ತಮಿಳುನಾಡಿನಲ್ಲಿ ಬಾಲಕಿಯ ಆತ್ಮಹತ್ಯೆ: ಹಾಸ್ಟೆಲ್​​​ನಲ್ಲಿ ಹೆಚ್ಚಿನ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿರುವ ವಿಡಿಯೊ ಬಹಿರಂಗ

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2022 | 1:21 PM

ಬಾಲಕಿ ತಾನು 10ನೇ ತರಗತಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದು, ಚೆನ್ನಾಗಿ ಓದುವ ಆಸೆ ಹೊಂದಿದ್ದೆ. ಆದರೆ ತನಗೆ ವಹಿಸಿದ ಕೆಲಸದಿಂದಾಗಿ ಚೆನ್ನಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾಳೆ.

ತಮಿಳುನಾಡಿನಲ್ಲಿ ಬಾಲಕಿಯ ಆತ್ಮಹತ್ಯೆ: ಹಾಸ್ಟೆಲ್​​​ನಲ್ಲಿ ಹೆಚ್ಚಿನ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿರುವ ವಿಡಿಯೊ ಬಹಿರಂಗ
ಪ್ರಾತಿನಿಧಿಕ ಚಿತ್ರ
Follow us on

ತಮಿಳುನಾಡಿನ (Tamil Nadu) ತಂಜಾವೂರಿನಲ್ಲಿ (Thanjavur) ಆತ್ಮಹತ್ಯೆಗೆ ಶರಣಾದ ಬಾಲಕಿ ತನಗೆ ಹಾಸ್ಟೆಲ್‌ನಲ್ಲಿ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಎಂದು ದೂರಿರುವ ವಿಡಿಯೊವೊಂದು ಬಹಿರಂಗವಾಗಿದೆ. ಬಲವಂತವಾಗಿ ಮತಾಂತರಕ್ಕೆ ಬಾಲಕಿಯನ್ನು ಒತ್ತಾಯಿಸಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ  ಹಾಸ್ಟೆಲ್  ಜೀವನದ ಬಗ್ಗೆ ಬಾಲಕಿ ವಿವರಿಸಿರುವ ವಿಡಿಯೊ ಹೊರಬಿದ್ದಿದೆ.  ಲೆಕ್ಕಗಳನ್ನು ಮಾಡಿಡಲು, ಹಾಸ್ಟೆಲ್ ಗೇಟ್‌ಗಳನ್ನು ಮುಚ್ಚಲು ಮತ್ತು ತೆರೆಯಲು ಮತ್ತು ಮೋಟಾರ್ ಆನ್ ಮತ್ತು ಆಫ್ ಮಾಡಲು ವಾರ್ಡನ್ ಹೇಳುತ್ತಿದ್ದರು ಎಂದು ವಿಡಿಯೊದಲ್ಲಿ ಹುಡುಗಿ ಆರೋಪಿಸಿದ್ದಾಳೆ . ಶಾಲೆಯಲ್ಲಿ ಬಿಂದಿ ಧರಿಸುವುದನ್ನು ತಡೆಯಲಾಗಿದೆಯೇ ಎಂದು ಕೇಳಿದಾಗ, ಅಂತಹದ್ದೇನೂ ಸಂಭವಿಸಿಲ್ಲ ಎಂದು ಹುಡುಗಿ ಉತ್ತರಿಸಿದ್ದಾಳೆ. ಬಾಲಕಿ ತಾನು 10ನೇ ತರಗತಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದು, ಚೆನ್ನಾಗಿ ಓದುವ ಆಸೆ ಹೊಂದಿದ್ದೆ. ಆದರೆ ತನಗೆ ವಹಿಸಿದ ಕೆಲಸದಿಂದಾಗಿ ಚೆನ್ನಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾಳೆ. ಕೌಟುಂಬಿಕ ಸಮಸ್ಯೆಗಳಿಂದಾಗಿ ಈ ವರ್ಷ ತಡವಾಗಿ ಶಾಲೆಗೆ ಸೇರಿರುವುದಾಗಿ ಬಾಲಕಿ ಹೇಳಿದ್ದಾಳೆ. ಹಾಸ್ಟೆಲ್‌ನಲ್ಲಿರುವ ಸಿಸ್ಟರ್ ಯಾವಾಗಲೂ ನನ್ನಲ್ಲಿ ಲೆಕ್ಕಗಳನ್ನು ಮಾಡಲು ಹೇಳುತ್ತಾರೆ . ನಾನು ತಡವಾಗಿ ಸೇರಿಕೊಂಡಿದ್ದೇನೆ, ನಾನು ಅದನ್ನು ನಂತರ ಮಾಡುತ್ತೇನೆ ಎಂದು ನಾನು ಅವಳಿಗೆ ಹೇಳಿದೆ. ಆದರೆ ಅವರಿಗದು ಅರ್ಥವಾಗಲಿಲ್ಲ. ಈ ಕೆಲಸ ಮುಗಿಸಿ ಆಮೇಲೆ ಬೇರೆ ಕೆಲಸ ಮಾಡು ಎಂದು ಅವರು ಹೇಳುತ್ತಿದ್ದರು. ನಾನು ಸರಿಯಾಗಿ ಮಾಡಿದರೂ ಅದು ತಪ್ಪು ಎಂದು ಹೇಳಿ ಮತ್ತೆ ಬರೆಯುವಂತೆ ಮಾಡುತ್ತಿದ್ದಳು. ಈ ಕಾರಣದಿಂದಾಗಿ ನನಗೆ ಕಲಿಕೆ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ ಮತ್ತು ಕಡಿಮೆ ಅಂಕಗಳನ್ನು ಗಳಿಸಿದೆ. ಇದನ್ನು ನಾನು ಸಹಿಸಲಾರದೆ ವಿಷ ಕುಡಿದೆ ಎಂದು ಬಾಲಕಿ ಹೇಳಿರುವುದು ವಿಡಿಯೊದಲ್ಲಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಶಾಲೆಯಿಂದ ತನ್ನ ಮನೆಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ  ನಾನು ವಿಷ ಸೇವಿಸಿರುವುದು ಅವರಿಗೆ ತಿಳಿದಿಲ್ಲ. ಸಿಸ್ಟರ್ ಹೆಸರು ಸಗಾಯಾ ಮೇರಿ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ. ಅದೇ  ವೇಳೆ  ನಾನು ವಳು ಪೊಂಗಲ್‌ಗೆ ಮನೆಗೆ ಹೋಗಬೇಕೆಂದು ಬಯಸಿದ್ದೆ  ಆದರೆ ಓದಲು ಇದ್ದುದರಿಂದ ಇಲ್ಲೇ ಉಳಿದೆ ಎಂದು ಬಾಲಕಿ  ಹೇಳಿದ್ದಾಳೆ

