ಬೆಂಗಳೂರು: ಕನ್ನಡ ಸಾಂಸ್ಕೃತಿಕ ಲೋಕದ ಧೀಮಂತ ಪ್ರತಿಭೆ, ಸುಗಮ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅಪರೂಪದ ಗಾಯಕ ಶಿವಮೊಗ್ಗ ಸುಬ್ಬಣ್ಣ (83) (Shivamogga Subbanna) ಗುರುವಾರ (ಆಗಸ್ಟ್ 11) ರಾತ್ರಿ 10.30ಕ್ಕೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ (Jayadeva Hospital) ಹೃದಯ ಸ್ತಂಭನದಿಂದ (Cardiac Arrest) ನಿಧನರಾದರು. ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ತಿಳಿಸಿದರು. ಸುಬ್ಬಣ್ಣ ಅವರಿಗೆ ಗುರುವಾರ ಸಂಜೆ ಲಘು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅವರು ಮೃತಪಟ್ಟರು.
ಕನ್ನಡ ಸುಗಮ ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಎನಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ಹಲವು ಹಾಡುಗಳು ಜನಪ್ರಿಯವಾಗಿದ್ದವು. ಈ ಪೈಕಿ ‘ಕಾಡುಕುದುರೆ ಓಡಿ ಬಂದಿತ್ತಾ’ ಹಾಡು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಕಾಳಿಂಗರಾಯರು (ಪಿ.ಕಾಳಿಂಗರಾವ್), ಬಾಳಪ್ಪ ಹುಕ್ಕೇರಿಯವರು, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನು ಐದು ಕಂಬಗಳು ಎಂದೇ ಗುರುತಿಸಿ, ಗೌರವಿಸಲಾಗುತ್ತಿತ್ತು. ‘ಕಾಡು ಕುದುರೆ’ ಸಿನಿಮಾದ ‘ಕಾಡು ಕುದುರೆ ಓಡಿಬಂದಿತ್ತಾ’ ಹಾಡಿಗೆ ರಾಷ್ಟ್ರ ಪ್ರಶಸ್ತಿಯ ಗೌರವ ಸಿಕ್ಕಿತ್ತು. ರಜತ ಕಮಲ, ಶಿಶುನಾಳ ಷರೀಫ್ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳ ಮೂಲಕ ನಾಡು ಶಿವಮೊಗ್ಗ ಸುಬ್ಬಣ್ಣ ಅವರನ್ನು ಗೌರವಿಸಿತ್ತು. ಗಾಯನ ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.
ಸುಗಮ ಸಂಗೀತದ ತನ್ಮತೆಯ ಗಾಯಕರೆನಿಸಿರುವ ಸುಬ್ಬಣ್ಣನವರು 14ನೇ ಡಿಸೆಂಬರ್ 1938ರಂದು ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ಜನಿಸಿದರು. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಸಂಗೀತಗಾರರ ವಂಶದಲ್ಲಿ ಜನಿಸಿದ ಸುಬ್ಬಣ್ಣನವರು ಅಜ್ಜ ಶಾಮಣ್ಣನವರಿಂದಲೇ ಸಂಗೀತದ ಪ್ರಥಮ ಪಾಠ ಹೇಳಿಸಿಕೊಂಡರು. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎಂ. ಪ್ರಭಾಕರ್ ಅವರಿಂದ ಅಭ್ಯಾಸ ಮಾಡಿದರು. ಪ್ರಮುಖ ಕವಿಗಳ ಕೃತಿಗಳನ್ನು ಸ್ವತಃ ರಾಗ ಸಂಯೋಜಿಸಿ ಹಾಡುವುದರ ಮೂಲಕ ಮನೆ ಮಾತಾದರು.
