ಪಾದಯಾತ್ರೆ ನಡೆಸುತ್ತಿದ್ದ ಆಂಧ್ರ ಸಿಎಂ ಸೋದರಿ ವೈ.ಎಸ್.ಶರ್ಮಿಳಾ ಮೇಲೆ ಜೇನುನೊಣ ದಾಳಿ; ಟವೆಲ್​ ಬೀಸುತ್ತ ಓಡಿದ ಕಾರ್ಯಕರ್ತರು

| Updated By: Lakshmi Hegde

Updated on: Mar 24, 2022 | 12:34 PM

ವೈ.ಎಸ್​.ಶರ್ಮಿಳಾರ ಪಾದಯಾತ್ರೆ ಸದ್ಯ 400 ಕಿಮೀ ಪೂರೈಸಿದೆ. ಇದೇ ಸಂದರ್ಭದಲ್ಲಿ ಅವರು ತಮ್ಮ ತಂದೆ ವೈ.ಎಸ್​.ರಾಜಶೇಖರ ರೆಡ್ಡಿ ಪ್ರತಿಮೆಯನ್ನು ಅಲೇರು ವಿಧಾನಸಭೆ ಕ್ಷೇತ್ರದ ಚಂಡೇಪಲ್ಲಿ ಎಂಬ ಗ್ರಾಮದಲ್ಲಿ ಅನಾವರಣಗೊಳಿಸಿದ್ದಾರೆ.

ಪಾದಯಾತ್ರೆ ನಡೆಸುತ್ತಿದ್ದ ಆಂಧ್ರ ಸಿಎಂ ಸೋದರಿ ವೈ.ಎಸ್.ಶರ್ಮಿಳಾ ಮೇಲೆ ಜೇನುನೊಣ ದಾಳಿ; ಟವೆಲ್​ ಬೀಸುತ್ತ ಓಡಿದ ಕಾರ್ಯಕರ್ತರು
ವೈ.ಎಸ್.ಶರ್ಮಿಳಾ
Follow us on

ಯುವಜನ ಶ್ರಮಿಕ ರೈತು ತೆಲಂಗಾಣ ಪಾರ್ಟಿ ಮುಖ್ಯಸ್ಥೆ, ಆಂಧ್ರಪ್ರದೇಶ ಸಿಎಂ ವೈ.ಎಸ್​.ಜಗನ್​ ರೆಡ್ಡಿ ಸೋದರಿ ವೈ.ಎಸ್​.ಶರ್ಮಿಳಾ ಅವರು ತೆಲಂಗಾಣ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಅಭಿವೃದ್ಧಿಯ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ, ಜನವಿರೋಧಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಶರ್ಮಿಳಾ ಈ ಪಾದಯಾತ್ರೆ ಆಯೋಜಿಸಿದ್ದಾರೆ. ಹಾಗೇ ಇಂದು ಅವರ 34ನೇ ದಿನದ ಪಾದಯಾತ್ರೆಯನ್ನು, ತಮ್ಮ ಸಹಚರರೊಂದಿಗೆ ನಲ್ಲಗೊಂಡಾ ಜಿಲ್ಲೆಯ ಅಲೇರು ವಿಧಾನಸಭಾ ಕ್ಷೇತ್ರದಲ್ಲಿ ನಡೆಸುತ್ತಿದ್ದರು. ಆದರೆ ಇಲ್ಲಿ ಅವರಿಗೆ ಅನಿರೀಕ್ಷಿತ ಸಮಸ್ಯೆ ಎದುರಾಯಿತು. ದುರ್ಶಗಾನಿಪಲ್ಲಿ ಗ್ರಾಮದಲ್ಲಿ ಒಂದು ಮರದ ಕೆಳಗೆ ನಿಂತು ಸ್ಥಳೀಯ ಜನರೊಂದಿಗೆ ಸಂವಾದ ನಡೆಸುತ್ತ, ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ  ಸಂದರ್ಭದಲ್ಲಿ ಅದೇ ಮರಕ್ಕೆ ಗೂಡುಕಟ್ಟಿದ್ದ ಜೇನು ನೊಣಗಳು ಶರ್ಮಿಳಾ ಮತ್ತು ಉಳಿದವರ ಮೇಲೆ ದಾಳಿ ನಡೆಸಿವೆ.

ಒಮ್ಮೆಲೆ ಗುಂಯ್​​ಗುಡುತ್ತ ಬಂದ ಜೇನುನೊಣಗಳನ್ನು ನೋಡಿ ಎಲ್ಲರೂ ಕಂಗಾಲಾಗಿದ್ದಾರೆ. ಉಳಿದ ಸಿಬ್ಬಂದಿಯ ಸಹಕಾರದಿಂದ ಶರ್ಮಿಳಾ ಅಪಾಯದಿಂದ ಪಾರಾಗಿದ್ದಾರೆ. ಆದರೆ ಶರ್ಮಿಳಾರ ಜತೆಗಿದ್ದ, ಪಕ್ಷದ ಹಲವು ಕಾರ್ಯಕರ್ತರಿಗೆ ಜೇನುನೊಣಗಳು ಕಚ್ಚಿವೆ. ಶರ್ಮಿಳಾರನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಟವೆಲ್​ಗಳನ್ನು ಬೀಸಿ, ಜೇನುನೊಣಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಅದಾದ ನಂತರ ಮತ್ತೆ ಪಾದಯಾತ್ರೆ ಮುಂದುವರಿದಿದೆ.

ವೈ.ಎಸ್​.ಶರ್ಮಿಳಾರ ಪಾದಯಾತ್ರೆ ಸದ್ಯ 400 ಕಿಮೀ ಪೂರೈಸಿದೆ. ಇದೇ ಸಂದರ್ಭದಲ್ಲಿ ಅವರು ತಮ್ಮ ತಂದೆ ವೈ.ಎಸ್​.ರಾಜಶೇಖರ ರೆಡ್ಡಿ ಪ್ರತಿಮೆಯನ್ನು ಅಲೇರು ವಿಧಾನಸಭೆ ಕ್ಷೇತ್ರದ ಚಂಡೇಪಲ್ಲಿ ಎಂಬ ಗ್ರಾಮದಲ್ಲಿ ಅನಾವರಣಗೊಳಿಸಿದ್ದಾರೆ. ತಾವು ಹೋದಲ್ಲೆಲ್ಲ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ತೆಲಂಗಾಣದಲ್ಲಿ ಜನರಿಗೆ ಅನೇಕ ಸಮಸ್ಯೆಗಳಿವೆ. ಆದರೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅದೆಲ್ಲ ಸಮಸ್ಯೆಗಳಿಗೆ ಪರಿಹಾರ ಒದಗುವಂತೆ ಮಾಡುವುದೇ ನಮ್ಮ ಗುರಿ ಎಂದೂ ಹೇಳಿದ್ದಾರೆ. ಇತ್ತೀಚೆಗೆ ಸಿಕಂದರಾಬಾದ್​ನಲ್ಲಿ ಟಿಂಬರ್ ಗೋದಾಮಿನಲ್ಲಿ ಬೆಂಕಿ ಅವಘಡ ಉಂಟಾಗಿ ಸುಮಾರು 11 ಕಾರ್ಮಿಕರು ಸಜೀವ ದಹನಗೊಂಡ ಘಟನೆಯ ಬಗ್ಗೆ ಶಾಕ್​ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಅಗತ್ಯ ಆರ್ಥಿಕ ನೆರವು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​ ಹೇಳಿಕೆ