ಮನೆ ಮದ್ದು: ಶಿವನಿಗೆ ಪ್ರಿಯವಾದ ತುಂಬೆ ಗಿಡದಲ್ಲಿದೆ ಆರೋಗ್ಯ, ಯಾವೆಲ್ಲ ಸಮಸ್ಯೆಗೆ ಉಪಯುಕ್ತ

tumbe plant: ತುಂಬೆ ಗಿಡ ನೋಡಲು ಚಿಕ್ಕದಾದರೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಗದ್ದೆಯಲ್ಲಿ, ಬಯಲಿನಲ್ಲಿ ಹೆಚ್ಚಾಗಿ ಕಾಣಸಿಗುವ ಈ ತುಂಬೆ ಗಿಡವು ಶಿವನಿಗೆ ಪ್ರಿಯವಾದ ಸಸ್ಯವಾಗಿದೆ. ಹಳ್ಳಿಯ ಕಡೆ ಹೋದರೆ ಗದ್ದೆಗಳಲ್ಲಿ ಹೆಚ್ಚಾಗಿ ಬಿಳಿ ಬಣ್ಣದ ಹೂಬಿಟ್ಟು ಕಂಗೊಳಿಸುವ ಈ ತುಂಬೆಗಿಡಗಳ ರಾಶಿಯನ್ನು ನೋಡುವುದೇ ಕಣ್ಣಿಗೆ ಆನಂದ. ರೋಗ ನಿವಾರಕ ಗುಣವನ್ನು ಹೊಂದಿರುವ ಈ ತುಂಬೆ ಗಿಡದ ಎಲೆಯನ್ನು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ.

ಮನೆ ಮದ್ದು: ಶಿವನಿಗೆ ಪ್ರಿಯವಾದ ತುಂಬೆ ಗಿಡದಲ್ಲಿದೆ ಆರೋಗ್ಯ, ಯಾವೆಲ್ಲ ಸಮಸ್ಯೆಗೆ ಉಪಯುಕ್ತ
ಸಾಂದರ್ಭಿಕ ಚಿತ್ರ
Edited By:

Updated on: Feb 13, 2024 | 6:40 PM

ಮೂರ್ತಿ ಚಿಕ್ಕದಾದರೂ ಕೀರ್ತಿ ಎನ್ನುವ ಗಾದೆ ಮಾತಿನಂತೆ ತುಂಬೆ ಗಿಡವು ನೋಡುವುದಕ್ಕೆ ಸಣ್ಣದಾಗಿ ಕಂಡರೂ ಆರೋಗ್ಯದ ವಿಚಾರದಲ್ಲಿ ದೊಡ್ಡದು. ಸಾಮಾನ್ಯವಾಗಿ ಕಳೆಯ ಗಿಡವೆಂದೇ ಕರೆಸಿಕೊಂಡರೂ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ. ಹಳ್ಳಿ ಕಡೆಗಳಲ್ಲಿ ಈ ತುಂಬೆ ಗಿಡದ ಎಲೆಯಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯವನ್ನು ಸರಿಪಡಿಸಲು ಬಳಸಲಾಗುತ್ತದೆ.

* ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ನೆಗಡಿಯು ಕಡಿಮೆಯಾಗುತ್ತದೆ.

* ತುಂಬೆ ಸೊಪ್ಪಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ಬೆನ್ನುನೋವು ಸಮಸ್ಯೆಯು ನಿವಾರಣೆಯಾಗುತ್ತದೆ.

* ತುಂಬೆ ಸೊಪ್ಪನ್ನು ಅರೆದು, ಅದಕ್ಕೆ ಹರಳೆಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಬೆರೆಸಿ ಬೆನ್ನು ನೋವಿರುವ ಜಾಗಕ್ಕೆ ಹಚ್ಚುತ್ತಿದ್ದರೆ ನೋವಿನ ಸಮಸ್ಯೆಯು ದೂರವಾಗುತ್ತದೆ.

* ಮಕ್ಕಳಲ್ಲಿ ಕಾಡುವ ಜಂತುಹುಳದ ಸಮಸ್ಯೆಗೆ ಜೇನು ತುಪ್ಪದೊಂದಿಗೆ ತುಂಬೆ ಹೂ ರಸವನ್ನು ಕುಡಿಸುವುದರಿಂದ ನಿವಾರಣೆಯಾಗುತ್ತದೆ.

* ತುಂಬೆಯ ಎಲೆಯನ್ನು ಚೆನ್ನಾಗಿ ಅರೆದು ಕಜ್ಜಿ ಇರುವ ಜಾಗಕ್ಕೆ ಹೆಚ್ಚುತ್ತಿದ್ದರೆ ಕಜ್ಜಿಯ ಸಮಸ್ಯೆ ಶಮನವಾಗುತ್ತದೆ.

* ತುಂಬೆ ಸೊಪ್ಪಿನಿಂದ ತಯಾರಿಸಿದ ಕಷಾಯಕ್ಕೆ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಕೀಲುನೋವಿಗೆ ರಾಮಬಾಣವಾಗಿದೆ.

* ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ ತುಂಬೆ ಎಲೆ ಚೆನ್ನಾಗಿ ಅರೆದು, ಅದಕ್ಕೆ ನಿಂಬೆರಸ ಎಳ್ಳೆಣ್ಣೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಪರಿಣಾಮಕಾರಿಯಾದ ಔಷಧಿ.

* ಜ್ವರವಿದ್ದಾಗ ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸುವುದರಿಂದ ಜ್ವರವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸಿಗರೇಟ್ ಶೇರಿಂಗ್ ಮಾಡುವ ಮುನ್ನ ಎಚ್ಚರ.. ಈ ರೋಗ ಕೂಡ ಶೇರ್​​​ ಆಗುತ್ತೆ!

* ತುಂಬೆ ರಸಕ್ಕೆ ನಿಂಬೆಹಣ್ಣಿನ ರಸ ಮತ್ತು ಉಪ್ಪನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಮುಟ್ಟಿನ ಸಮಯದಲ್ಲಿ ಸೇವಿಸುತ್ತಿದ್ದರೆ ಹೊಟ್ಟೆನೋವು ಗುಣ ಮುಖವಾಗುತ್ತದೆ.

* ವಿಪರೀತ ಬಾಯಾರಿಕೆಯು ಕಾಡುತ್ತಿದ್ದರೆ ತುಂಬೆ ಹೂವಿನ ಕಷಾಯ ಮಾಡಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.

* ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ತುಂಬೆ ಗಿಡದ ಕಾಂಡ ಮತ್ತು ಹೂವಿನ ಸಮೇತ ನೀರಿನಲ್ಲಿ ಚೆನ್ನಾಗಿ ಕುದಿಸಿ, ನೀರಿನ ಹಬೆಯನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.

* ತುಂಬೆ ಗಿಡದ ರಸಕ್ಕೆ ತಣ್ಣನೆಯ ನೀರು ಅಥವಾ ಹಾಲು ಸೇರಿಸಿ ಮುಖವನ್ನು ತೊಳೆಯುವುದರಿಂದ ಕಣ್ಣು ಉರಿ, ಡಾರ್ಕ್ ಸರ್ಕಲ್ ಸೇರಿದಂತೆ ಹಲವಾರು ಸಮಸ್ಯೆಗಳು ಶಮನವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us