Krishna Janmashtami 2024: ಕಷ್ಣನಿಗೆ ತನ್ನ ಪ್ರೀತಿ ಸಿಗದಿರಲು ತುಳಸಿಯ ಶಾಪ ಕಾರಣವೇ!

ತುಳಸಿ ಬಹಳಷ್ಟು ಔಷಧೀಯ ಗುಣಗಳಿರುವ ಸಸ್ಯ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪವಿತ್ರ ತುಳಸಿಯ ಜೀವನಗಾಥೆ ಮತ್ತಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಕಥೆಗಳು ಪದ್ಮ ಪುರಾಣ, ವಿಷ್ಣು ಪುರಾಣ ಸೇರಿದಂತೆ ಹಲವೆಡೆ ಬರುತ್ತದೆ. ಆದರೆ ಕೃಷ್ಣ ಜನ್ಮಾಷ್ಟಮಿಯ ಈ ಶುಭ ದಿನದಂದು ನಾವು ತುಳಸಿಯ ಜೀವನ, ಆಕೆಯ ಭಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಜೊತೆಗೆ ವೃಂದೆಯ ಶಾಪ, ವೃಂದಾ ದೇವಿ ತುಳಸಿಯಾಗಿ ಪ್ರಸಿದ್ದಿ ಪಡೆಯಲು ಕಾರಣವೇನು? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Krishna Janmashtami 2024: ಕಷ್ಣನಿಗೆ ತನ್ನ ಪ್ರೀತಿ ಸಿಗದಿರಲು ತುಳಸಿಯ ಶಾಪ ಕಾರಣವೇ!
ರಾಮ-ಸೀತೆ, ಕೃಷ್ಣ-ರಾಧೆ
Edited By:

Updated on: Aug 26, 2024 | 10:22 AM

ತುಳಸಿ ಬಹಳಷ್ಟು ಔಷಧೀಯ ಗುಣಗಳಿರುವ ಸಸ್ಯ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪವಿತ್ರ ತುಳಸಿಯ ಜೀವನಗಾಥೆ ಮತ್ತಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಕಥೆಗಳು ಪದ್ಮ ಪುರಾಣ, ವಿಷ್ಣು ಪುರಾಣ ಸೇರಿದಂತೆ ಹಲವೆಡೆ ಬರುತ್ತದೆ. ಆದರೆ ಕೃಷ್ಣ ಜನ್ಮಾಷ್ಟಮಿಯ ಈ ಶುಭ ದಿನದಂದು ನಾವು ತುಳಸಿಯ ಜೀವನ, ಆಕೆಯ ಭಕ್ತಿಯ ಬಗ್ಗೆ ತಿಳಿದುಕೊಳ್ಳೋಣ.

