Mamata Banerjee Attacked: ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ಬಂದ ಬಿಜೆಪಿ ನಾಯಕರಿಗೆ ಅನುಮತಿ ನಿರಾಕರಿಸಿದ ವೈದ್ಯರು

| Updated By: guruganesh bhat

Updated on: Mar 11, 2021 | 3:28 PM

Mamata Banerjee Attacked in Nandigram: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬಿಜೆಪಿ ಸದಸ್ಯರು ಆಸ್ಪತ್ರೆಗೆ ತಲುಪಿದ ಕೂಡಲೇ ಅಲ್ಲಿದ್ದ ಟಿಎಂಸಿ ಬೆಂಬಲಿಗರು ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

Mamata Banerjee Attacked: ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ಬಂದ ಬಿಜೆಪಿ ನಾಯಕರಿಗೆ ಅನುಮತಿ ನಿರಾಕರಿಸಿದ ವೈದ್ಯರು
ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಬುಧವಾರ ಸಂಜೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗವನ್ನು ಸಮೀಪಿಸುವುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಹೇಳಿದೆ. ಈ ಬಗ್ಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಸಭೆಯ ನಂತರ ಚುನಾವಣಾ ಆಯೋಗಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಆದಾಗ್ಯೂ, ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಪ್ರಧಾನ ವಕ್ತಾರ ಶಮಿಕ್ ಭಟ್ಟಾಚಾರ್ಯ, ಹಿರಿಯ ನಾಯಕ ತಥಾಗತ ರಾಯ್ ಸೇರಿದಂತೆ ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಎಸ್ಎಸ್​ಕೆಎಂ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಬಿಜೆಪಿ ನಾಯಕರಿಗೆ ಭೇಟಿ ಅನುಮತಿ ನಿರಾಕರಿಸಿದ್ದಾರೆ.

ನಾವು ಮಾನವೀಯ ನೆಲೆಯಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದೆವು. ಆದರೆ ವೈದ್ಯರು ನಮಗೆ ಅನುಮತಿ ನೀಡಿಲ್ಲ. ಅವರನ್ನು ಭೇಟಿ ಮಾಡಿದರೆ ಒಳ್ಳೆಯದಿತ್ತು. ನಾವು ಸಚಿವ ಅರೂಪ್ ಬಿಸ್ವಾಸ್ ಅವರನ್ನು ಭೇಟಿ ಮಾಡಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದೇವೆ. ನಮ್ಮ ಸಂದೇಶವನ್ನು ಮುಖ್ಯಮಂತ್ರಿಯವರಿಗೆ ತಿಳಿಸಿ ಎಂದು ಬಿಸ್ವಾಸ್ ಅವರಿಗೆ ಹೇಳಿದ್ದೇವೆ. ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ ಎಂದು ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತಥಾಗತ ರಾಯ್ ಹೇಳಿದ್ದಾರೆ. ಬಿಜೆಪಿ ಸದಸ್ಯರು ಆಸ್ಪತ್ರೆಗೆ ತಲುಪಿದ ಕೂಡಲೇ ಅಲ್ಲಿದ್ದ ಟಿಎಂಸಿ ಬೆಂಬಲಿಗರು ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

ಮಾರ್ಚ್ 14 ರವರೆಗೆ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ರದ್ದು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಮತಾ ಬ್ಯಾವರ್ಜಿ ಅವರ ಆರೋಗ್ಯ ಸ್ಥಿರವಾಗಿದೆ. ಮಾರ್ಚ್ 14 ರವರಗೆ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?
ಪಶ್ಜಿಮ ಬಂಗಾಳ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ತನ್ನ ಮೇಲೆ ಹಲ್ಲೆ ನಡೆದಿರುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.ಬುಧವಾರ ಸಂಜೆ 6.15ರ ಹೊತ್ತಿಗೆ ಈ ಘಟನೆ ನಡೆದಿತ್ತು. ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ನಂದಿಗ್ರಾಮದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಭದ್ರತಾ ಲೋಪ?
ನಾಲ್ಕೈದು ಮಂದಿ ನನ್ನನ್ನು ತಳ್ಳಿ ಹಾಕಿದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹೊತ್ತಲ್ಲಿ ಅಲ್ಲಿ ಸ್ಥಳೀಯ ಪೊಲೀಸರಾಗಲೀ, ಪೊಲೀಸ್ ಅಧಿಕಾರಿಗಳಾಗಲೀ ಇರಲಿಲ್ಲ. ಅಪರಿಚಿತ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ ಬ್ಯಾನರ್ಜಿ. ಬ್ಯಾನರ್ಜಿ ಅವರಿಗೆ ಝೆಡ್ ಪ್ಲಸ್ ಭದ್ರತೆ ಇರುವಾಗ ಈ ಘಟನೆ ಹೇಗೆ ಸಂಭವಿಸಿತು ಎಂಬುದು  ಪ್ರಶ್ನೆಯಾಗಿಯೇ ಉಳಿದಿದೆ.

