AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ಓವೈಸಿಗೆ ಟಾಟಾ ಹೇಳಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ

ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲೆಂದೇ ಅಬ್ಬಾಸ್ ಸಿದ್ದಿಕಿ ಜತೆ ಓವೈಸಿ ಚರ್ಚಿಸುತ್ತಿದ್ದಾರೆ. ಕಾರ್ಯಕರ್ತರನ್ನು ಜತೆಗೂಡಿಸಿಕೊಳ್ಳದೇ ತಾವೋರ್ವರೇ ಬಂಗಾಳದಲ್ಲಿ ಪಕ್ಷ ನಡೆಸಬಹುದು ಎಂದು ಅವರು ಆಲೋಚಿಸಿದಂತಿದೆ’

West Bengal Elections 2021: ಓವೈಸಿಗೆ ಟಾಟಾ ಹೇಳಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ
ಅಸಾದುದ್ದೀನ್ ಓವೈಸಿ ಮತ್ತು ಜಮಿರುಲ್ ಹಸನ್
guruganesh bhat
| Updated By: Skanda|

Updated on: Mar 20, 2021 | 12:35 PM

Share

ಕೋಲ್ಕತ್ತಾ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಅಸಾದುದ್ದೀನ್ ಓವೈಸಿಯ ಎಐಎಂಐಎಂ (AIMIM) ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಮುಖ್ಯಸ್ಥ ಜಮಿರುಲ್ ಹಸನ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎಐಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ ಬಿಜೆಪಿಗೆ ಸಹಕರಿಸುತ್ತಿದ್ದಾರೆಂದು ಆರೋಪಿಸಿರುವ ಅವರು ‘ಇಂಡಿಯನ್ ನ್ಯಾಷನಲ್ ಲೀಗ್​’ಗೆ ಸೇರಿರುವುದಾಗಿ ಶನಿವಾರ (ಮಾರ್ಚ್ 20) ತಿಳಿಸಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿಗೆ ಬೆಂಬಲ ಒದಗಿಸುವುದಾಗಿ ಜಮಿರುಲ್ ಹಸನ್ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಓವೈಸಿ ನೇತೃತ್ವದ ಎಐಎಂಐಎಂ ಇಡೀ ರಾಜ್ಯಾದ್ಯಂತ ಪಕ್ಷ ಸಂಘಟನೆ ನಡೆಸುತ್ತಿತ್ತು. ಬಂಗಾಳದ 20 ರಾಜ್ಯಗಳಲ್ಲಿ ಈಗಾಗಲೇ ಒಂದು ಮಟ್ಟಿಗೆ ಗುರುತಿಸಿಕೊಂಡಿತ್ತು. ಇದರ ಹಿಂದೆ ರಾಜ್ಯ ಘಟಕದ ಅಧ್ಯಕ್ಷ ಜಮಿರುಲ್ ಹಸನ್ ಅವರ ಅಪಾರ ಶ್ರಮವಿತ್ತು. ಆದರೆ ಜಮಿರುಲ್ ಹಸನ್ ಚುನಾವಣೆಗೆ ಇನ್ನೇನು ಒಂದೇ ವಾರ ಇರುವಾಗ ಪಕ್ಷಕ್ಕೆ ಟಾಟಾ ಹೇಳಿರುವುದು ಎಐಎಂಐಎಂಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಮಿರುಲ್ ಹಸನ್, ‘ಅಸಾದುದ್ದೀನ್ ಓವೈಸಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಂಗಾಳಕ್ಕೆ ಭೇಟಿ ನೀಡುತ್ತಿದ್ದರು. ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲೆಂದೇ ಅಬ್ಬಾಸ್ ಸಿದ್ದಿಕಿ ಜತೆ ಓವೈಸಿ ಚರ್ಚಿಸುತ್ತಿದ್ದಾರೆ. ಕಾರ್ಯಕರ್ತರನ್ನು ಜತೆಗೂಡಿಸಿಕೊಳ್ಳದೇ ತಾವೋರ್ವರೇ ಬಂಗಾಳದಲ್ಲಿ ಪಕ್ಷ ನಡೆಸಬಹುದು ಎಂದು ಅವರು ಆಲೋಚಿಸಿದಂತಿದೆ’ ಎಂದು ಹೇಳಿದ್ದಾರೆ.

‘ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲಿಸಿ ಗೆಲ್ಲಿಸುತ್ತೇವೆ. ಬಿಜೆಪಿಯ ಸುವೇಂದು ಅಧಿಕಾರಿಗೆ ಮಣ್ಣು ಮುಕ್ಕಿಸುತ್ತೇವೆ. ಅಲ್ಲದೇ, ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ. ನಮ್ಮ ಬೆಂಬಲ ಟಿಎಂಸಿಗೆ ಗೆಲುವು ತಂದುಕೊಡಲಿದೆ. ಏಕೆಂದರೆ ಎಐಎಂಐಎಂಯ ಶೇ 95ರಷ್ಟು ಕಾರ್ಯಕರ್ತರು ನನ್ನ ಕೈಯಲ್ಲಿದ್ದಾರೆ’ ಎಂದಿದ್ದಾರೆ.

ಚುನಾವಣೆಗೆ ಇದೆ ಒಂದೇ ವಾರ ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.

ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾಗಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಇದನ್ನೂ ಓದಿ: West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ

ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್