Literature: ನೆರೆನಾಡ ನುಡಿಯೊಳಗಾಡಿ; ದೇವರನ್ನು ವಿವಾಹವಾದರೆ, ತನ್ನ ಅಗತ್ಯಕ್ಕೆ ಅವನನ್ನು ಕರೆಯಬಾರದೇ?

Indraneela Story by A. Vennila : ಮುಡಿದುಕೊಟ್ಟ ಸೊಡರು ಬಳ್ಳಿಯಾದ ಆಂಡಾಳ್, ಶ್ರೀರಂಗನೊಂದಿಗೆ ತನ್ನ ಯೌವನ ಉಕ್ಕುವ ದೇಹದೊಂದಿಗೆ ಶರಣಾದಳಲ್ಲಾ? ಕಾಮದ ರುಚಿಯ ನಾಲಿಗೆಗಳು ಅವಳನ್ನು ಕೆರಳಿಸಿ, ಶ್ರೀರಂಗನ ದೇಹದೊಂದಿಗೆ ಬೆರೆತು ಹೋಯಿತೋ?

Literature: ನೆರೆನಾಡ ನುಡಿಯೊಳಗಾಡಿ; ದೇವರನ್ನು ವಿವಾಹವಾದರೆ, ತನ್ನ ಅಗತ್ಯಕ್ಕೆ ಅವನನ್ನು ಕರೆಯಬಾರದೇ?
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ

Updated on: Mar 18, 2022 | 2:39 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಬಯಸಿ ಒಪ್ಪಿಕೊಂಡ ಗಂಡನ ಬಳಿ ಹುಡುಕಿಕೊಂಡು ಹೋಗುವುದರಲ್ಲಿ ಏನು ತಪ್ಪು? ಕಣ್ಣನ ಗುಣ ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಕೊಡುತ್ತಾನೆ. ಕೊಡುತ್ತಿದ್ದಾನಲ್ಲಾ ಎಂದು ತೆಗೆದುಕೊಂಡರೆ ಕಿತ್ತುಕೊಳ್ಳುತ್ತಾನೆ. ಅವನು ಬಯಸಿ ಕೂಡಿರುವ ಸಮಯಗಳಲ್ಲಿ, ನನ್ನ ದೇಹ ಸಿದ್ಧವಾದರೆ ಬಳುಕಿ ಬಗ್ಗಿಹೋಗಬಾರದು. ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಮುಗಿದ ತಕ್ಷಣ ಎದ್ದು ಹೋಗುವವನನ್ನು ಕೈಹಿಡಿದು ಎಳೆದರೆ, ಕೊಸರಿಕೊಂಡು ಹೋಗಿಬಿಡುತ್ತಾನೆ. ಅವನ ಬಯಕೆ ಮಾತ್ರ ನನಗೆ ಕಾಮ. ನನ್ನ ದೇಹಕ್ಕೆಂದು ಪ್ರತ್ಯೇಕವಾಗಿ ಕಾಮವಿಲ್ಲ. ತುಂಬಿದ ನೀರಿನ ನೆಲೆಯಂತೆ ರಾತ್ರಿ ಪೂರ್ತಿ ತುಳುಕುತ್ತಿತ್ತು. ತವಕದ ನೋವು ತಿಳಿಯದ ರಾತ್ರಿ. ಎರಡು ಗಂಟೆ, ಮೂರು ಗಂಟೆಯಾಗಿ ಸಾಗುತ್ತಿತ್ತು. ಪರಿಮಳ ಪುಷ್ಪದಂತೆ ಸುಗಂಧ ಹರಡಿದ ದೇಹದ ಅರಳುವಿಕೆಯನ್ನು ನಾನು ಸಂಪೂರ್ಣವಾಗಿ ದರ್ಶನ ಮಾಡಿದೆ. ಕಣ್ಣನನ್ನು ಮರೆತುಹೋದೆ. ಕಾಮದಲ್ಲಿ ಸೆಟೆದು ನಿಂತ ದೇಹ ಪ್ರಕೃತಿಯ ವಿಸ್ಮಯ. ಹೆಡೆ ಬಿಚ್ಚಿ ಆಡುವ ನಾಗದಂತೆ, ದೇಹ ಬಯಸಿ ಕಾಮಕ್ಕೆ ಸಿದ್ಧವಾಗಿ ನಿಂತ ವಿಸ್ಮಯವನ್ನು ನಾನು ಇಂದು ರಾತ್ರಿ ದರ್ಶನ ಮಾಡಿದೆ.

 

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 11)

ಬೆಳಗಾಯಿತು.
ಶಪಿಸಿದ ದೇಹದಂತೆ ಸೊರಗಿ ಹೋಗಿರಲಿಲ್ಲ. ಆಶೀರ್ವಾದಿಸಲ್ಪಟ್ಟ ದೇಹವಾಗಿ, ಗೆಲುವಿನಿಂದ ಇತ್ತು. ದೇಹ ಬಹಳ ಮುಖ್ಯವಾಗಿ ಕಂಡಿತು. ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ ಹೆಚ್ಚಾಯಿತು. ಈ ದೇಹಕ್ಕಾಗಿ ಏನನ್ನೂ ಮಾಡಲಿಲ್ಲವಲ್ಲ. ಹಸಿವಿಗೆ ಹೊಟ್ಟೆಗೆ ಅನ್ನ. ಮರ್ಯಾದೆಗೆ ಬಟ್ಟೆ. ದೇಹದ ಯಾವ ಭಾಗವಾದರೂ ಹಾಳಾದರೆ ಚಿಕಿತ್ಸೆ.

