AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ‘ನಾನೇ ದೂರ, ನಾ ಇವರ ಪರಿಧಿಯೊಳಗೇ ಇಲ್ಲಾ’

Vijaya Brahmankar’s Marathi Short Story : ಆ ಕ್ಷಣದಲ್ಲಿ ಅಜ್ಜಿಗೆ ತಾನು ಅತ್ಯಂತ ಒಬ್ಬಂಟಿ, ಅನಾಥೆ ಎಂದೆನ್ನಿಸಿ ಉಮ್ಮಳಿಸಿ ಬಂದಿತ್ತು. ಬೆಂಚಿನ ಮೇಲೆ ಕುಸಿದು ಕುಳಿತಿದ್ದರು. ಕಣ್ಣುಗಳಿಂದ ನೀರು ಉದುರಿದ್ದವು. ಗಲ್ಲದ ಮೇಲಿನ ಸುಕ್ಕುಗಳಿಂದಾಗಿ ಅವು ಕೆಳಕ್ಕೆ ಜಾರಿರಲಿಲ್ಲ.

Literature: ನೆರೆನಾಡ ನುಡಿಯೊಳಗಾಡಿ; ‘ನಾನೇ ದೂರ, ನಾ ಇವರ ಪರಿಧಿಯೊಳಗೇ ಇಲ್ಲಾ’
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
ಶ್ರೀದೇವಿ ಕಳಸದ
|

Updated on:Apr 08, 2022 | 3:05 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಅಲ್ಲದೆ ಮಾವಶೀ, ನನ್ನ ಅವ್ವನಿಗೆ ಅಂತ ನಾನು ಏನೂ ಮಾಡಿಲ್ಲಾಂತ ನನಗೂ ಅನಸಬಾರದಲ್ಲಾ..” ಎದುರಿನ ಬಾಗಿಲಿನ ಗೋಡೆಯ ಮೇಲೆ -‘ಈ ಜೀವನ ಮತ್ತೆ ಸಿಕ್ಕದು’ ಎಂದು ಬರೆದಿತ್ತು. ಅದನ್ನು ಓದಿದ ಮಾನಸಿಯು ಗದ್ಗದಿತಳಾಗಿದ್ದಳು. ಮತ್ತೆ ತನ್ನನ್ನು ತಾನು ಸಂಭಾಳಿಸಿಕೊಂಡು ಬಾಗಿಲಿನಿಂದಾಚೆ ಬಂದಿದ್ದಳು. ಮಾನಸಿಯ ತಾಯಿ ಹಾಗೂ ಅಜ್ಜಿ ಇಬ್ಬರೂ ಎದುರಿಗಿನ ಬೆಂಚಿನ ಮೇಲೆ ಕುಳಿತಿದ್ದರು. ಮಗುವನ್ನು ಕರೆದುಕೊಂಡು ಮಾನಸಿಯು ಅಲ್ಲಿಗೇ ಹೋಗಿದ್ದಳು. ಅವರಿಬ್ಬರ ಇಳಿದುಹೋಗಿದ್ದ ಮುಖಗಳನ್ನು ನೋಡಿದ ಅವಳು ನಕ್ಕು, “ಮಾವಶೀ, ನಿಮಗ ಒಂದು ಮಾತು ಹೇಳಲಿಕ್ಕೆ ಮರೆತೆ. ಇವರಿಬ್ಬರೂ ಒಬ್ಬರಿಗೊಬ್ಬರು ಇನ್ನೂ ತವರುಮನೀ ಮಾಡೋದರಾಗನ ಇದ್ದಾರ! ಇಬ್ಬರೂ ಒಬ್ಬರಿನ್ನೊಬ್ಬರ ಹತ್ತಿರಾನೇ ಇದ್ದಾರ ಈಗೂ.. ನಾನೇ ದೂರ.. ನಾ ಇವರ ಪರಿಧಿಯೊಳಗೇ ಇಲ್ಲಾ..” ಎಂದು ಚೇಷ್ಟೆ ಮಾಡಿದ್ದಳು.

