ಪೂಂಚ್‌ನಲ್ಲಿ ಉಗ್ರರ ದಾಳಿಗೊಳಗಾದ ಸೇನಾ ಟ್ರಕ್ ಇಫ್ತಾರ್​​ಗಾಗಿ ಹಣ್ಣುಗಳನ್ನು ಸಾಗಿಸುತ್ತಿತ್ತು; ಈದ್ ಆಚರಿಸುವುದಿಲ್ಲ ಎಂದ ಗ್ರಾಮ

ಸರಿಸುಮಾರು ಮಧ್ಯಾಹ್ನ 3 ಗಂಟೆಗೆ, ಲೋಡ್ ಮಾಡಿದ ವಾಹನವು ಗಮ್ಯಸ್ಥಾನವನ್ನು ತಲುಪುತ್ತಿದ್ದಂತೆ, ಕೇವಲ 7-8 ಕಿಮೀ ದೂರದಲ್ಲಿ ಮತ್ತು ತೋಟ ಗಲಿಯನ್ನು ದಾಟುತ್ತಿದ್ದಂತೆ, ಮುಂಚಿತವಾಗಿ ಹೊಂಚು ಹಾಕಿದ್ದ ಅಪರಿಚಿತ ಭಯೋತ್ಪಾದಕರು ವಾಹನದ ಮೇಲೆ ವಿವಿಧ ದಿಕ್ಕುಗಳಿಂದ ದಾಳಿ ನಡೆಸಿದರು

ಪೂಂಚ್‌ನಲ್ಲಿ ಉಗ್ರರ ದಾಳಿಗೊಳಗಾದ ಸೇನಾ ಟ್ರಕ್ ಇಫ್ತಾರ್​​ಗಾಗಿ ಹಣ್ಣುಗಳನ್ನು ಸಾಗಿಸುತ್ತಿತ್ತು; ಈದ್ ಆಚರಿಸುವುದಿಲ್ಲ ಎಂದ ಗ್ರಾಮ
ದಾಳಿಗೊಳಗಾದ ಟ್ರಕ್
ರಶ್ಮಿ ಕಲ್ಲಕಟ್ಟ

Updated on: Apr 22, 2023 | 2:16 PM

ದೇಶದ ಜನರು ಶನಿವಾರ ‘ಈದ್-ಉಲ್-ಫಿತರ್'(Eid-ul-Fitr) ಅನ್ನು ಆಚರಿಸುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್‌ನಲ್ಲಿ (Poonch)  ಹಳ್ಳಿಯೊಂದು ಈದ್ ಆಚರಿಸದೇ ಇರಲು ನಿರ್ಧರಿಸಿದೆ. ಗುರಿಯೋಟ್ ಗ್ರಾಮಕ್ಕೆ ಹೊರಟಿದ್ದ ಭಾರತೀಯ ಸೇನೆಯ ಟ್ರಕ್‌ ಮೇಲೆ ಗುರುವಾರ ಹೊಂಚುದಾಳಿ ನಡೆದಿದ್ದು, ರಾಷ್ಟ್ರೀಯ ರೈಫಲ್ಸ್‌ನ  ಐವರು ಸೈನಿಕರು ಸಾವಿಗೀಡಾಗಿದ್ದರು. ಈ ಟ್ರಕ್ ಗುರುವಾರ ಸಂಜೆ ಸಗಿಯೋಟ್‌ನಲ್ಲಿ ನಡೆಯಲಿರುವ ಇಫ್ತಾರ್ ಕೂಟಕ್ಕಾಗಿ ಹಣ್ಣುಗಳು ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಾಲಕೋಟ್‌ನಲ್ಲಿರುವ ರಾಷ್ಟ್ರೀಯ ರೈಫಲ್ಸ್‌ನ ಬಸೂನಿ ಪ್ರಧಾನ ಕಚೇರಿಯಿಂದ ಟ್ರಕ್ ವಸ್ತುಗಳನ್ನು ಸಾಗಿಸಿದೆ ಎಂದು ವರದಿಯಲ್ಲಿ ಹೇಳಿದೆ. ಅಲ್ಲದೆ, ಪೂಂಚ್ ಮತ್ತು ರಾಜೌರಿ ನಡುವಿನ ಸೇನಾ ಬೆಂಗಾವಲು ಪಡೆಗಳ ಚಲನೆಯಿಂದಾಗಿ ರಾಷ್ಟ್ರೀಯ ರೈಫಲ್ಸ್  ಯೋಧರ ಗಮನಾರ್ಹ ಉಪಸ್ಥಿತಿಯನ್ನು ಹೊಂದಿರುವ ಭಿಂಬರ್ ಗಲಿ ಪ್ರದೇಶದಿಂದ ತನ್ನ ಪ್ರಯಾಣದ ಸಮಯದಲ್ಲಿ ವಾಹನವು ಹೆಚ್ಚುವರಿ ವಸ್ತುಗಳನ್ನು ಸಂಗ್ರಹಿಸಿದೆ.

