Hathras Stampede: ಉತ್ತರ ಪ್ರದೇಶದ ಹಾಥರಸ್​​ನಲ್ಲಿ ಸತ್ಸಂಗ ವೇಳೆ ಕಾಲ್ತುಳಿತ: 107 ಮಂದಿ ಸಾವು

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಡೆದ 'ಸತ್ಸಂಗ'ದಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರಿಂದ ಅಲ್ಲಿ ಉಸಿರುಗಟ್ಟಿ ಜನರಲ್ಲಿ ಅಸ್ವಸ್ಥತೆಗೆ ಕಾರಣವಾಯಿತು ಎಂದು ತೋರುತ್ತದೆ. ಆಗ ಜನರು ಹೊರಗೆ ಓಡಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಕಾರ್ಯಕ್ರಮದ ಸಮಯದಲ್ಲಿ ಭಾರೀ ಸೆಖೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

Hathras Stampede: ಉತ್ತರ ಪ್ರದೇಶದ ಹಾಥರಸ್​​ನಲ್ಲಿ ಸತ್ಸಂಗ ವೇಳೆ ಕಾಲ್ತುಳಿತ: 107 ಮಂದಿ ಸಾವು
ಆಸ್ಪತ್ರೆಯ ಮುಂದೆ ಸಂತ್ರಸ್ತರು
ರಶ್ಮಿ ಕಲ್ಲಕಟ್ಟ

Updated on: Jul 02, 2024 | 7:53 PM

ಹಾಥರಸ್ (ಉತ್ತರ ಪ್ರದೇಶ) ಜುಲೈ 02: ಮಂಗಳವಾರ ಉತ್ತರ ಪ್ರದೇಶದ (Uttar Pradesh) ಹಾಥರಸ್ (Hathras) ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ (stampede)  107 ಮಂದಿ ಸಾವಿಗೀಡಾಗಿದ್ದಾರೆ. ಹಾಥರಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದ ರಾತಿ ಭನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಧಾರ್ಮಿಕ ಬೋಧಕರೊಬ್ಬರು ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಹೆಚ್ಚಿನ ಜನರು ‘ಸತ್ಸಂಗ’ದಲ್ಲಿ ಭಾಗವಹಿಸಿದ್ದರಿಂದ ಅಲ್ಲಿ ಉಸಿರುಗಟ್ಟಿ ಜನರಲ್ಲಿ ಅಸ್ವಸ್ಥತೆಗೆ ಕಾರಣವಾಯಿತು ಎಂದು ತೋರುತ್ತದೆ. ಆಗ ಜನರು ಹೊರಗೆ ಓಡಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಕಾರ್ಯಕ್ರಮದ ಸಮಯದಲ್ಲಿ ಭಾರೀ ಸೆಖೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತರು ಹೇಳಿದ್ದೇನು?

ಅದು ಧಾರ್ಮಿಕ ಬೋಧಕ ಭೋಲೆ ಬಾಬಾರ ಸತ್ಸಂಗ ಸಭೆ. ಮಂಗಳವಾರ ಮಧ್ಯಾಹ್ನ ಇಟಾಹ್ ಮತ್ತು ಹಾಥರಸ್  ಜಿಲ್ಲೆಯ ಗಡಿಯಲ್ಲಿರುವ ಸ್ಥಳದಲ್ಲಿ ಒಟ್ಟುಗೂಡಲು ತಾತ್ಕಾಲಿಕ ಅನುಮತಿಯನ್ನು ನೀಡಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಅಲಿಘರ್ ರೇಂಜ್) ಶಲಭ್ ಮಾಥುರ್ ಹೇಳಿದ್ದಾರೆ.

ಹಾಥರಸ್‌ನ ಗಂಗಾ ದೇವಿ (70), ಕಾಸ್‌ಗಂಜ್‌ನ ಪ್ರಿಯಾಂಕಾ (20), ಮಥುರಾದ ಜಸೋದಾ (70) ಮತ್ತು ಇಟಾಹ್‌ನ ಸರೋಜ್ ಲತಾ (60) ಮೃತರೆಂದು ಗುರುತಿಸಲಾಗಿದೆ. ಮೃತ ಇಬ್ಬರು ಮಕ್ಕಳನ್ನು ಕಾವ್ಯ (4) ಮತ್ತು ಆಯುಷ್ (8) ಎಂದು ಗುರುತಿಸಲಾಗಿದ್ದು ಇಬ್ಬರೂ ಶಹಜಾನ್‌ಪುರದವರು.

ಧಾರ್ಮಿಕ ಕಾರ್ಯಕ್ರಮ ಮುಗಿದಾಗ ಎಲ್ಲರೂ ಹೊರಗೆ ಹೋಗುವ ಅವಸರದಲ್ಲಿ ಕಾಲ್ತುಳಿತ  ಸಂಭವಿಸಿದೆ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.

ಸ್ಥಳದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳು ಜಮಾಯಿಸಿದ್ದರು. ಯಾವುದೇ ದಾರಿಯಿಲ್ಲ, ಎಲ್ಲರೂ ಒಬ್ಬರ ಮೇಲೆ ಬಿದ್ದುಬಿಟ್ಟರು, ಆಗ  ಕಾಲ್ತುಳಿತ ನಡೆಯಿತು. ನಾನು ಹೊರಗೆ ಹೋಗಲು ಪ್ರಯತ್ನಿಸಿದಾಗ, ಹೊರಗೆ ಮೋಟಾರು ಸೈಕಲ್‌ಗಳನ್ನು ನಿಲ್ಲಿಸಿದ್ದರಿಂದ ಅಲ್ಲಿ ದಾರಿ ಇರಲಿಲ್ಲ. ಹಲವರು ಮೂರ್ಛೆ ಹೋದರು. ಕೆಲವರು ಸತ್ತರು ”ಎಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದ ಸಂತ್ರಸ್ತರು ಹೇಳಿದ್ದಾರೆ.

ಇದನ್ನೂ ಓದಿ: PM Modi Speech Highlights: 99 ಅಂಕ ಪಡೆದ ಮಗು ರಾಹುಲ್ ಗಾಂಧಿ; ಸದನದಲ್ಲಿ ಪ್ರಧಾನಿ ಮೋದಿ ಲೇವಡಿ

ಘಟನೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಹಾಥರಸ್  ಜಿಲ್ಲೆ ಮತ್ತು ಸುತ್ತಮುತ್ತಲಿನ ಅಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ವೇಗಗೊಳಿಸಲು ಸೂಚಿಸಿದ್ದಾರೆ. “ಅವರು ಎಡಿಜಿ ಆಗ್ರಾ ಮತ್ತು ಕಮಿಷನರ್ ಅಲಿಘರ್ ನೇತೃತ್ವದಲ್ಲಿ ಘಟನೆಯ ಕಾರಣಗಳನ್ನು ತನಿಖೆ ಮಾಡಲು ಸೂಚನೆಗಳನ್ನು ನೀಡಿದ್ದಾರೆ” ಎಂದು ಸಿಎಂ ಕಚೇರಿ ಎಕ್ಸ್‌ನಲ್ಲಿ  ಪೋಸ್ಟ್ ಮಾಡಿದೆ.

ಮುರ್ಮು ಸಂತಾಪ

ಹಾಥರಸ್  ಕಾಲ್ತುಳಿತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ  ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತರು ಸಾವಿಗೀಡಾದ ಸುದ್ದಿ ಹೃದಯ ವಿದ್ರಾವಕವಾಗಿದೆ, ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Tue, 2 July 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us