Deepavali 2024: ಪಟಾಕಿ ಸಿಡಿಸುವಾಗ ಕಣ್ಣಿಗೆ ಕಿಡಿ ಬಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ಪಟಾಕಿ ಸಿಡಿಸುವ ಸಮಯದಲ್ಲಿ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ಕಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ. ಕಣ್ಣಿನಲ್ಲಿ ಕಿಡಿ ಬಿದ್ದರೆ, ಮೊದಲು ತಣ್ಣೀರಿನಿಂದ ಕಣ್ಣನ್ನು ತೊಳೆಯಿರಿ. ಆ ನಂತರ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ ಎಂದು ತಜ್ಞರು ಎಚ್ಚರಿಸುತ್ತಾರೆ.
ದೀಪ, ಪಟಾಕಿಗಳಿಲ್ಲದೇ ದೀಪಾವಳಿ ಹಬ್ಬ ಅಪೂರ್ಣ. ಆದರೆ, ಪಟಾಕಿ ಸಿಡಿಸುವಾಗ ತುಂಬಾ ಜಾಗರೂಕರಾಗಿರಿ. ಪಟಾಕಿ ಹೊಡೆಯುವುದು ಒಂದು ಕ್ಷಣಕ್ಕೆ ಖುಷಿ ಕೊಡುತ್ತದೆ. ಆದರೆ ನೀವು ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸದಿದ್ದರೆ ಅಪಘಾತಕ್ಕೆ ಕಾರಣವಾಗಬಹುದು.
ಪಟಾಕಿ ಸಿಡಿಸುವಾಗ ಕಣ್ಣಿಗೆ ಕಿಡಿ ಬಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ಪಟಾಕಿ ಸಿಡಿಸುವಾಗ ನಿಮ್ಮ ಕಣ್ಣಿಗೆ ಕಿಡಿ ಬಿದ್ದರೆ ಆಕಸ್ಮಿಕವಾಗಿಯಾದರೂ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಈ ಸಣ್ಣ ತಪ್ಪು ಕೂಡ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು. ದೀಪಾವಳಿಯಂದು ನೀವು ಪಟಾಕಿಗಳನ್ನು ಸಿಡಿಸುತ್ತಿದ್ದರೆ, ಸಿಡಿದ ನಂತರ ನಿಮ್ಮ ಕೈಗಳನ್ನು ಮತ್ತು ಮಕ್ಕಳ ಕೈಗಳನ್ನು ತೊಳೆಯಲು ಮರೆಯದಿರಿ. ಏಕೆಂದರೆ ಪಟಾಕಿ ತಯಾರಿಕೆಯಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಬಳಸುತ್ತಾರೆ.
ಪಟಾಕಿ ಸಿಡಿಸಿದ ಕೈಗಳಿಂದ ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ. ಅಂತಹ ಸ್ಪರ್ಶವು ಕಿರಿಕಿರಿ, ಕಣ್ಣು ತುರಿಕೆ, ಕೆಂಪು ಇತ್ಯಾದಿಗಳಿಗೆ ಕಾರಣವಾಗಬಹುದು. ಹಾಗಾಗಿ ಪಟಾಕಿ ಸಿಡಿಸುವಾಗ ಎಚ್ಚರ ತಪ್ಪಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.
ಪಟಾಕಿ ಸಿಡಿದಾಗ ಕಣ್ಣಿನ ಸಮಸ್ಯೆಯಾದರೆ ಮನೆಮದ್ದುಗಳನ್ನು ತಪ್ಪಿಸಿ. ತಕ್ಷಣ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ. ತಪ್ಪಾಗಿಯೂ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ.
ಕಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಕಣ್ಣಿನಲ್ಲಿ ಕಿಡಿ ಬಿದ್ದರೆ, ಮೊದಲು ತಣ್ಣೀರಿನಿಂದ ಕಣ್ಣನ್ನು ತೊಳೆಯಿರಿ. ಆ ನಂತರ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ ಎಂದು ತಜ್ಞರು ಎಚ್ಚರಿಸುತ್ತಾರೆ.
ಪಟಾಕಿ ಸಿಡಿಸುವಾಗ ಕನ್ನಡಕವನ್ನು ಕಡ್ಡಾಯವಾಗಿ ಧರಿಸಬೇಕು. ಇದು ಪಟಾಕಿಗಳ ಹೊಗೆ ಮತ್ತು ಕಿಡಿಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಅಲ್ಲದೆ ಪಟಾಕಿ ಸಿಡಿಸುವಾಗ ತುಂಬಾ ಜಾಗರೂಕರಾಗಿರಿ. ಕೈಯಿಂದ ಪಟಾಕಿ ಸಿಡಿಸಬೇಡಿ. ಮಕ್ಕಳನ್ನು ಒಂಟಿಯಾಗಿ ಪಟಾಕಿ ಸಿಡಿಸಲು ಬಿಡಬೇಡಿ.
ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.