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 8)

“ಏನೇನರೆ ಹೇಳಬ್ಯಾಡ ಮಾನಸಿ. ನೀ ನಮ್ಮಿಬ್ಬರ ದೃಷ್ಟಿ ಇದ್ದಂಗ. ನಮ್ಮ ಆಶಾದೀಪ ನೀ.. ನಮ್ಮ ಜೀವನದ ಏಕೈಕ ಶಕ್ತಿ ನೀ. ಈಗ ಬಂದದಲಾ ಈ ಪುಟ್ಟಮರಿ, ಇದಂತೂ ನಮ್ಮ ಜೀವನದ ಆನಂದಾನ!” ಅಜ್ಜಿ ಹೇಳಿದಾಗ ಎಲ್ಲರೂ ನಕ್ಕಿದ್ದರು. ಮನಸ್ವಿನಿ ಕೂಡ ನಗುತ್ತ ನಂದಾತಾಯಿಯ ಕಡೆಗೆ ನೋಡಿದ್ದಳು. ಮರಣದ ಬಾಗಿಲಲ್ಲಿ ನಿಂತು ನಗುತ್ತಿದ್ದ ಮನಸ್ವಿನಿಯತ್ತ ನಂದಾತಾಯಿಯೂ ದೀರ್ಘವಾಗಿ ನಿಟ್ಟಿಸುತ್ತ “ಮತ್ತೆ ಬರ್ರಿ” ಎಂದಿದ್ದರು.

“ಬರೋಣ..” ಎಂದು ಮಾನಸಿಯು ಆಶೆಯ ದೀಪವನ್ನು ಹಚ್ಚಿದ್ದಳು. “ನಡೀ..” ಮಾನಸಿಯು ಅವ್ವನಿಗೆ ಹೇಳಿದ್ದಳು. “ಅಜ್ಜೀ, ಬರತೇವಿ..” ಅಜ್ಜಿಯ ಕಾಲಿಗೆ ಮಗುವಿನೊಂದಿಗೆ ಬಗ್ಗೆ ನಮಸ್ಕರಿಸಿದ್ದಳು ಮಾನಸಿ. “ಅಜ್ಜೀ, ಸಂಭಾಳಿಸ್ಕೊಂಡು ಇರು.. ನಿನ್ನ ನೆನಪು ನಮಗೆಲ್ಲಾ ಭಾಳ ಆಗತದ. ನಾನು ಬಂದು ನಿನ್ನ ಕರಕೊಂಡು ಹೋಗತೇನಿ..” “ಬಾರವಾ.. ನನ್ನ ಜೇನಿನ ಹನಿ ನೀನು.. ” ಮಾನಸಿಯ ಬೆನ್ನ ಮೇಲೆ ಕೈಯಾಡಿಸುತ್ತ ಅಜ್ಜಿ ಹೇಳಿದ್ದರು. ಮಗುವನ್ನು ಮುದ್ದಿಸಿದ್ದರು. ಕೂಸಿನ ಕಡೆ ಲಕ್ಷ್ಯ ಇರಲಿ ಅಂತನೂ ಹೇಳಿದ್ದರು.

ಮಾನಸಿಗೆ ನಿಜ ಹೇಳಬೇಕೆಂದರೆ ಅಜ್ಜಿಯದೇ ಚಿಂತೆಯಾಗಿತ್ತು. “ಈಗ, ಈ ವಯಸ್ಸಿನಲ್ಲಿ, ಹೊಸ ಜಾಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಎಷ್ಟು ಕಠಿಣ.. ಆದರೂ ಅಜ್ಜಿ ಏನೂ ತಕರಾರು ತಗಿಯಲಿಲ್ಲ. ಹಟ ಮಾಡಲಿಲ್ಲ. ಯಾಕೆ? ಎಂದೂ ಕೇಳಲಿಲ್ಲ. ಥ್ಯಾಂಕ್ಸ್ ಅಜ್ಜೀ. ನಿನ್ನ ತಿಳಿವಳಿಕೆಯಿಂದಾಗಿ ಇವತ್ತ ನನ್ನ ಕೆಲಸ ಹಗುರ ಆತು.. ಆದರ ನಾ ಬರತೇನಿ.. ಖಂಡಿತವಾಗಿಯೂ ಬರತೇನಿ. ಇದು ನನ್ನೊಂದಿಗೇ ನನ್ನ ಕಮಿಟ್‍ಮೆಂಟು.. ಬದ್ಧತೆ..” “ಮನೂ, ನಿನ್ನ ಆರೋಗ್ಯದ ಕಡೆಗೆ ಲಕ್ಷ್ಯ ಇರಲಿ..” ಅಜ್ಜಿಯ ಧ್ವನಿ ನಡುಗಿತ್ತು.

