ಇಂದು ವಿಶ್ವಾಸದ್ರೋಹದ ದಿನ ಆಚರಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್​ ಘೋಷಣೆ; ಕೇಂದ್ರದ ವಿರುದ್ಧ ಮತ್ತೆ ಸಿಡಿಮಿಡಿ

ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಸಂಯುಕ್ತ  ಕಿಸಾನ್​ ಮೋರ್ಚಾ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ದೆಹಲಿಯ ವಿವಿಧ ಗಡಿಭಾಗಗಳಲ್ಲಿ 2020ರ ನವೆಂಬರ್​ ತಿಂಗಳಿಂದ ಪ್ರತಿಭಟನೆ ಪ್ರಾರಂಭ ಮಾಡಿದವು.

ಇಂದು ವಿಶ್ವಾಸದ್ರೋಹದ ದಿನ ಆಚರಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್​ ಘೋಷಣೆ; ಕೇಂದ್ರದ ವಿರುದ್ಧ ಮತ್ತೆ ಸಿಡಿಮಿಡಿ
ರಾಕೇಶ್ ಟಿಕಾಯತ್
Edited By:

Updated on: Jan 31, 2022 | 7:50 AM

ರೈತರು ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದ್ದರೂ ಕೂಡ ಕೇಂದ್ರದ ವಿರುದ್ಧ ಹೋರಾಟವನ್ನು ನಿಲ್ಲಿಸಲಿಲ್ಲ. ಕೇಂದ್ರ ರೈತರರಿಗೆ ವಿಶ್ವಾಸದ್ರೋಹ ಮಾಡಿತು ಎಂದು ಆರೋಪಿಸಿರುವ ಭಾರತೀಯ ಕಿಸಾನ್ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್(Rakesh Tikait)​ ಇಂದು (31-01-2022) ದೇಶಾದ್ಯಂತ ರೈತ ಸಂಘಟನೆಗಳಿಂದ ವಿಶ್ವಾಸದ್ರೋಹ ದಿನವನ್ನಾಗಿ (Betrayal Day) ಆಚರಿಸಲಾಗುವುದು ಎಂದು ಹೇಳಿದ್ದಾರೆ.  ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷದಿಂದ ನಡೆಸಿದ ಪ್ರತಿಭಟನೆಯನ್ನು ಡಿಸೆಂಬರ್​ 9ರಂದು, ಕೇಂದ್ರ ಸರ್ಕಾರ ನೀಡಿದ ಭರವಸೆಯ ಆಧಾರದ ಮೇಲೆ ಹಿಂಪಡೆಯಲಾಯಿತು. ಆದರೆ ಒಂದು ತಿಂಗಳ ಮೇಲಾದರೂ ನಮಗೆ ನೀಡಲಾಗಿದ್ದ ಯಾವ ಭರವಸೆಯೂ ಈಡೇರಲಿಲ್ಲ ಎಂದು ರಾಕೇಶ್​ ಟಿಕಾಯತ್​  ಹಿಂದಿಯಲ್ಲಿ ಟ್ವೀಟ್​ ಮಾಡಿ ಹೇಳಿದ್ದಾರೆ.

ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಸಂಯುಕ್ತ  ಕಿಸಾನ್​ ಮೋರ್ಚಾ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ದೆಹಲಿಯ ವಿವಿಧ ಗಡಿಭಾಗಗಳಲ್ಲಿ 2020ರ ನವೆಂಬರ್​ ತಿಂಗಳಿಂದ ಪ್ರತಿಭಟನೆ ಪ್ರಾರಂಭ ಮಾಡಿದವು. ಮೂರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾದವುಗಳಾಗಿವೆ. ಅವುಗಳನ್ನು ಹಿಂಪಡೆಯಿರಿ ಎಂದು ರೈತರು ಆಗ್ರಹಿಸುತ್ತಲೇ ಇದ್ದರು. ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಹಲವು ಸುತ್ತುಗಳ ಮಾತುಕತೆಯ ಬಳಿಕವೂ ಸಹ ಒಂದು ನಿರ್ಧಾರಕ್ಕೆ ಬರಲಾಗುತ್ತಿರಲಿಲ್ಲ. ಇನ್ನು ರೈತರ ಪ್ರತಿಭಟನೆ ಸ್ಥಳದಲ್ಲಿ ಬರುಬರುತ್ತ ಹಿಂಸಾಚಾರ, ಸಾವು-ನೋವುಗಳು ಜಾಸ್ತಿಯಾಗತೊಡಗಿದವು. ಬಳಿಕ 2021ರ ನವೆಂಬರ್​​ನಲ್ಲಿ ಪ್ರಧಾನಿ ಮೋದಿ ಕೃಷಿ ಕಾಯ್ದೆಗಳ ಹಿಂಪಡೆಯುವುದಾಗಿ ಘೋಷಿಸಿದರು.

ಪ್ರಧಾನಿ ಮೋದಿ ಘೋಷಣೆ ಮಾಡಿದಾಕ್ಷಣ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ಕಾಯ್ದೆಗಳನ್ನು ಸಂಸತ್ತಿನಲ್ಲಿ ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆ ಸಂಬಂಧ ಕಾನೂನು ಬದ್ಧ ಗ್ಯಾರಂಟಿ ಕೊಡಬೇಕು ಎಂಬಿತ್ಯಾದಿ ಪಟ್ಟುಗಳನ್ನು ರೈತರು ಹಿಡಿದಿದ್ದರು. ಅದಕ್ಕೆಲ್ಲ ಒಪ್ಪಿದ ನಂತರ ಪ್ರತಿಭಟನಾನಿರತ ರೈತರು ಡಿ.9ರಂದು ಎಲ್ಲರೂ ವಾಪಸ್​ ಹೋಗಿದ್ದರು. ಆದರೆ ಕೇಂದ್ರ ಸರ್ಕಾರ ತಾನು ನೀಡಿರುವ ಭರವಸೆಗಳನ್ನು ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿದೆ ಎಂಬುದು ಈಗ ರಾಕೇಶ್​ ಟಿಕಾಯತ್​ ಆರೋಪವಾಗಿದೆ.

ಇದನ್ನೂ ಓದಿ: Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?

Published On - 7:48 am, Mon, 31 January 22