ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ; ಮತದಾನ ನಡೆಯುತ್ತಿದ್ದ ಬೂತ್​ವೊಂದರಲ್ಲಿ ಕಚ್ಚಾಬಾಂಬ್ ಸ್ಫೋಟ, ಮೂವರ ಸ್ಥಿತಿ ಗಂಭೀರ

Kolkata Municipal Corporation Poll: ಪಶ್ಚಿಮ ಬಂಗಾಳದಲ್ಲಿ ಯಾವುದೆ ಚುನಾವಣೆ ಇರಲಿ, ಸ್ಥಳೀಯ ಸಂಸ್ಥೆಯದ್ದೇ ಆಗಿರಲಿ, ವಿಧಾನಸಭೆ, ಲೋಕಸಭೆ ಚುನಾವಣೆಗಳೇ ಆಗಿರಲಿ ಹಿಂಸಾಚಾರ, ಬಾಂಬ್​ಸ್ಫೋಟ, ಹಲ್ಲೆಗಳಿಲ್ಲದೆ ಅದು ಮುಕ್ತಾಯ ಆಗುವುದಿಲ್ಲ.

ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ; ಮತದಾನ ನಡೆಯುತ್ತಿದ್ದ ಬೂತ್​ವೊಂದರಲ್ಲಿ ಕಚ್ಚಾಬಾಂಬ್ ಸ್ಫೋಟ, ಮೂವರ ಸ್ಥಿತಿ ಗಂಭೀರ
ಬಾಂಬ್ ಸ್ಫೋಟವಾದ ಸ್ಥಳ
Follow us
| Updated By: Lakshmi Hegde

Updated on: Dec 19, 2021 | 4:07 PM

ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ (Kolkata Municipal Corporation Poll) ಇಂದು ನಡೆಯುತ್ತಿದ್ದು, ಇದರ ವ್ಯಾಪ್ತಿಯ ಎಲ್ಲ 144 ವಾರ್ಡ್​ಗಳಲ್ಲೂ ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಪ್ರತಿ ವಾರ್ಡ್​ಗಳಲ್ಲೂ ಕೊವಿಡ್​ 19 ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಚುನಾವಣೆಯಲ್ಲೂ ಕೂಡ ಅಲ್ಲಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ ಇನ್ನುಳಿದಂತೆ ದೊಡ್ಡ ಮಟ್ಟದ ಯಾವುದೇ ತೊಂದರೆಯಾಗಿಲ್ಲ ಎಂದು ಪಶ್ಚಿಮ ಬಂಗಾಳ ಚುನಾವಣಾ ಆಯೋಗ ತಿಳಿಸಿದೆ.  ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆಯಲ್ಲಿ ಮಧ್ಯಾಹ್ನ 1ಗಂಟೆಯವರೆಗೆ ಶೇ.38ರಷ್ಟು ಮತದಾನವಾಗಿದ್ದು, ಸಂಜೆ 5ಗಂಟೆಯವರೆಗೂ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿದೆ. ಒಟ್ಟಾರೆ 4,959 ಬೂತ್​​ಗಳನ್ನು ರಚಿಸಲಾಗಿದ್ದು, ಎಲ್ಲ ಸೇರಿ 20 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ನೀಲಾಂಜನ್​ ಸಂಡಿಲ್ಯಾ ತಿಳಿಸಿದ್ದಾರೆ.  

