ಮಂಡಿಯ ಹೊರಗೆ 150 ಕೆಜಿ ಬೆಳ್ಳುಳ್ಳಿ ಸುಟ್ಟ ರೈತ; ಸುತ್ತಲೂ ನಿಂತು ದೇಶಭಕ್ತಿ ಸೂಚಕ ಘೋಷಣೆ ಕೂಗಿದ ಬೆಳೆಗಾರರು

ಮಂಡಿಯ ಅಧಿಕಾರಿಗಳು ಈ ಬಗ್ಗೆ ಯಶೋಧರ್ಮನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ರೈತ ಮಂಡಿಯಲ್ಲಿ ಬೆಳೆ ಸುಡಬೇಕು ಎಂದು ಪ್ರೀ ಪ್ಲ್ಯಾನ್ ಮಾಡಿಯೇ ಬಂದಿದ್ದ ಎಂದಿದ್ದಾರೆ.

ಮಂಡಿಯ ಹೊರಗೆ 150 ಕೆಜಿ ಬೆಳ್ಳುಳ್ಳಿ ಸುಟ್ಟ ರೈತ; ಸುತ್ತಲೂ ನಿಂತು ದೇಶಭಕ್ತಿ ಸೂಚಕ ಘೋಷಣೆ ಕೂಗಿದ ಬೆಳೆಗಾರರು
ಬೆಳ್ಳುಳ್ಳಿ ಬೆಳೆ
Follow us
| Updated By: Lakshmi Hegde

Updated on: Dec 19, 2021 | 4:28 PM

ಮಂಡ್ಸೌರ್​: ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದೆ ಅದ್ದರೆ ರಸ್ತೆಯಲ್ಲಿ ಅದನ್ನು ಚೆಲ್ಲುವುದು, ಹೊಲ ನಾಶ ಮಾಡುವುದು, ಪ್ರತಿಭಟನೆ ನಡೆಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ತನ್ನ ಇಡೀ ಬೆಳೆಗೆ ಬೆಂಕಿ ಇಟ್ಟು ಸುಟ್ಟಿದ್ದಾನೆ. ಮಧ್ಯಪ್ರದೇಶದ ಮಂಡ್ಸೌರ್​​ನಲ್ಲಿ ಘಟನೆ ನಡೆದಿದೆ. ಈ ರೈತ ಬೆಳ್ಳುಳ್ಳಿ ಬೆಳೆದಿದ್ದ. ಆದರೆ ಆತನ ಬೆಳೆಗೆ ಒಳ್ಳೆಯ ಬೆಲೆ ಬಂದಿರಲಿಲ್ಲ. ಹೀಗಾಗಿ ತೀವ್ರ ನಿರಾಸೆ, ಕೋಪಗೊಂಡ ಆತ ಎಲ್ಲ ಬೆಳೆಯನ್ನೂ ಸುಟ್ಟುಹಾಕಿದ್ದಾನೆ.  

