ಭಾರತಕ್ಕೆ ಬರಲು ಒಪ್ಪದ ಅಫ್ಘಾನ್​ ಹಿಂದು-ಸಿಖ್ಖರು; ಅಮೆರಿಕ, ಕೆನಡಕ್ಕೇ ಹೋಗ್ತೇವೆ ಎಂದು ಪಟ್ಟು

ಅಫ್ಘಾನ್​ ಹಿಂದು-ಸಿಖ್​ ಸಮುದಾಯದವರಿಗೆ ಎಲ್ಲ ರೀತಿಯ ಸಹಾಯ, ವ್ಯವಸ್ಥೆ ಮಾಡಲು ಭಾರತ ಮುಂದಾಗಿದೆ. ಇವರನ್ನು ಇಲ್ಲಿಂದ ಕರೆದುಕೊಂಡು ಹೋಗಲು ವಿಮಾನವೂ ಸಿದ್ಧವಾಗಿತ್ತು.

ಭಾರತಕ್ಕೆ ಬರಲು ಒಪ್ಪದ ಅಫ್ಘಾನ್​ ಹಿಂದು-ಸಿಖ್ಖರು; ಅಮೆರಿಕ, ಕೆನಡಕ್ಕೇ ಹೋಗ್ತೇವೆ ಎಂದು ಪಟ್ಟು
ಕಾಬೂಲ್​ ಏರ್​ಪೋರ್ಟ್​ (ಪಿಟಿಐ ಚಿತ್ರ)
Updated By: Lakshmi Hegde

Updated on: Aug 25, 2021 | 4:21 PM

ಅಫ್ಘಾನಿಸ್ತಾನದಲ್ಲಿರುವ ಸಿಖ್​ ಹಾಗೂ ಹಿಂದೂ ಸಮುದಾಯದವರು ಅಲ್ಲಿಂದ ವಲಸೆ ಹೋಗಲು ನಿರ್ಧರಿಸಿದ್ದಾಗಿದೆ. ಅವರನ್ನು ಬರಮಾಡಿಕೊಳ್ಳಲು ಭಾರತ ಕೂಡ ಸಿದ್ಧವಿದೆ. ಆದರೆ ಅನೇಕರು ತಾವು, ಭಾರತಕ್ಕೆ ಹೋಗುವುದಿಲ್ಲ..ಬದಲಿಗೆ ಕೆನಡಾ ಅಥವಾ ಅಮೆರಿಕಕ್ಕೆ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಇಂಥವರಿಂದಾಗಿ ಸ್ಥಳಾಂತರ ಪ್ರಕ್ರಿಯೆಯಲ್ಲಿ ಗೊಂದಲ, ತೊಡಕು ಉಂಟಾಗುತ್ತಿದೆ ಎಂದು ಭಾರತೀಯ ವಿಶ್ವ ವೇದಿಕೆ ಅಧ್ಯಕ್ಷ ಪುನೀತ್​ ಸಿಂಗ್​ ಚಾಂದೋಕ್​ ತಿಳಿಸಿದ್ದಾರೆ.

ಕಾಬೂಲ್​ನ ಗುರುದ್ವಾರ ಕರ್ತೆ ಪರ್ವಾನ್​​ನಲ್ಲಿ ಆಶ್ರಯ ಪಡೆದಿರುವ ಸುಮಾರು 70-80 ಸಿಖ್​ ಮತ್ತು ಹಿಂದುಗಳು ಭಾರತಕ್ಕೆ ಬರಲು ಇಚ್ಛಿಸುತ್ತಿಲ್ಲ. ಅವರು ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅಫ್ಘಾನ್​​ನ ಈ​ ನಾಗರಿಕರ ಸ್ಥಳಾಂತರ ಪ್ರಕ್ರಿಯೆಯಷ್ಟೇ ಅಲ್ಲ, ಬೇರೆಯವರನ್ನು ಕರೆದುಕೊಂಡು ಹೋಗುವ ಕೆಲಸಕ್ಕೂ ತೊಡಕುಂಟಾಗಿದೆ ಎಂದು ಪುನೀತ್​ ಸಿಂಗ್​ ಚಾಂದೋಕ್ ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ.

