ಸಂದೇಶಖಾಲಿಯಲ್ಲಿ ಘರ್ಷಣೆ, ಅತ್ಯಾಚಾರ ಆರೋಪ; ರಾಷ್ಟ್ರಪತಿ ಆಳ್ವಿಕೆ ಹೇರಲು ಎನ್​​ಸಿಎಸ್​​ಸಿ ಶಿಫಾರಸು

|

Updated on: Feb 16, 2024 | 5:30 PM

ರಾಜ್ಯದಲ್ಲಿ ಅಪರಾಧಿಗಳು ಅಲ್ಲಿನ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಇದು ಪರಿಶಿಷ್ಟ ಜಾತಿ ಸಮುದಾಯಗಳ ಸದಸ್ಯರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಅರುಣ್ ಹಾಲ್ಡರ್ ಹೇಳಿದ್ದು, ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಎನ್‌ಸಿಎಸ್‌ಸಿ ಶಿಫಾರಸು ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಿಯೋಗವು ಇಲ್ಲಿಗೆ ಭೇಟಿ ನೀಡಲು ಶ್ರಮಿಸಿದ್ದು, ಅವರನ್ನು ತಡೆದುದಕ್ಕೆ ಪ್ರಸ್ತುತ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಂದೇಶಖಾಲಿಯಲ್ಲಿ ಘರ್ಷಣೆ, ಅತ್ಯಾಚಾರ ಆರೋಪ; ರಾಷ್ಟ್ರಪತಿ ಆಳ್ವಿಕೆ ಹೇರಲು ಎನ್​​ಸಿಎಸ್​​ಸಿ ಶಿಫಾರಸು
ಪ್ರಾತಿನಿಧಿಕ ಚಿತ್ರ
Follow us on

ಕೊಲ್ಕತ್ತಾ ಫೆಬ್ರುವರಿ 16: ಪಶ್ಚಿಮ ಬಂಗಾಳದ (West Bengal) ಸಂದೇಶಖಾಲಿ (Sandeshkhali) ಹಿಂಸಾಚಾರ ಮತ್ತು ರಾಜಕೀಯ ಉದ್ವಿಗ್ನತೆಯ ನಡುವೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು(NCSC) ಶುಕ್ರವಾರ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದೆ. ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿ ಶೇಖ್ ಷಹಜಹಾನ್ ಮತ್ತು ಅವರ ಸಹಾಯಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ನಿಯೋಗವು ಗುರುವಾರ ಸಂದೇಶಖಾಲಿಗೆ ಭೇಟಿ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿ ಸಲ್ಲಿಸಿತು. ಎನ್‌ಸಿಎಸ್‌ಸಿ ಅಧ್ಯಕ್ಷ ಅರುಣ್ ಹಾಲ್ಡರ್, “ರಾಜ್ಯದಲ್ಲಿ ಅಪರಾಧಿಗಳು ಅಲ್ಲಿನ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಇದು ಪರಿಶಿಷ್ಟ ಜಾತಿ ಸಮುದಾಯಗಳ ಸದಸ್ಯರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.” ಎಂದಿದ್ದಾರೆ.

ಶೇಖ್ ಷಹಜಹಾನ್​​ನಿಂದ ಹಲ್ಲೆಗೊಳಗಾದ ಮಹಿಳೆಯರನ್ನು ಭೇಟಿಯಾಗಲು ಪ್ರಯತ್ನಿಸುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸರ್ಕಾರದಿಂದ NCSC ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ಹಾಲ್ಡರ್ ಹೇಳಿದ್ದಾರೆ.

ಸಂದೇಶಖಾಲಿ ಗ್ರಾಮವು ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಉಪವಿಭಾಗದಲ್ಲಿರುವ ಕಾಳಿಂದಿ ನದಿಯ ದ್ವೀಪದಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಿಯೋಗವು ಇಲ್ಲಿಗೆ ಭೇಟಿ ನೀಡಲು ಶ್ರಮಿಸಿದ್ದು, ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಕಾಂಗ್ರೆಸ್ ಗುಂಪನ್ನು ಪಕ್ಷದ ರಾಜ್ಯ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ನೇತೃತ್ವ ವಹಿಸಿದ್ದರು. ಚೌಧರಿ ಬ್ಯಾನರ್ಜಿಯ ನಿರಂತರ ಟೀಕಾಕಾರರಾಗಿದ್ದು, ಬಂಗಾಳ ಸಿಎಂ ಸಮಸ್ಯೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಸರ್ವಾಧಿಕಾರ: ಅಧೀರ್ ರಂಜನ್ ಚೌಧರಿ ಮಾತು