ಪ್ರಾಣಕ್ಕೆ ರೂಪ ಕೊಟ್ಟರೂ, ದೇಹಕ್ಕೆ ಅಲ್ಲವೇ ಭಾವನೆಗಳು. ಮನಸ್ಸು ದುಃಖಪಡುತ್ತದೆ. ಕಣ್ಣುಗಳಲ್ಲವೇ ಕಣ್ಣೀರನ್ನು ಸುರಿಸುತ್ತದೆ. ನಿಮಿಷಕ್ಕೊಂದು ಅವತಾರ ತಾಳುವ ಮನಸ್ಸಿನ ಅವಸ್ಥೆಗಳನ್ನು ದೇಹ ತಡೆದುಕೊಳ್ಳುತ್ತದೆ. ಮೆದುಳು ಹಾಕುವ ಕಟ್ಟಳೆಗಳನ್ನು ದಿನಪೂರ್ತಿ ಕೇಳುತ್ತದೆ. ನಡೆಯುತ್ತದೆ. ಕೂರುತ್ತದೆ. ಬಗ್ಗುತ್ತದೆ. ನಗುತ್ತದೆ. ಹಸಿವು ಹಿಂಗಿಸುತ್ತದೆ. ತ್ಯಾಜ್ಯಗಳನ್ನು ಹೊರಹಾಕುತ್ತದೆ. ದಣಿವು ಹೋಗಲು ನಿದ್ರಿಸುತ್ತದೆ. ಚಾಲನೆ ನೀಡಿದ ತಕ್ಷಣ ಹೊಂದಿಕೊಳ್ಳುವ ಯಂತ್ರ ಮನಸ್ಸು, ಮೆದುಳು ಎಂಬ ಎರಡು ರಾಕ್ಷಸರ ಕೆಲಸದಾಳಾಗಿ ತತ್ತರಿಸುವ ದೇಹ ತನಗಾಗಿ ಏನನ್ನಾದರೂ ಕೇಳುತ್ತದೆಯೇ? ನಗು ತುಟಿಯಲ್ಲೇ ನಿಂತು ಹೋಗುತ್ತದೆ. ಅಳು ಕಣ್ಣುಗಳೊಂದಿಗೆ ಮುಗಿದು ಹೊಗುತ್ತದೆ. ಹೊರನೋಟಕ್ಕೆ ಉಳಿದವರನ್ನು ಗಮನಿಸುವಂತೆ ಮಾಡುತ್ತದೆ.

ಪೂರ್ತಿ ದೇಹ ಹೂವಿನಂತೆ ಅರಳಿ ನಿಂತು ಹರುಷಗೊಳ್ಳಲು, ದೇಹಕ್ಕೆ ಕಾಮ ಅಗತ್ಯ. ಗರ್ಭಗುಡಿಯಲ್ಲಿ ಅಲಂಕಾರಭೂಷಿತಳಾಗಿ ಇರುವ ಕುಜ್ಹಲ್ವಾಯ್ ಮೊಜ್ಹಿಯ ರೂಪದಂತೆ ಕಾಮ ಸಂಪೂರ್ಣವಾಗಿ ನನ್ನೊಳಗೆ ಹೊಮ್ಮಿತು. ಗರ್ಭಗುಡಿಯಲ್ಲಿ ಕತ್ತಲೂ, ತುಪ್ಪದ ದೀಪದ ಪರಿಮಳವೂ, ವಿಭೂತಿಯ ವಾಸನೆಯೂ, ಅಭಿಷೇಕ ವಸ್ತುಗಳ ಸಮಗ್ರ ಸುಗಂಧವೂ ಕುಜ್ಹಲ್ವಾಯ್ ಮೊಜ್ಹಿಯ ತುಟಿಯಂಚಿನಲ್ಲಿ ಮಿಂಚುವ ಮುಗುಳ್ನಗೆಯೂ ನನ್ನನ್ನು ಮರೆಯುವಂತೆ ಮಾಡುತ್ತದೆ. ಕೆಲವು ಕ್ಷಣ ತತ್ತರಿಸುತ್ತೇನೆ . ಎಲ್ಲಿದ್ದೇನೆ ಎಂದು ತಿಳಿಯದ ಒಂದು ಕೊನೆ ಮೊದಲಿಲ್ಲದ ಕಾಲದೊಳಗೆ ನುಸುಳುತ್ತೇನೆ. ಕಾಮದ ಬಾಗಿಲೂ ಹಾಗೆಯೇ ತೆರೆದುಕೊಂಡಿದೆ.