ವೃಂದಾ ದೇವಿ- ಜಲಂಧರರ ವಿವಾಹ

ವೃಂದಾ ದೇವಿ ಧರ್ಮಧ್ವಜನ ಮಗಳು. ಈತ ಮಹಾ ಶಿವಭಕ್ತ. ತಂದೆಯಂತೆ ಮಗಳೂ ಕೂಡ ಶಿವ- ಪಾರ್ವತಿಯರ ಪರಮಭಕ್ತೆ. ಈಕೆ ಸುದೀರ್ಘ ಕಾಲ ತಪಸ್ಸು ಮಾಡಿ ಪಾರ್ವತಿಯನ್ನು ಒಲಿಸಿಕೊಳ್ಳುತ್ತಾಳೆ. ಆಕೆ ಪ್ರತ್ಯಕ್ಷಳಾಗಿ “ಯಾವ ವರ ಬೇಕು” ಎಂದು ಕೇಳಿದಾಗ “ನಾನು ಪತಿವ್ರತೆಯಾಗಿರುವಷ್ಟು ಕಾಲ ನನ್ನ ಗಂಡ ಅಜೇಯನಾಗಿರಲಿ” ಎಂದು ಬೇಡಿಕೊಳ್ಳುತ್ತಾಳೆ. ವೃಂದಾ ದೇವಿಗೆ ತನ್ನ ಪಾತಿವ್ರತ್ಯದ ಮೇಲೆ ಅಷ್ಟೊಂದು ವಿಶ್ವಾಸ. ಪಾರ್ವತಿ ದೇವಿ ಆಕೆಯ ತಪಸ್ಸಿಗೆ ಮೆಚ್ಚಿ ವರ ನೀಡುತ್ತಾಳೆ. ಇದೇ ವೇಳೆಗೆ ಶಿವ ಹಣೆಗಣ್ಣ ಬೆಂಕಿ, ಸಮುದ್ರದ ನೀರಿನಲ್ಲಿ ಬಿದ್ದು ಅಗ್ನಿ ತತ್ತ್ವ – ಜಲ ತತ್ತ್ವಗಳ ಎರಡು ತದ್ವಿರುದ್ಧ ಊರ್ಜೆಗಳ ಮಿಲನದಿಂದ ‘ಜಲಂಧರ’ ಜನಿಸಿರುತ್ತಾನೆ. ಸಮುದ್ರ ರಾಜ ಈತನನ್ನು ಸಾಕಿ ತಂದೆಯಾಗಿರುತ್ತಾನೆ. ಈ ಜಲಂಧರ ಮಹಾ ಶಕ್ತಿಶಾಲಿ ಜೊತೆಗೆ ಶಿವನಂತಹ ತೋರುವ ದೇಹ, ಮೈಬಣ್ಣವನ್ನು ಹೊಂದಿರುತ್ತಾನೆ. ಈತ ಪಾರ್ವತಿಯನ್ನು ಕಂಡು ಮೋಹಗೊಳ್ಳುತ್ತಾನೆ. ಹೇಗಾದರೂ ಆಕೆಯನ್ನು ಪಡೆದೇ ತೀರಬೇಕೆಂದು ಬಯಸುತ್ತಾನೆ. ಇದನ್ನರಿತ ಶುಕ್ರಾಚಾರ್ಯರು ಜಲಂಧರನನ್ನು ಕುರಿತು, “ವೃಂದೆಯನ್ನು ವಿವಾಹವಾಗಿ ಅಜೇಯ ಮತ್ತು ಅಮರತ್ವದ ಬಲ ಪಡೆದುಕೋ. ಆಕೆ ಪತಿವ್ರತೆಯಾಗಿರುವವರೆಗೂ ನಿನಗೆ ಅಳಿವಿಲ್ಲ.” ಎಂದು ಸಲಹೆ ನೀಡುತ್ತಾರೆ. ವೃಂದೆಯನ್ನು ಮದುವೆಯಾಗಿ ಅವಳ ಮೂಲಕ ಮತ್ತಷ್ಟು ಬಲ ಪಡೆದು ಶಿವನೊಡನೆ ಹೋರಾಡಿ ಪಾರ್ವತಿಯನ್ನು ಪಡೆಯಬಹುದು ಎಂದು ಆಲೋಚಿಸುವ ಜಲಂಧರ ಅದಕ್ಕೊಪ್ಪುತ್ತಾನೆ. ಈ ರೀತಿಯಾಗಿ ವೃಂದಾದೇವಿ ಮತ್ತು ಜಲಂಧರರ ಮದುವೆ ನಡೆಯುತ್ತದೆ.

ಕೆಲ ಕಾಲಾನಂತರ ಜಲಂಧರ ಶಿವನ ಮೇಲೆ ಯುದ್ಧ ಘೋಷಿಸುತ್ತಾನೆ. ವೃಂದಾ ದೇವಿಯ ಪಾತಿವ್ರತ್ಯ ಮತ್ತು ಪಾರ್ವತಿ ಆಕೆಗೆ ನಿಡಿದ್ದ ವರಗಳ ಪರಿಣಾಮ ಆತ ಸೋಲುವುದಿಲ್ಲ. ಶಿವನೂ ಸೋಲಲಾರ. ಇವರಿಬ್ಬರಿಂದ ಸೃಷ್ಟಿಯ ಸಮತೋಲನವೇ ತಪ್ಪತೊಡಗುತ್ತದೆ. ಆಗ ಸ್ಥಿತಿಕರ್ತನಾದ ಮಹಾವಿಷ್ಣು ಸೃಷ್ಟಿಯ ಸಮತೋಲನ ಕಾಪಾಡಲು ಜಲಂಧರನಂತೆ ವೇಷ ಮರೆಸಿಕೊಂಡು ವೃಂದೆಯ ಬಳಿಗೆ ಹೋಗುತ್ತಾನೆ. ಇದರಿಂದ ಆಕೆಯ ಪಾತಿವ್ರತ್ಯ ಭಂಗವಾಗುತ್ತದೆ. ಇತ್ತ ಜಲಂಧರ ಸೋತು, ಮಹಾದೇವನ ತ್ರಿಶೂಲಕ್ಕೆ ಬಲಿಯಾಗುತ್ತಾನೆ. ವೃಂದೆ ತನ್ನ ಬಳಿ ಬಂದವ ವಿಷ್ಣು ಎಂದು ತಿಳಿದು, ಚಿತೆಗೆ ಧುಮುಕುತ್ತಾಳೆ.

