ಡಾರ್ಜಿಲಿಂಗ್‌ನಲ್ಲಿ ಭಾರೀ ಭೂಕುಸಿತ ಉಂಟಾಗಿ 9 ಜನ ಸಾವು; ಪ್ರಧಾನಿ ಮೋದಿ ಸಂತಾಪ

ಕುರ್ಸಿಯೊಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 110ರಲ್ಲಿರುವ ಹುಸೇನ್ ಖೋಲಾದಲ್ಲಿಯೂ ಭಾರೀ ಭೂಕುಸಿತ ಉಂಟಾಗಿದ್ದು, ಇದು ಸಿಲಿಗುರಿ ಮತ್ತು ಡಾರ್ಜಿಲಿಂಗ್ ನಡುವಿನ ಸಂಪರ್ಕವನ್ನು ಕಡಿತಗೊಳಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಸಿಲಿಗುರಿಯಿಂದ ಸಿಕ್ಕಿಂಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಬಂದ್ ಮಾಡಲಾಗಿದೆ. ಡಾರ್ಜಿಲಿಂಗ್​​ನಲ್ಲಿ ಇದುವರೆಗೂ ಭಾರೀ ಮಳೆಯಿಂದ 9 ಜನ ಮೃತಪಟ್ಟಿದ್ದಾರೆ.

ಡಾರ್ಜಿಲಿಂಗ್‌ನಲ್ಲಿ ಭಾರೀ ಭೂಕುಸಿತ ಉಂಟಾಗಿ 9 ಜನ ಸಾವು; ಪ್ರಧಾನಿ ಮೋದಿ ಸಂತಾಪ
Darjeeling Landslide

Updated on: Oct 07, 2025 | 10:19 PM

ಡಾರ್ಜಿಲಿಂಗ್, ಅಕ್ಟೋಬರ್ 5: ಶನಿವಾರ ಸುರಿದ ನಿರಂತರ ಮಳೆಯಿಂದಾಗಿ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಹಲವಾರು ಕಡೆ ಭೂಕುಸಿತಗಳು (Landslide) ಸಂಭವಿಸಿ, ಮನೆಗಳು ಕೊಚ್ಚಿ ಹೋಗಿವೆ. ಭೂಕುಸಿತದಿಂದ ರಸ್ತೆಗಳಿಗೆ ಹಾನಿಯಾಗಿದೆ. ಇದರಿಂದ ಹಲವಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದಿಂದ ಇದುವರೆಗೂ 9 ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಕಾಣೆಯಾಗಿದ್ದಾರೆ. ಸರ್ಸಲಿ, ಜಸ್ಬಿರ್‌ಗಾಂವ್, ಮಿರಿಕ್ ಬಸ್ತಿ, ಧಾರ್ ಗಾಂವ್ (ಮೆಚಿ) ಮತ್ತು ಮಿರಿಕ್ ಸರೋವರ ಪ್ರದೇಶಗಳಲ್ಲಿ ಸಾವುನೋವುಗಳು ಉಂಟಾಗಿವೆ. ಧಾರ್ ಗಾಂವ್‌ನಲ್ಲಿ ಭಾರೀ ಮಣ್ಣು ಕುಸಿದು ಹಲವಾರು ಮನೆಗಳು ನೆಲಸಮಗೊಂಡಿವೆ.

ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಭಾರೀ ಮಳೆಯಿಂದ ತೀವ್ರವಾಗಿ ಪರಿಣಾಮ ಬೀರಿವೆ. ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ರಾತ್ರಿಯಿಂದ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ. ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಗಳು ಪ್ರಸ್ತುತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅತಿ ಹೆಚ್ಚು ಹಾನಿಗೊಳಗಾದ ವಲಯಗಳಲ್ಲಿ ಒಂದಾದ ಮಿರಿಕ್ ಸರೋವರ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.


ನಿರಂತರ ಮಳೆಯಿಂದಾಗಿ ಮಣ್ಣು ತೆಗೆಯುವವರು ಮತ್ತು ತುರ್ತು ವಾಹನಗಳು ಸ್ಥಳಕ್ಕೆ ತಲುಪುವುದು ಕಷ್ಟಕರವಾಗಿದೆ. ಪ್ರವಾಸಿಗರಿಗೆ ಸಹಾಯ ಮಾಡಲು ಡಾರ್ಜಿಲಿಂಗ್ ಪೊಲೀಸರು ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದಾರೆ. ಭೂಕುಸಿತ ಅಥವಾ ಮಳೆಯಲ್ಲಿ ಸಿಲುಕಿಕೊಂಡಿರುವ, ಸಹಾಯದ ಅಗತ್ಯವಿರುವ ಪ್ರವಾಸಿಗರು ಡಾರ್ಜಿಲಿಂಗ್ ಪೊಲೀಸ್ ನಿಯಂತ್ರಣ ಕೊಠಡಿ +91 91478 89078 ಸಂಖ್ಯೆಯನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ‘ಶಕ್ತಿ ಚಂಡಮಾರುತ’ ಎಫೆಕ್ಟ್; ಅಕ್ಟೋಬರ್ 7ರ ವರೆಗೆ ಭಾರೀ ಮಳೆ

ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ:

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಸಂಭವಿಸಿದ ಸಾವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ದುಃಖ ವ್ಯಕ್ತಪಡಿಸಿದ್ದಾರೆ. “ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತದಿಂದ ಸಂಭವಿಸಿದ ದುರಂತ ಜೀವಹಾನಿ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಯಶಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ” ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.


ಇದನ್ನೂ ಓದಿ: ರಾತ್ರಿಯಿಡೀ ಸುರಿದ ಮಳೆಯಿಂದ ತಮಿಳುನಾಡಿನ ಮೇಘಮಲೈ ಜಲಪಾತದಲ್ಲಿ ದಿಢೀರ್ ಪ್ರವಾಹ

ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಜೀವಹಾನಿಯಿಂದ ತೀವ್ರ ನೋವುಂಟಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಭಾರೀ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಪ್ರಧಾನಿ ಮೋದಿ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದಾರೆ.


ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಅಕ್ಟೋಬರ್ 6) ಬೆಳಿಗ್ಗೆ ಡಾರ್ಜಿಲಿಂಗ್‌ಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Sun, 5 October 25

Loading...
Unable to load recommendations.
Follow Us