ಭಾಗ 9 : Literature: ನೆರೆನಾಡ ನುಡಿಯೊಳಗಾಡಿ; ಮುತ್ತೇ ಕೊಟ್ಟುಕೊಳ್ಳದೆ ನಾವಿಬ್ಬರೂ ಒಂದಾಗಿ ಕೂಡಿದ್ದೇವೆಯೇ?

ಮುಡಿದುಕೊಟ್ಟ ಸೊಡರು ಬಳ್ಳಿಯಾದ ಆಂಡಾಳ್, ಶ್ರೀರಂಗನೊಂದಿಗೆ ತನ್ನ ಯೌವನ ಉಕ್ಕುವ ದೇಹದೊಂದಿಗೆ ಶರಣಾದಳಲ್ಲಾ? ಕಾಮದ ರುಚಿಯ ನಾಲಿಗೆಗಳು ಅವಳನ್ನು ಕೆರಳಿಸಿ, ಶ್ರೀರಂಗನ ದೇಹದೊಂದಿಗೆ ಬೆರೆತು ಹೋಯಿತೋ? ದೇವರನ್ನು ವಿವಾಹವಾದರೆ, ತನ್ನ ಅಗತ್ಯಕ್ಕೆ ಅವನನ್ನು ಕರೆಯಬಾರದೇ? ಎಲ್ಲ ಅರಿತ ಭಗವಂತ ತನ್ನ ಸಖಿಯ ಕಾಮವನ್ನು ತಿಳಿದು ಆಗತ್ಯವಾದುದನ್ನು ನೀಡುತ್ತಾನೆಯೇ? ಕಣ್ಣನ ಹಾಗೆ ಶ್ರೀರಂಗ ಅರ್ಧದಲ್ಲಿ ಎದ್ದು ಹೋಗುವುದಿಲ್ಲ. ಅರೆಕೊರೆಯಾಗಿ ಮುಗಿಸುವುದಿಲ್ಲ. ಸಖಿಯ ತೃಪ್ತಿಯ ಬಗ್ಗೆ ಕೇಳುತ್ತಾನೆ.
ಆಂಡಾಳ್ ಶ್ರೀರಂಗನ ಬಳಿ ಕಂಡದ್ದು ಎಲ್ಲೆ ಇಲ್ಲದ ಕಾಮವನ್ನೇ? ಅವಳು ಮುಡಿದುಕೊಟ್ಟ ಹೂಮಾಲೆಗಳ ಮೂಲಕ, ತನ್ನ ದೇಹದ ಘಮಲನ್ನು ಅವನಿಗೆ ಕಳುಹಿಸಿ ಕೊಟ್ಟಳೋ?

ಹೂಮಾಲೆಯಂತೆ ಅವಳ ದೇಹವನ್ನೂ ಅವನು ಸಂಪೂರ್ಣವಾಗಿ ಮುಡಿದುಕೊಂಡನೋ? ಶ್ರೀರಂಗನ ಗರ್ಭಗುಡಿ ಆಂಡಾಳಿಗೆ ಶಯನಗೃಹ. ಅಂಡಾಳಿನ ಸೆಟೆದು ನಿಂತ ಸ್ತನಗಳು ಶ್ರೀರಂಗನ ಕೈಸೋಕಿ ಅಡಗಿದವೇ?
ಕಾಮದ ರುಚಿಯನ್ನು ಅರಿಯಲು ತುಟಿಗಳು ಮೊದಲು ಸಿದ್ದವಾದರೂ, ಸ್ತನಗಳೇ ತಾಪವನ್ನು ಹೊತ್ತು ಮೇಲೇಳುತ್ತವೆ. ಸಡಿಲವಾಗಿ, ಬಾಡಿರುವ ಮೊಲೆಗಳು , ನಿನ್ನೆಯಿಂದ ಸೆಟೆದು ನಿಂತಿವೆ. ಆ ಕ್ಷಣ ಕೂಡಿ ಸ್ಪರ್ಶಕ್ಕೆ ಬೇಕಾದ ಕಿಚ್ಚಿನಿಂದ ಕಾಯುತ್ತಿವೆ. ಕಣ್ಣ ಮೆಲ್ಲಗೆ ಒಮ್ಮೆ ಅದುಮುತ್ತಾನೆ. ಯಾಳಿನಿ ಹುಟ್ಟಿದಾಗಲೂ ಕಿಚ್ಚಿನಿಂದಲೇ ಇದ್ದ. ಒಂದು ಕಡೆ ಯಾಳಿನಿ ಹಾಲು ಕುಡಿದರೆ, ಇವನು ಮತ್ತೊಂದು ಕಡೆ. ನನಗೆ ಅಲ್ಲವೇ ಮೊದಲು ಎನ್ನುತ್ತಾನೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 10 : Literature: ನೆರೆನಾಡ ನುಡಿಯೊಳಗಾಡಿ; ಕಾಗೆಎಂಜಲು ಮಾಡುವ ಅವನು ಈ ದೇಹವನ್ನು ಅರಿತುಕೊಳ್ಳುತ್ತಾನೋ?

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

 

Follow Us