ಅಫ್ಘಾನ್​ ಹಿಂದು-ಸಿಖ್​ ಸಮುದಾಯದವರಿಗೆ ಎಲ್ಲ ರೀತಿಯ ಸಹಾಯ, ವ್ಯವಸ್ಥೆ ಮಾಡಲು ಭಾರತ ಮುಂದಾಗಿದೆ. ಇವರನ್ನು ಇಲ್ಲಿಂದ ಕರೆದುಕೊಂಡು ಹೋಗಲು ವಿಮಾನವೂ ಸಿದ್ಧವಾಗಿತ್ತು. ಆದರೆ ಕೆನಡಾ ಅಥವಾ ಅಮೆರಿಕ್ಕೆ ಹೋಗಬೇಕು ಎಂಬ ಒಂದೇ ಕಾರಣಕ್ಕೆ ವಿಮಾನವನ್ನು ಎರಡು ಬಾರಿ ತಪ್ಪಿಸಿಕೊಂಡಿದ್ದಾರೆ. ನಮಗೂ ಸ್ಥಳಾಂತರ ಪ್ರಕ್ರಿಯೆಯನ್ನು ವೇಗವಾಗಿ ನಡೆಸುವ ಒತ್ತಡ ಇದೆ. ತುಂಬ ಸಮಯವೂ ಇಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ ಅಫ್ಘಾನ್​ ಸಿಖ್​ ನಾಯಕ ತಲ್ವಿಂದರ್ ಸಿಂಗ್​ ಎಂಬುವರು, ತಾವು ಅಮೆರಿಕ ಅಥವಾ ಕೆನಡಾಕ್ಕೆ ಹೋಗುತ್ತೇವೆ ಎಂದು ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.

ಭಾರತದಲ್ಲಿಲ್ಲ ಉದ್ಯೋಗಾವಕಾಶ !
ಇನ್ನು ಈ ಹಿಂದು -ಸಿಖ್​​ ಸಮುದಾಯದ ಬಹುತೇಕರು ಭಾರತದಲ್ಲಿ ಉದ್ಯೋಗಾವಕಾಶ ಇಲ್ಲದ ಕಾರಣಕ್ಕೆ ಅಲ್ಲಿ ಹೋಗಲು ಇಚ್ಛಿಸುತ್ತಿಲ್ಲ ಎಂದು ಅಪ್ಘಾನ್​ ಮೂಲಗಳು ತಿಳಿಸಿವೆ. ಭಾರತಕ್ಕೆ ಹೋದರೆ ಹಣೆ ಬರಹ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಅಲ್ಲಿ ಉದ್ಯೋಗಕ್ಕೆ ಅವಕಾಶ ಇಲ್ಲ. ಅಲ್ಲಿ ಹೋಗಿರುವವರೇ ಅನೇಕರು ಬೇರೆ ದೇಶಗಳಿಗೆ ಹೋಗಿದ್ದಾರೆ ಎಂದು ಅಫ್ಘಾನ್ ಹಿಂದು-ಸಿಖ್​ರು ಹೇಳಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: ಅಮರೀಂದರ್ ಸಿಂಗ್​ ನೇತೃತ್ವದಲ್ಲೇ 2022ರ ಪಂಜಾಬ್ ಚುನಾವಣೆ; ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಸ್ಪಷ್ಟನೆ

ಉರ್ದು ಮಾತನಾಡುವ ವ್ಯಕ್ತಿಗಳಿಂದ ಕಾಬೂಲ್ ಕಚೇರಿ ಮೇಲೆ ದಾಳಿ; ಭಾರತೀಯ ವೀಸಾ, ಅಫ್ಘಾನ್ ಪಾಸ್​ಪೋರ್ಟ್ ವಶಪಡಿಸಿದ ದುಷ್ಕರ್ಮಿಗಳು