ಕಚ್ಚಾ ಬಾಂಬ್​ ಸ್ಫೋಟ ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ ಚುನಾವಣೆ ಮತದಾನದ ನಡುವೆ ಕೋಲ್ಕತ್ತದ ಸೀಲ್ದಾಹ್​ ಎಂಬ ಪ್ರದೇಶದಲ್ಲಿ ಕಚ್ಚಾಬಾಂಬ್​ ಸ್ಫೋಟಗೊಂಡು ಮೂವರು ಮತದಾರರು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬರಿಗೆ ತೀವ್ರ ಗಾಯವಾಗಿದ್ದು, ಅವರು ತಮ್ಮ ಕಾಲು ಕಳೆದುಕೊಂಡಿದ್ದಾರೆ. ಇನ್ನಿಬ್ಬರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.  ಈ ಘಟನೆ ನಡೆದಿದ್ದು ಟಾಕಿ ಶಾಲೆಯ ವಾರ್ಡ್​ ನಂಬರ್​ 36ರಲ್ಲಿ, ಬೆಳಗ್ಗೆ 11 ಗಂಟೆಗೆ. ಎರಡು ಬಾಂಬ್​ ಸ್ಫೋಟವಾಗಿದ್ದು ಸಿಸಿಟಿವಿ ಫೂಟೇಜ್​​ನಲ್ಲಿ ಕಾಣಿಸಿಕೊಂಡಿದೆ. ಘಟನೆ ನಡೆದ ಬೆನ್ನಲ್ಲೇ ಆ ಪ್ರದೇಶದಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಬಾಂಬ್​ ಸ್ಫೋಟದ ಸಂಬಂಧ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಪೊಲೀಸರಿಗೆ ಸೂಚನೆ ನೀಡಿದೆ.

ಟಿಎಂಸಿ ಕಾರ್ಯಕರ್ತರಿಂದ ಬೆದರಿಕೆ? ಸ್ಥಳೀಯ ಸಂಸ್ಥೆ ಚುನಾವಣೆ ಮಧ್ಯೆ ಟಿಎಂಸಿ ಗೂಂಡಾಗಳು ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಪೊಲೀಸರಿಗೆ ನೀಡಲಾದ ದೂರಿನ ಪ್ರತಿಯನ್ನು ಶೇರ್ ಮಾಡಿಕೊಂಡಿರುವ ಅಮಿತ್​ ಮಾಳ್ವಿಯಾ, ಟಿಎಂಸಿ ಗೂಂಡಾಗಳು ಬಿಜೆಪಿ ನಾಯಕ ಪತ್ನಿಯನ್ನು ರೇಪ್​ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.  8 ವರ್ಷದ ಮಗುವಿನ ಎದುರೇ ಇಂಥ ಬೆದರಿಕೆ ಹಾಕಿದ್ದಾರೆ. ಇಷ್ಟೆಲ್ಲ ಆದರೂ, ಮಮತಾ ಬ್ಯಾನರ್ಜಿಯವರಿಂದ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಟ್ಟಿರುವ ಕೋಲ್ಕತ್ತ ಪೊಲೀಸರು ಏನೂ ಮಾಡಿಲ್ಲ ಎಂದು ಅಜಿತ್ ಮಾಳ್ವಿಯಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಯಾವುದೆ ಚುನಾವಣೆ ಇರಲಿ, ಸ್ಥಳೀಯ ಸಂಸ್ಥೆಯದ್ದೇ ಆಗಿರಲಿ, ವಿಧಾನಸಭೆ, ಲೋಕಸಭೆ ಚುನಾವಣೆಗಳೇ ಆಗಿರಲಿ ಹಿಂಸಾಚಾರ, ಬಾಂಬ್​ಸ್ಫೋಟ, ಹಲ್ಲೆಗಳಿಲ್ಲದೆ ಅದು ಮುಕ್ತಾಯ ಆಗುವುದಿಲ್ಲ. ಚುನಾವಣೆ ಪೂರ್ವದಿಂದಲೇ ಶುರುವಾಗಿ ಮತ ಎಣಿಕೆ ನಡೆದು ಒಂದು ವಾರದವರೆಗೂ ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಅಲ್ಲಿ ಬಿಜೆಪಿ ಪಕ್ಷದವರು ಟಿಎಂಸಿ ಮೇಲೆ ಆರೋಪ ಮಾಡಿದರೆ, ಟಿಎಂಸಿ ಕಾರ್ಯಕರ್ತರು ಬಿಜೆಪಿಗರ ಮೇಲೆ ದೂರುತ್ತಾರೆ.

ಇದನ್ನೂ ಓದಿ: ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಬಲಾತ್ಕಾರದ ಕುರಿತು ಹೊಸ ಮಹಿಳಾಪರ ವ್ಯಾಖ್ಯಾನದ ಅವಶ್ಯಕತೆಯಿದೆ’ ಡಾ. ಕೆ. ಎಸ್. ವೈಶಾಲಿ