ಕರ್ನಾಟಕದ ಮೂಲೆಮೂಲೆಗೂ ಸಂಚರಿಸಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಲವು ಸಿಡಿ, ಕ್ಯಾಸೆಟ್ಗಳನ್ನು ಬಿಡುಗಡೆ ಮಾಡಿದರು. ಕುವೆಂಪು, ದರಾ ಬೇಂದ್ರೆ, ಕೆ.ಎಸ್.ನಿಸಾರ್ ಅಹಮದ್, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ಟರು ಸೇರಿದಂತೆ ಹಲವು ಪ್ರಮುಖ ಕವಿಗಳ ಕವನಗಳಿಗೆ ರಾಗದ ರೂಪಕೊಟ್ಟು ಪ್ರಶಂಸೆ ಪಡೆದರು.
ಬಿಎ, ಬಿಕಾಂ ಮತ್ತು ಎಲ್ಎಲ್ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ ಅವರು 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದರು. ‘ಕಾಡುಕುದುರೆ’ ಚಲನಚಿತ್ರದಲ್ಲಿ ಅವರು ಹಾಡಿದ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿಗೆ 1979ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಜತ ಕಮಲ ರಾಷ್ಟ್ರಪ್ರಶಸ್ತಿಯ ಗೌರವ ಸಂದಿತ್ತು. ಆ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗ ಎನಿಸಿಕೊಂಡರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ದೆಹಲಿ ಕನ್ನಡಿಗರ ಪತ್ರಿಕೆಯ ಕಾಳಿಂಗರಾವ್ ಪ್ರಶಸ್ತಿ, ಮೈಸೂರಿನ ಅನಂತಸ್ವಾಮಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಶಿಶುನಾಳ ಷರೀಫ್ ಪ್ರಶಸ್ತಿ ಇವರಿಗೆ ದೊರೆತಿತ್ತು.
ಮಗಳು ‘ದಿ ಹಿಂದೂ’ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕಿ ಭಾಗೇಶ್ರಿ, ಮಗ ಶ್ರೀರಂಗ, ಸೊಸೆ ಖ್ಯಾತ ಗಾಯಕಿ ಅರ್ಚನಾ ಉಡುಪ ಮತ್ತು ಅಪಾರ ಅಭಿಮಾನಿಗಳನ್ನು ಶಿವಮೊಗ್ಗ ಸುಬ್ಬಣ್ಣ ಅಗಲಿದ್ದಾರೆ.
ಅಪ್ಪ ಅನ್ನು ಎಂದಿದ್ದರು: ಅರ್ಚನಾ ಉಡುಪ
ಶಿವಮೊಗ್ಗ ಸುಬ್ಬಣ್ಣ ಅವರ ಸೊಸೆ ಅರ್ಚನಾ ಉಡುಪ ಸಹ ಖ್ಯಾತ ಗಾಯಕಿ. ಮಾವನನ್ನು ನೆನಪಿಸಿಕೊಂಡ ಅವರು, ‘ನಾನು 20 ವರ್ಷಗಳ ಹಿಂದೆ ಮದುವೆಯಾಗಿ ಮನೆಗೆ ಬಂದಾಗ ‘ಮಾವ’ ಎಂದು ಕರೆದಿದ್ದೆ. ಆಗ ಅವರು, ‘ಮಾವ ಅನ್ನಬೇಡಮ್ಮ, ಡ್ಯಾಡಿ ಅಂತ ಕರೀಬೇಕು’ ಎಂದಿದ್ದರು. ಪ್ರೀತಿಯಿಂದ ಯಾವಾಗಲು ಬೈಯುತ್ತಿದ್ದರು. ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಐದು ಆಧಾರ ಸ್ತಂಭಗಳ ಪೈಕಿ ಐದನೇ ಕಂಬ ಕಳಚಿದೆ. ಸುಗಮ ಸಂಗೀತ ಕ್ಷೇತ್ರಕ್ಕೆ ಇದು ತುಂಬಲಾರದ ನಷ್ಟ’ ಎಂದು ದುಃಖಿಸಿದರು.
Published On - 7:19 am, Fri, 12 August 22