ಇದನ್ನೂ ಓದಿ: ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಶ್ರೀಕೃಷ್ಣನ ಸಂದೇಶಗಳಿವು

ವೃಂದೆಯ ಶಾಪ

ವಿಷ್ಣುವಿನ ಮೇಲಿನ ಕೋಪದಿಂದ “ನಿನ್ನ ಹೆಂಡತಿಯ ಪಾತಿವ್ರತ್ಯವನ್ನೂ ಯಾರಾದರೊಬ್ಬರು ಭಂಗ ಪಡಿಸಲಿ” ಎಂದು ಶಪಿಸುತ್ತಾಳೆ. ಆಗ ಲಕ್ಷ್ಮೀ ದೇವಿ ವೃಂದೆಯ ಬಳಿ ಬಂದು ಗಂಡನ ಪರವಾಗಿ ಕ್ಷಮೆ ಬೇಡುತ್ತಾಳೆ. ಅದೇ ವೇಳೆಗೆ ಶಿವ ಪ್ರತ್ಯಕ್ಷನಾಗಿ ಜಲಂಧರನ ಪಾಪಕರ್ಮಗಳ ಬಗ್ಗೆ ವೃಂದೆಗೆ ತಿಳಿಸುತ್ತಾನೆ. ಶಿವನ ಮಾತು ಆಕೆ ನೋಡುಕೊಳ್ಳುವಂತೆ ಮಾಡುತ್ತದೆ. ಮತ್ತೊಂದು ಹೆಣ್ಣನ್ನು ಮೋಹಿಸಿದ, ಅದರಲ್ಲೂ ತನ್ನ ಆರಾಧ್ಯಳೂ ಜಗಜ್ಜನನಿಯೂ ಆದ ಪಾರ್ವತಿಯನ್ನೇ ಕಾಮಿಸಲು ಬಯಸಿದ ಜಲಂಧರನ ಬಗ್ಗೆ ಅವಳಲ್ಲಿ ತಾತ್ಸಾರ ಮೂಡುತ್ತದೆ. ವಿಷ್ಣು ಮಾಡಿದ್ದು ತಪ್ಪೇ ಆಗಿದ್ದರೂ ತನ್ನ ಶಾಪವನ್ನು ಸ್ವಲ್ಪ ನಯಗೊಳಿಸಿ, “ನಿನ್ನ ಪತ್ನಿಗೆ ಕೇವಲ ಆಪಾದನೆ ತಗುಲಲಿ, ಅದರ ಕಷ್ಟವನ್ನು ನೀನು ಅನುಭವಿಸುವಂತಾಗಲಿ” ಎನ್ನುತ್ತಾಳೆ. ಜೊತೆಗೆ ನನ್ನ ಪಾತಿವ್ರತ್ಯವನ್ನು ಹಾಳು ಮಾಡಿದ್ದಕ್ಕಾಗಿ ನನಗೆ ನಿನ್ನ ಪತ್ನಿಯ ಸ್ಥಾನ ಕೊಡಬೇಕು ಎಂದು ಕರಾರು ಹಾಕುತ್ತಾಳೆ. ಹಾಗಾಗಿ ಮಹಾವಿಷ್ಣು ಆಕೆಯನ್ನು ಎದೆಯ ಮೇಲೆ ಧರಿಸಿ “ನೀನು ಸದಾ ಅತ್ಯಂತ ಪವಿತ್ರಳೆಂಬ ಮನ್ನಣೆಗೆ ಪಾತ್ರಳಾಗುವಂತಾಗಲಿ” ಎಂದು ಹರಸುತ್ತಾನೆ ಮುಂದೆ ರಾಮಾವತಾರದಲ್ಲಿ ಸೀತಾಪಹರಣದ ಮೂಲಕ ತುಳಸಿಯ ಶಾಪ ನಿಜವಾಗುತ್ತದೆ. ಕೃಷ್ಣಾವತಾರದಲ್ಲಿ ಮಹಾವಿಷ್ಣು ವೃಂದೆಯನ್ನು ಮದುವೆಯಾಗಿ ತನ್ನ ಪತ್ನಿಯ ಸ್ಥಾನ ನೀಡುತ್ತಾನೆ. ಹೀಗೆ ವೃಂದಾ ದೇವಿ ತುಳಸಿಯಾಗಿ ಲೋಕದಲ್ಲಿ ಪ್ರಸಿದ್ದಿ ಪಡೆಯುತ್ತಾಳೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us