳಿಸುವ ಮತ್ತು ಕಂಡೀಷನಿಂಗ್ ಮೇಲೆ ಗಮನ ಕೇಂದ್ರೀಕರಿಸಿರುವುದಾಗಿ ಹೇಳಿದ್ದರು.
ಮತ್ತೊಂದೆಡೆ, ಇಶಾಂತ್ ಅವರು ಸ್ನಾಯು ಸೆಳೆತದಿಂದ ಇನ್ನೂ ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಕಮರ್ಶಿಯಲ್ ವಿಮಾನ ಮೂಲಕ ಅವರು ಪ್ರಯಾಣ ಬೆಳಸಬೇಕಿರುವುದರಿಂದ, ಈಗಲೇ ಅವರಿಬ್ಬರು ಹೊರಡಲಣಿಯಾದರೂ, ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ಆದ ಮೇಲೆ ‘ಹಾರ್ಡ್ ಕ್ವಾರೈಂಟೀನ್’ಗೆ ಒಳಗಾಗಬೇಕಾಗುತ್ತದೆ. ಹಾರ್ಡ್ ಕ್ವಾರೈಂಟೀನ್ ಅಂದರೆ ಅವರು 14 ದಿನಗಳವರಗೆ ಟೀಮಿನ ಇತರ ಸದಸ್ಯರೊಂದಿಗೆ ಬೆರೆಯುವಂತಿಲ್ಲ ಮತ್ತು ಪ್ರ್ಯಾಕ್ಟೀಸ್ ಸೆಷನ್ನಲ್ಲೂ ಭಾಗವಹಿಸುವಂತಿಲ್ಲ, ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ರವಿವಾರದಂದು ಆಸ್ಟ್ರೇಲಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ್ದ ಟೀಮಿನ ಕೋಚ್ ರವಿ ಶಾಸ್ತ್ರಿ, ಮುಂದಿನ 2-3 ದಿನಗಳಲ್ಲಿ ರೋಹಿತ್ ಮತ್ತು ಇಶಾಂತ್ ಭಾರತದಿಂದ ಹೊರಟರೆ ಮಾತ್ರ ಟೆಸ್ಟ್ಗಳಲ್ಲಿ ಅಡುವ ಚಾನ್ಸ್ ಸಿಗಲಿದೆಯೆಂದು ಹೇಳಿದ್ದರು.
ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿ ಅಡಿಲೇಡ್ನಲ್ಲಿ ಹೊನಲು ಬೆಳಕಿನ ಟೆಸ್ಟ್ನೊಂದಿಗೆ ಡಿಸೆಂಬರ್ 17ರಿಂದ ಆರಂಭವಾಗಲಿದೆ. ಎರಡನೆ ಟೆಸ್ಟ್ ಮೆಲ್ಬರ್ನ್ನಲ್ಲಿ ಡಿಸೆಂಬರ್ 26-30, ಮೂರನೇ ಟೆಸ್ಟ್ ಸಿಡ್ನಿಯಲ್ಲಿ ಜನೆವರಿ 7, 2021 ರಿಂದ 11 ಮತ್ತು ಕೊನೆಯ ಟೆಸ್ಟ್ ಜನೆವರಿ 15ರಿಂದ 19ರವರೆಗೆ ಬ್ರಿಸ್ಬೇನ್ನಲ್ಲಿ ನಡೆಯಲಿವೆ.
Published On - 6:00 pm, Tue, 24 November 20