“ಸಂದೇಶಖಾಲಿ ಪ್ರವೇಶಿಸದಂತೆ ವಿರೋಧ ಪಕ್ಷಗಳನ್ನು ಏಕೆ ತಡೆಯಲಾಗುತ್ತಿದೆ? ರಾಜ್ಯವು ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ? ಅವರು ಅದನ್ನು ಏಕೆ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ?” ಎಂದು ಕೋಲ್ಕತ್ತಾದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಚೌಧರಿ ಕೇಳಿದ್ದಾರೆ

ಈ ಹಿಂದೆ ಬಿಜೆಪಿ ಗುಂಪನ್ನೂ ತಡೆದು ನಿಲ್ಲಿಸಲಾಗಿದ್ದು, ಈಗ ಅವರು ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರನ್ನು ಭೇಟಿಯಾಗಿದ್ದಾರೆ. ಬ್ಯಾನರ್ಜಿಯವರು “ಹೆದರಿದ್ದಾರೆ” ಎಂದು ಬಿಜೆಪಿ ಆರೋಪಿಸಿದ್ದು “ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ, ಬಂಗಾಳ ಉರಿಯುತ್ತಿದೆ” ಎಂದು ಹೇಳಿದೆ.

ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಷಹಜಹಾನ್ ಅವರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸುವುದರೊಂದಿಗೆ ಜನವರಿ ಆರಂಭದಲ್ಲಿ ಇಲ್ಲಿ ಪ್ರಕ್ಷುಬ್ಧತೆ ಉಂಟಾಗಿತ್ತು. ಷಹಜಹಾನ್ ಸಹಚರರು ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ, ಇದು ಕೆಲವು ಹಿಂಸಾಚಾರ ಮತ್ತು ಇಡಿ ಸಿಬ್ಬಂದಿಗೆ ಗಾಯಗಳಿಗೆ ಕಾರಣವಾಯಿತು. ಷಹಜಹಾನ್ ಮತ್ತು ಆಪ್ತ ಸಹಾಯಕ ಜನವರಿ 5 ರಿಂದ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: Narayan Goswami: ಸಂದೇಶಖಾಲಿಯ ಮಹಿಳೆಯರ ಮೈಬಣ್ಣದ ಬಗ್ಗೆ ಮಾತಾಡಿದ ಟಿಎಂಸಿ ನಾಯಕನ ವಿರುದ್ಧ ಬಿಜೆಪಿ ಕಿಡಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬಂಗಾಳದಲ್ಲಿ, “ಯುವ ಹಿಂದೂ ವಿವಾಹಿತ ಮಹಿಳೆಯರ” ಅತ್ಯಾಚಾರ ಮತ್ತು ಭೂಕಬಳಿಕೆ ಮಾಡಲಾಗಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ. ಮಹಿಳೆಯರ ಪತಿಯನ್ನು ಅಪಹರಿಸಿ ನಂತರ ಪಕ್ಷದ ಸ್ಥಳೀಯ ಕಚೇರಿಗೆ ಕರೆಸಿ ತೃಣಮೂಲ ನಾಯಕರು ಚಿತ್ರಹಿಂಸೆ ನೀಡಿದ್ದಾರೆ. “ನಾವು ಹೋಗಲು ನಿರಾಕರಿಸಿದರೆ … ಅವರು ಅವರನ್ನು ಥಳಿಸುತ್ತಾರೆ. ನಮ್ಮನ್ನು ಬಲವಂತಪಡಿಸಲಾಯಿತು…” ಎಂದು ತನ್ನ ಗುರುತನ್ನು ಬಹಿರಂಗಪಡಿಸದ ಮಹಿಳೆಯೊಬ್ಬರು ಹೇಳಿದ್ದಾರೆ.

ವಿಶೇಷ ತನಿಖಾ ತಂಡ ಅಥವಾ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ ನಂತರ ಇಂದು ಬೆಳಿಗ್ಗೆ ಆರೋಪಗಳು ಸುಪ್ರೀಂ ಕೋರ್ಟ್‌ಗೆ ತಲುಪಿದವು. ಅತ್ಯಾಚಾರದ ದೂರುಗಳನ್ನು ದಾಖಲಿಸಲು ನಿರಾಕರಿಸಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