ರೈತನ ಹೆಸರು ಶಂಕರ್​ ಸಿಂಗ್​ ಎನ್ನಲಾಗಿದ್ದು, ಉಜ್ಜಯನಿಯ ಮಹೀದ್​ಪುರದವನು. ಬೆಳೆ ಮಾರಾಟಕ್ಕೆಂದು ಮೌಂಡ್ಸೌರ್ ಕೃಷಿ ಉಪಾಜ್​ ಮಂಡಿ ಸಮಿತಿಗೆ ಬೆಳ್ಳುಳ್ಳಿಯನ್ನು ಕೊಂಡೊಯ್ದಿದ್ದ. ಅಲ್ಲಿ ಇವರ ಬೆಳೆ ಕ್ವಿಂಟಾಲ್​ಗೆ 1400 ರೂಪಾಯಿಗೆ ಹರಾಜಾಯಿತು. ಕೇಳಿದ್ದಕ್ಕೆ ಇದರ ಗುಣಮಟ್ಟ ಕಳಪೆಯಾಗಿದೆ ಎಂಬ ಉತ್ತರ ಬಂತು.  ಈ ಮಂಡಿಗೆ ರೈತ ಬೆಳ್ಳುಳ್ಳಿ ಕೊಂಡೊಯ್ದ ದಿನ ಒಟ್ಟು 8000 ಚೀಲಗಳಷ್ಟು ಬೆಳ್ಳುಳ್ಳಿ ಬಂದಿದ್ದವು. ಅಂದರೆ ಬೇರೆಬೇರೆ ಪ್ರದೇಶಗಳಿಂದ ರೈತರು ತಮ್ಮ ಬೆಳೆ ತಂದಿದ್ದರು. ಅವುಗಳ ಗುಣಮಟ್ಟ ಆಧರಿಸಿ 1000 ದಿಂದ 12000 ರೂ.ವರೆಗೆ ಮಾರಾಟವಾಗಿತ್ತು. ಆದರೆ ತನ್ನ ಬೆಳೆಗೆ ತೀವ್ರ ಕಡಿಮೆ ಬೆಲೆ ಬಂತು ಎಂದು ಸಿಟ್ಟಾದ ಶಂಕರ್ ಸಿಂಗ್​ ಮಂಡಿಯ ಹೊರಗಡೆಯೇ ಅಷ್ಟೂ ಬೆಳ್ಳುಳ್ಳಿಯನ್ನು ಸುಟ್ಟು ಕರಕಲಾಗಿಸಿದ್ದಾರೆ ಎಂದು ಮಂಡಿ ಅಧಿಕಾರಿ ಜಗದೀಶ್​ ಬಾಬರ್​ ತಿಳಿಸಿದ್ದಾರೆ.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಶಂಕರ್​, ನಾನು ಬೆಳ್ಳುಳ್ಳಿ ಬೆಳೆಯಲು 2.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೆ. ಆದರೆ ಮಾರಾಟ ಮಾಡಲೆಂದು ಹೋದರೆ 1 ಲಕ್ಷ ರೂಪಾಯಿಯಷ್ಟೇ ಬೆಲೆ ಎಂದು ಹೇಳಲಾಯಿತು. ಹೀಗಾಗಿ ತೆಗೆದುಕೊಂಡು ಹೋಗಿದ್ದ 150 ಕೆಜಿಗಳಷ್ಟೂ ಬೆಳ್ಳುಳ್ಳಿಯನ್ನು ನಾಶಪಡಿಸಿದೆ ಎಂದು ಹೇಳಿದ್ದಾರೆ.  ಹಾಗೇ, ಸುಟ್ಟುಕರಕಲಾಗುತ್ತಿರುವ ಬೆಳ್ಳುಳ್ಳಿ ಬೆಳೆಯ ಸುತ್ತಲೂ ರೈತರು ನಿಂತಿರುವ ವಿಡಿಯೋಗಳು ವೈರಲ್​ ಆಗಿವೆ.  ಈ ರೈತರು ದೇಶಭಕ್ತಿ ಸೂಚಕ ಘೋಷಣೆಗಳನ್ನು ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.  ಇನ್ನು ಮಂಡಿಯ ಅಧಿಕಾರಿಗಳು ಈ ಬಗ್ಗೆ ಯಶೋಧರ್ಮನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ರೈತ ಮಂಡಿಯಲ್ಲಿ ಬೆಳೆ ಸುಡಬೇಕು ಎಂದು ಪ್ರೀ ಪ್ಲ್ಯಾನ್​ ಮಾಡಿಕೊಂಡೇ ಬಂದಿದ್ದ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ; ಮತದಾನ ನಡೆಯುತ್ತಿದ್ದ ಬೂತ್​ವೊಂದರಲ್ಲಿ ಕಚ್ಚಾಬಾಂಬ್ ಸ್ಫೋಟ, ಮೂವರ ಸ್ಥಿತಿ ಗಂಭೀರ