ಡ್ರೈವರನು ಕಾರಿನ ಬಾಗಿಲನ್ನು ತೆರೆದಿದ್ದನು. ಭಾರವಾದ ಹೆಜ್ಜೆಗಳನ್ನು ಇರಿಸುತ್ತ ಮನಸ್ವಿನಿಯು ಕಾರಿನ ಹತ್ತಿರಕ್ಕೆ ಹೋಗಿದ್ದಳು. ಕಾರಿನಲ್ಲಿ ಕುಳಿತಿದ್ದಳು. ಮಗುವನ್ನ ಎತ್ತಿಕೊಂಡು ಮಾನಸಿಯೂ ಕುಳಿತಳು. ಕಿಟಕಿಯ ಗ್ಲಾಸನ್ನು ಕೆಳಗೆ ಇಳಿಸಿದ್ದಳು. ಅಜ್ಜಿಯತ್ತ ಕೈ ಬೀಸಿದ್ದಳು. ಅಜ್ಜಿಯೂ ನಿಂತುಕೊಂಡು ತನ್ನ ಕೃಶವಾದ ಕೈಯನ್ನು ಬೀಸಿದ್ದಳು. ಆಗ ಅಜ್ಜಿಯ ಕಣ್ಣುಗಳ ತುಂಬ ದುಃಖವೇ ತುಂಬಿತ್ತು. ಕಾರು ಹೊರಟಿತ್ತು. ದೃಷ್ಟಿಯಿಂದ ದೂರವಾಗಿತ್ತು. ಆ ಕ್ಷಣದಲ್ಲಿ ಅಜ್ಜಿಗೆ ತಾನು ಅತ್ಯಂತ ಒಬ್ಬಂಟಿ, ಅನಾಥೆ ಎಂಬ ಸಂಕಟ ಉಮ್ಮಳಿಸಿ ಬಂದಿತ್ತು. ಅವರು ಬೆಂಚಿನ ಮೇಲೆ ಕುಸಿದು ಕುಳಿತಿದ್ದರು. ಕಣ್ಣುಗಳಿಂದ ನೀರು ಉದುರಿದ್ದವು. ಗಲ್ಲದ ಮೇಲಿನ ಸುಕ್ಕುಗಳಿಂದಾಗಿ ಅವು ಕೆಳಕ್ಕೆ ಜಾರಿರಲಿಲ್ಲ. ಒಳಗಿನ ಎಲ್ಲಾ ದುಃಖವೂ ಆ ಸುಕ್ಕುಗಳಲ್ಲಿಯೇ ಅಡಗಿದಂತೆ ಎನ್ನಿಸಿತ್ತು.

ಭಾಗ 6 : Literature: ನೆರೆನಾಡ ನುಡಿಯೊಳಗಾಡಿ; ‘ನನ್ನ ಅಜ್ಜಿ ನಮ್ಮ ಅವ್ವನ ಖಾಸ ಅವ್ವ ಅಲ್ಲಾ, ಮಲತಾಯಿ’