ಕ್ಯಾ ಇಫ್ತಾರ್ ಜಬ್ ಹಮಾರೆ ಪಾಂಚ್ ಜವಾನ್ ಉಸ್ ಅನ್​​ಫಾರ್ಚುನೇಟ್ ಹಾದ್ಸೇ ಮೇ ಶಹೀದ್ ಹೋ ಗಯೇ (ನಮ್ಮ ಐವರು ಸೈನಿಕರು ಆ ದುರದೃಷ್ಟಕರ ಘಟನೆಯಲ್ಲಿ ಹುತಾತ್ಮರಾಗಿರುವಾಗ ಎಂಥ ಇಫ್ತಾರ್?) ಎಂದು ಇಫ್ತಾರ್‌ಗೆ ಆಹ್ವಾನಿತರಲ್ಲಿ ಒಬ್ಬರಾಗಿದ್ದ ಸಂಗಿಯೋಟ್ ಪಂಚಾಯತ್‌ನ ಸರಪಂಚ್ ಮುಖ್ತಿಯಾಜ್ ಖಾನ್ ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.

ಸಾಮಾಜಿಕ ಮಾಧ್ಯಮ ಗುಂಪುಗಳಿಂದ ಭಯೋತ್ಪಾದನಾ ದಾಳಿಯ ಬಗ್ಗೆ ಗೊತ್ತಾದ ತಕ್ಷಣ, ಗ್ರಾಮದಲ್ಲಿ ಕತ್ತಲೆ ಕವಿದಿದೆ ಎಂದು ಖಾನ್ ಹೇಳಿದರು, ಗ್ರಾಮಸ್ಥರು ಶನಿವಾರ ಈದ್ ಅನ್ನು ಆಚರಿಸುವುದಿಲ್ಲ, ಅವರು ಕೇವಲ ನಮಾಜ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಸರಿಸುಮಾರು ಮಧ್ಯಾಹ್ನ 3 ಗಂಟೆಗೆ, ಲೋಡ್ ಮಾಡಿದ ವಾಹನವು ಗಮ್ಯಸ್ಥಾನವನ್ನು ತಲುಪುತ್ತಿದ್ದಂತೆ, ಕೇವಲ 7-8 ಕಿಮೀ ದೂರದಲ್ಲಿ ಮತ್ತು ತೋಟ ಗಲಿಯನ್ನು ದಾಟುತ್ತಿದ್ದಂತೆ, ಮುಂಚಿತವಾಗಿ ಹೊಂಚು ಹಾಕಿದ್ದ ಅಪರಿಚಿತ ಭಯೋತ್ಪಾದಕರು ವಾಹನದ ಮೇಲೆ ವಿವಿಧ ದಿಕ್ಕುಗಳಿಂದ ದಾಳಿ ನಡೆಸಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

12 ಮಂದಿ ಬಂಧನ; ದುಷ್ಕರ್ಮಿಗಳ ಪತ್ತೆಗಾಗಿ  ಡ್ರೋನ್‌ಗಳು, ಸ್ನಿಫರ್ ಡಾಗ್‌ಗಳು, ಎಮ್‌ಐ ಚಾಪರ್ ಬಳಕೆ

ದುಷ್ಕರ್ಮಿಗಳಿಗಾಗಿ ಭಾರಿ ಶೋಧ ನಡೆಸುತ್ತಿದ್ದು ಎಮ್‌ಐ ಹೆಲಿಕಾಪ್ಟರ್, ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳನ್ನು ಬಳಸಲಾಗಿದೆ. ಮಾರಣಾಂತಿಕ ಹೊಂಚುದಾಳಿಗೆ ಸಂಬಂಧಿಸಿದಂತೆ ಶುಕ್ರವಾರ ಕನಿಷ್ಠ 12 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಭಯೋತ್ಪಾದಕ ಗುಂಪಿನ ಗುರುತನ್ನು ಖಚಿತಪಡಿಸಿಕೊಳ್ಳಲು ಬಂಧನಕ್ಕೊಳಗಾದವರನ್ನು ವಿವಿಧ ಹಂತಗಳಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗುಂಪು ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಸಕ್ರಿಯವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಶ್ರೀನಿವಾಸ್ ಬಿವಿ ವಿರುದ್ಧ ಕಿರುಕುಳದ ಆರೋಪ ಮಾಡಿದ ಮಹಿಳೆಯನ್ನು ಉಚ್ಚಾಟಿಸಿದ ಅಸ್ಸಾಂ ಕಾಂಗ್ರೆಸ್

ದಾಳಿಯ ಒಂದು ದಿನದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು.   ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವೂ ಹಾಜರಾಗಿದ್ದು, ಏಜೆನ್ಸಿ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Sat, 22 April 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us