ಆರೋಪ ನಿರಾಕರಿಸಿದ ಶಾಲೆ
ವಿದ್ಯಾರ್ಥಿಗಳ ಯಾವುದೇ ಧಾರ್ಮಿಕ ನಂಬಿಕೆಗಳೊಂದಿಗೆ ಆಡಳಿತವು ಎಂದಿಗೂ ಮಧ್ಯಪ್ರವೇಶಿಸಲಿಲ್ಲ ಎಂದು ಶಾಲೆಯು ಹೇಳಿಕೆಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಇದೆಲ್ಲವೂ ಬಹಿರಂಗವಾಗಿದೆ.
ಹಿಂದುಳಿದವರಿಗೆ ಮತ್ತು ಶಿಕ್ಷಣವನ್ನು ನಿರಾಕರಿಸಿದವರಿಗೆ ಶಿಕ್ಷಣ ನೀಡುವ ಏಕೈಕ ಗುರಿಯೊಂದಿಗೆ ನಾವು 180 ವರ್ಷಗಳಿಂದ ಸಂಸ್ಥೆಯನ್ನು ನಡೆಸುತ್ತಿದ್ದೇವೆ ಎಂದು ಶಾಲೆ ಹೇಳಿದೆ.  ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಶಾಲೆ ಒಪ್ಪಿಕೊಂಡಿದೆ. ಸುಳ್ಳು ಆರೋಪಗಳ ಆಧಾರದ ಮೇಲೆ ಅವರ ಕೆಲಸವನ್ನು ಅವಮಾನಿಸುವುದನ್ನು ನೋಡುವುದು ತುಂಬಾ ನೋವುಂಟುಮಾಡುತ್ತದೆ ಎಂದು ಶಾಲೆ ಹೇಳಿದೆ.

ಇದನ್ನೂ ಓದಿ:  ಟಿಪ್ಪು ಸುಲ್ತಾನ್ ಬಗ್ಗೆ ನಮಗೆ ಗೊತ್ತಿದೆ, ಬಿಜೆಪಿಯಿಂದ ಕಲಿಯಬೇಕಾಗಿಲ್ಲ: ಸಂಜಯ್ ರಾವತ್

Published On - 1:21 pm, Thu, 27 January 22