ಕಾರಿನಲ್ಲಿ ಕುಳಿತು, ಅದು ಹೊರಟಾಗ ಮಾನಸಿಯ ಮನಸ್ಸಿನಲ್ಲಿ, ಅಜ್ಜಿಯು ‘ನಿನ್ನ ಆರೋಗ್ಯದ ಬಗ್ಗೆ ಕಾಳಜಿಯಿರಲಿ’ ಎಂದು ಏಕೆ ಹೇಳಿದಳು ಎನ್ನುವುದರ ಬಗ್ಗೆ ಸಂಶಯ ಬಂದಿತ್ತು. ಅಂದರೆ ಅಜ್ಜಿಗೆ ಏನಾದರೂ ಅವ್ವನ ಆರೋಗ್ಯದ ಬಗ್ಗೆ ತಿಳಿದಿದೆಯಾ? ದೇವರೆ, ನಾನು ಯಾರು ಯಾರನ್ನ ಸಂಭಾಳಿಸಲಿ? ಈ ನನ್ನ ಅವ್ವಾ! ನನ್ನ ಪಕ್ಕಕ್ಕೆ ಕುಳಿತಿದ್ದಾಳಲ್ಲ. ಇವಳಿಗೆ ತನ್ನ ಜೀವನದಾಚೆಯ ದಡದ ವೇದನೆ ಹತ್ತಿದೆ. ಆಕೆ ಮತ್ತೆ ಅವ್ವನ ಕಡೆಗೆ ನೋಡಿದ್ದಳು. ಮಾನಸಿಗೆ ಗಂಟಲು ಉಬ್ಬಿ ಬಂದಿತ್ತು. ಅವ್ವ ಕಣ್ಣು ಮುಚ್ಚಿಕೊಂಡು ಕುಳಿತಿದ್ದಳು. ಅವಳೂ ಕೂಡ ಕಣ್ಣುಗಳನ್ನು ಮುಚ್ಚಿಕೊಂಡು ಮುಂದಿನ ಸೀಟಿಗೆ ತನ್ನ ತಲೆಯನ್ನು ಒರಗಿಸಿಕೊಂಡು ಕುಳಿತಿದ್ದಳು. ಮುಚ್ಚಿದ ಕಣ್ಣುಗಳ ಎದುರು ಅವಳಿಗೆ ವೃದ್ಧಾಶ್ರಮದಲ್ಲಿಯ ಗೋಡೆಯ ಬರಹಗಳೇ ಬಂದಂತೆ ಆಗಿತ್ತು.

“ಅವ್ವನ ಜೀವನದಲ್ಲಿ ಇನ್ನು ಎಷ್ಟು ದಿನಗಳು ಬಾಕಿ ಉಳಿದಿವೆ ಎನ್ನುವುದು ಅರಿಯದು. ನಿಜ ಹೇಳಬೇಕೆಂದರೆ ಡಾಕ್ಟರರೂ ಏನೂ ಆಶೆ ಇಲ್ಲವೆಂದೇ ಹೇಳಿದ್ದಾರೆ. ನಮ್ಮ ಪ್ರಯತ್ನದಲ್ಲಿ ಏನೂ ಕೊರತೆ ಉಳಿಯಬಾರದೆಂದೇ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಅಷ್ಟೇ. ಒಳ್ಳೆಯ ಔಷಧೋಪಚಾರ ಮಾಡಿಸಬೇಕು. ಏನಾಗುತ್ತದೆಯೋ ನೋಡೋಣ. ಹೀಗೆ ಮರಣದ ದಾರಿ ಕಾಯುವುದು ಎಷ್ಟು ಕಷ್ಟದ ಕೆಲಸವಲ್ಲವೇ? ಅವ್ವನಿಗೆ ಕ್ಯಾನ್ಸರ್ ಆಗಿದೆ ಎನ್ನುವುದರ ಬಗ್ಗೆ ನಮಗೂ ಗೊತ್ತಿದೆ, ಆದರೆ ಉಳಿದುದೆಲ್ಲದರ ಬಗ್ಗೆ ಇವರೆಲ್ಲರೂ ಅರಿತಿಲ್ಲ. ಅದೂ ಒಂದು ರೀತಿಯಿಂದ ಸರಿಯೇ. ಆದರೆ ನನ್ನೊಳಗೆ ಕುದಿಯುತ್ತಿರುವ ಜ್ವಾಲಾಮುಖಿ.. ಇತರರನ್ನು ಸಮಾಧಾನ ಮಾಡುವಷ್ಟರಲ್ಲಿ ನಾನು ಸ್ವತಃ ಅನುಭವಿಸುತ್ತಿರುವ ವೇದನೆ!

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾಗ 7 : Literature: ನೆರೆನಾಡ ನುಡಿಯೊಳಗಾಡಿ; ಈಗ ದೇವರು, ದೇವರಮನಿಯೊಳಗ ಕೂತಾನ ವಿಷಣ್ಣತೆಯ ಸಂಕೇತದಂಗ

ಈ ಕಥೆಯ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 3:04 pm, Fri, 8 April 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು