17 ತಿಂಗಳ ನಂತರ ಮನೀಶ್ ಸಿಸೋಡಿಯಾಗೆ ಜಾಮೀನು; ಭಾವುಕರಾದ ಸಚಿವೆ ಅತಿಶಿ

ಇದೀಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳನ್ನು ನಡೆಸಿದ್ದಕ್ಕಾಗಿ ಫೆಬ್ರವರಿ 26, 2023 ರಂದು ಮನೀಶ್ ಸಿಸೋಡಿಯಾ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಬಂಧಿಸಿತು. ಮಾರ್ಚ್ 9, 2023 ರಂದು ಸಿಬಿಐ ಎಫ್‌ಐಆರ್‌ನಿಂದ ಉಂಟಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತು. ಅವರು ಫೆಬ್ರವರಿ 28, 2023 ರಂದು ದೆಹಲಿ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು.

17 ತಿಂಗಳ ನಂತರ ಮನೀಶ್ ಸಿಸೋಡಿಯಾಗೆ ಜಾಮೀನು; ಭಾವುಕರಾದ ಸಚಿವೆ ಅತಿಶಿ
ಅತಿಶಿ

Updated on: Aug 09, 2024 | 1:27 PM

ದೆಹಲಿ ಆಗಸ್ಟ್ 09: ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ(Delhi excise policy case) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಹಿರಿಯ ಸಹೋದ್ಯೋಗಿ ಮನೀಶ್ ಸಿಸೋಡಿಯಾಗೆ (Manish Sisodia) ಸುಪ್ರೀಂಕೋರ್ಟ್ (Supreme Court) ಜಾಮೀನು ನೀಡಿರುವುದನ್ನು ಆಮ್ ಆದ್ಮಿ ಪಕ್ಷದ ಅತಿಶಿ (Atishi) ಶುಕ್ರವಾರ ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪು “ದೆಹಲಿ ಶಿಕ್ಷಣ ಕ್ರಾಂತಿಯನ್ನು ರೂಪಿಸಿದ” ವ್ಯಕ್ತಿಗೆ (ಮನೀಶ್ ಸಿಸೋಡಿಯಾ) ಸಿಕ್ಕ ಗೆಲುವು ಎಂದು ಶಿಕ್ಷಣ ಸಚಿವೆ ಅತಿಶಿ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಮನೀಶ್ ಸಿಸೋಡಿಯಾ 17 ತಿಂಗಳಿನಿಂದ ಬಂಧನದಲ್ಲಿದ್ದು, ಇನ್ನೂ ವಿಚಾರಣೆ ಆರಂಭವಾಗಿಲ್ಲ. ಇದು ಅವರ ತ್ವರಿತ ವಿಚಾರಣೆಯ ಹಕ್ಕನ್ನು ಕಸಿದುಕೊಂಡಿದೆ ಎಂದಿದ್ದಾರೆ. “ಇಂದು ಸತ್ಯ ಗೆದ್ದಿದೆ, ದೆಹಲಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ.ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಕಾರಣ ಅವರನ್ನು ಜೈಲಿಗೆ ಹಾಕಲಾಯಿತು” ಎಂದು ಅತಿಶಿ ಭಾವುಕರಾಗಿ ಹೇಳಿದ್ದಾರೆ.


ಅದೇ ವೇಳೆ “ಸತ್ಯಮೇವ ಜಯತೆ” ಎಂದು ಅತಿಶ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೀಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳನ್ನು ನಡೆಸಿದ್ದಕ್ಕಾಗಿ ಫೆಬ್ರವರಿ 26, 2023 ರಂದು ಮನೀಶ್ ಸಿಸೋಡಿಯಾ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಬಂಧಿಸಿತು. ಮಾರ್ಚ್ 9, 2023 ರಂದು ಸಿಬಿಐ ಎಫ್‌ಐಆರ್‌ನಿಂದ ಉಂಟಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತು. ಅವರು ಫೆಬ್ರವರಿ 28, 2023 ರಂದು ದೆಹಲಿ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು.

ರಾಘವ್ ಚಡ್ಡಾ ಹೇಳಿದ್ದೇನು?

ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಕ್ಷದ ಸಂಸದ ರಾಘವ್ ಚಡ್ಡಾ, “ದೆಹಲಿ ಶಿಕ್ಷಣ ಕ್ರಾಂತಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಇಡೀ ದೇಶ ಇಂದು ಸಂತೋಷವಾಗಿದೆ. ನಾನು ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮನೀಶ್ ಜೀ ಅವರನ್ನು 530 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಬಡವರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಿದ್ದು ಅವರ ಅಪರಾಧ. ಪ್ರೀತಿಯ ಮಕ್ಕಳೇ, ನಿಮ್ಮ ಮನೀಶ್ ಅಂಕಲ್ ಹಿಂತಿರುಗುತ್ತಿದ್ದಾರೆ” ಎಂದು ರಾಘವ್ ಚಡ್ಡಾ ಹೇಳಿದರು.

ಇದನ್ನೂ ಓದಿ: ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 

ಮನೀಶ್ ಸಿಸೋಡಿಯಾ ಅವರ ಜಾಮೀನು “ಸತ್ಯದ ವಿಜಯ” ಎಂದು ಶ್ಲಾಘಿಸಿದ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, “ಈ ತೀರ್ಪು ಕೇಂದ್ರದ ಸರ್ವಾಧಿಕಾರಕ್ಕೆ ಕಪಾಳಮೋಕ್ಷವಾಗಿದೆ. ಅವರು 17 ತಿಂಗಳು ಜೈಲಿನಲ್ಲಿದ್ದರು. ಆ ತಿಂಗಳುಗಳಲ್ಲಿ ಅವನ ಜೀವನವು ನಾಶವಾಯಿತು. ಆ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ದುಡಿಯಬಹುದಿತ್ತು. ಪಕ್ಷದ ಇತರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಅವರಿಗೂ ಜಾಮೀನು ಮತ್ತು ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಈ ತೀರ್ಪಿಗಾಗಿ ನಾನು ಸುಪ್ರೀಂ ಕೋರ್ಟ್‌ಗೆ ತಲೆಬಾಗುತ್ತೇನೆ” ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