Digital India: ಆರೋಗ್ಯ ಸೇತು, ಕೊವಿನ್ ಆ್ಯಪ್​ಗಳು ಡಿಜಿಟಲ್​ ಇಂಡಿಯಾದ ಹೆಗ್ಗಳಿಕೆ..ಜಗತ್ತಿನ ಗಮನ ಸೆಳೆದಿವೆ: ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ಇಂಟರ್​ನ್ಯಾಷನಲ್ ಟೆಲಿಕಮ್ಯೂನಿಕೇಶನ್​ ಯೂನಿಯನ್​, ಸೈಬರ್​ ಸುರಕ್ಷತೆಯಲ್ಲಿ ಮುಂದುವರಿದಿರುವ ವಿಶ್ವದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ 10ನೇ ಸ್ಥಾನದಲ್ಲಿದೆ.

Digital India: ಆರೋಗ್ಯ ಸೇತು, ಕೊವಿನ್ ಆ್ಯಪ್​ಗಳು ಡಿಜಿಟಲ್​ ಇಂಡಿಯಾದ ಹೆಗ್ಗಳಿಕೆ..ಜಗತ್ತಿನ ಗಮನ ಸೆಳೆದಿವೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
| Updated By: Lakshmi Hegde

Updated on: Jul 01, 2021 | 3:25 PM

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಡಿಜಿಟಲ್​ ಇಂಡಿಯಾ ಮಿಷನ್​​ನಿಂದ ಒನ್​ ನೇಶನ್​, ಒನ್​ ರೇಶನ್​ ಕಾರ್ಡ್​​ನಂತಹ ಸ್ಕೀಮ್​​ಗಳನ್ನು ಹೊರತರಲು ಸಹಾಯವಾಗುತ್ತಿದೆ. ಕೊವಿಡ್​ 19 ಸಂಕಷ್ಟದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಇದು ಸಹಕಾರಿಯಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಡಿಜಿಟಲ್​ ಇಂಡಿಯಾ ಮಿಷನ್​ ಆರುವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಅದರ ಫಲಾನುಭವಿಗಳೊಂದಿಗೆ ಇಂದು ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇವತ್ತು ಡಿಜಿಟಲ್​ ಇಂಡಿಯಾದಿಂದಾಗಿ ಕೋಟ್ಯಂತರ ಜನರಿಗೆ ಹಣ ವರ್ಗಾವಣೆ ಮಾಡಲು ಸುಲಭವಾಗಿದೆ. ದೇಶದಲ್ಲಿ ಒಂದು ದಿನಕ್ಕೆ ಯುಪಿಐ ಮೂಲಕ ಏನಿಲ್ಲವೆಂದರೂ 5 ಲಕ್ಷ ರೂಪಾಯಿ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿದರು.

ಹಾಗೇ ಡಿಜಿಟಲ್​ ಇಂಡಿಯಾ ಮಿಷನ್​ನ ಪ್ರಮುಖ ಯೋಜನೆಯಾದ ಒನ್​ ನೇಶನ್​, ಒನ್​ ರೇಶನ್​ ವ್ಯವಸ್ಥೆಯಿಂದ ವಲಸಿಗರಿಗೆ ತುಂಬ ಸಹಾಯವಾಗುತ್ತದೆ ಎಂದು ಹೇಳಿದ ಮೋದಿಯವರು, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕೆ ಡಿಜಿಟಲ್​ ಮೀಡಿಯಾ ಅತ್ಯುತ್ತಮ ಉದಾಹರಣೆಯಾಗಿದ್ದು, ಜನರ ಕೈಯನ್ನು ಇದು ಬಲಪಡಿಸಿದೆ. ಈ ಯೋಜನೆಯಡಿಯಲ್ಲೇ ಕೊವಿಡ್​ 19 ಟ್ರೇಸಿಂಗ್ ಆ್ಯಪ್​ ಆದ ಆರೋಗ್ಯ ಸೇತು ಆ್ಯಪ್​ ಅಭಿವೃದ್ಧಿಪಡಿಸಲಾಯಿತು ಎಂದು ತಿಳಿಸಿದರು. ಹಾಗೇ, ನಮ್ಮಲ್ಲಿ ಕೊವಿಡ್​ 19 ಲಸಿಕೆ ನೋಂದಣಿಗಾಗಿ ಅಭಿವೃದ್ಧಿಪಡಿಸಲಾದ ಕೊವಿನ್ ಆ್ಯಪ್​ ಜಗತ್ತಿನ ಹಲವು ದೇಶಗಳ ಗಮನ ಸೆಳೆದಿದೆ. ತಮ್ಮಲ್ಲೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಅವರು ಮುಂದಾಗಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಇಂಟರ್​ನ್ಯಾಷನಲ್ ಟೆಲಿಕಮ್ಯೂನಿಕೇಶನ್​ ಯೂನಿಯನ್​, ಸೈಬರ್​ ಸುರಕ್ಷತೆಯಲ್ಲಿ ಮುಂದುವರಿದಿರುವ ವಿಶ್ವದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ 10ನೇ ಸ್ಥಾನದಲ್ಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು. ಅಲ್ಲದೆ ಇಂದು ಕೋಟ್ಯಂತರ ಜನರು ಡಿಜಿಟಲ್​ ವ್ಯವಸ್ಥೆಯ ಅನುಕೂಲ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಆನ್​ಲೈನ್​ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ವೈದ್ಯಕೀಯ ಔಷಧಗಳನ್ನೂ ಆನ್​ಲೈನ್​ನಲ್ಲೇ ಒದಗಿಸುವಷ್ಟು ಮುಂದುವರಿದಿದ್ದೇವೆ. ಇದಕ್ಕಿಂತ ಸಂತೋಷ ಇನ್ನೇನು ಬೇಕು ಎಂದು ಹೇಳಿದರು.

ಸದ್ಯ ಒನ್​ ನೇಶನ್​ ಒನ್​ ರೇಶನ್​ ದೇಶದಲ್ಲಿ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಆದರೆ ಜುಲೈ 31ರೊಳಗೆ ಎಲ್ಲ ರಾಜ್ಯಸರ್ಕಾರಗಳೂ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಅಸಂಘಟಿತ ವಲಯಗಳ ವಲಸೆ ಕಾರ್ಮಿಕರ ಹಿತರಕ್ಷಣೆ ಮಾಡಬೇಕು ಎಂದು ನಿನ್ನೆ (ಜೂನ್​30) ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ: ಗಂಭೀರ ಅಪಘಾತವಾದರೂ ಜಗ್ಗೇಶ್ ಮಗ ಯತಿರಾಜ್ ಪಾರಾಗಿದ್ದು ಹೇಗೆ? ಪ್ರತಿಕ್ರಿಯಿಸಿದ ನವರಸ ನಾಯಕ

Aarogya Setu developed Under digital India scheam playing key role in the battle of Covid 19 said PM Modi