ಪೂರ್ವ ಮಿಡ್ನಾಪುರ ನಗರದಲ್ಲಿ ಮಮತಾ ಬ್ಯಾನರ್ಜಿ ಪ್ರಚಾರ ಕಾರ್ಯಕ್ರಮ ನಡೆಸುವಾಗ ಮಾಧ್ಯಮವರ ದಂಡೇ ಇರುತ್ತಿತ್ತು. ಹೀಗಿರುವಾಗ ಹಲ್ಲೆಯ ನಡೆದಿರುವ ಬಗ್ಗೆ ಯಾವುದೇ ದೃಶ್ಯಗಳು ಇಲ್ಲ. ಗಾಯಗೊಂಡ ಮಮತಾ ಬ್ಯಾನರ್ಜಿ ಅವರನ್ನು ಭದ್ರತಾ ಸಿಬ್ಬಂದಿ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸುವ ಫೋಟೊಗಳು ಇವೆ. ನಾನು ಕಾರಿನೊಳಗಿದ್ದು ಜನರಿಗೆ ನಮಸ್ಕಾರ ಮಾಡುತ್ತಿದ್ದೆ. ದುಷ್ಕರ್ಮಿಗಳು ಬಂದು ನಮ್ಮ ಕಾರಿನ ಬಾಗಿಲಿಗೆ ಗುದ್ದಿದರು. ನನ್ನ ಕಾಲಿಗೆ ಗಾಯವಾಗಿದೆ. ಅವರು ತಂಡಗಳಾಗಿ ಬಂದಿದ್ದರೂ, ನಾಲ್ಕೈದು ಮಂದಿ ಈ ಕೃತ್ಯವೆಸಗಿದ್ದು. ಇದು ಸಂಚು ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.  ಬಿರುಲಿಯ ಅಂಚಲ್ ಮಾರುಕಟ್ಟೆಯ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯ ದೇವಾಲಯದಲ್ಲಿ ಪ್ರಾರ್ಥಿಸಿ ಅಲ್ಲಿಂದ ತೆರಳುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ ಮಮತಾ.

ಇದು ಚುನಾವಣಾ ನಾಟಕ ಎಂದ ವಿಪಕ್ಷ
ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿರುವ ಘಟನೆಯನ್ನು ಹಲವಾರು ನಾಯಕರು ಖಂಡಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನ ಕೆಲವು ನಾಯಕರು ಇದನ್ನು ಚುನಾವಣಾ ನಾಟಕ ಎಂದಿದ್ದಾರೆ. ಇದನ್ನು ನಂಬಲು ಅಸಾಧ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ನಂದಿಗ್ರಾಮದಲ್ಲಿ ಬ್ಯಾನರ್ಜಿ ಚುನಾವಣೆಯ ಬಿಸಿ ಅನುಭವಿಸುತ್ತಿದ್ದಾರೆ, ಅದಕ್ಕಾಗಿ ಈ ನಾಟಕ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಜನರ ಅನುಕಂಪಗಳಿಸುವುದಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.

ಘಟನೆ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಹಾಗು ಕೇಂದ್ರ ಸಚಿವ ಪೀಯುಷ್ ಗೋಯಲ್, ನಾನು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಾರೆ. ನೀವೆಲ್ಲರೂ ತುಂಬಾ ಜಾಣರು, ಈ ರೀತಿಯ ಘಟನೆಗಳನ್ನು ನೀವು ವರದಿ ಮಾಡಿರುತ್ತೀರಿ. ನಮ್ಮ ದೀದಿ ಗಲಿಬಿಲಿಗೊಂಡಿದ್ದಾರೆ. ಇದು ಸೋತ ಪಕ್ಷ ಮತ್ತು ಸೋತ ಅಭ್ಯರ್ಥಿಯ ಸಂಕೇತ. ಮಮತಾ ನಂದಿಗ್ರಾಮದಲ್ಲಿ ಪರಾಭವಗೊಳ್ಳುತ್ತಾರೆ ಮತ್ತು ಬಂಗಾಳದಲ್ಲಿ ಬದಲಾವಣೆ ಬರುತ್ತದೆ ಎಂದಿದ್ದಾರೆ.

ಇದನ್ನೂ ಓದಿ:  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿಯ ಮೊಣಕಾಲು, ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ: ವೈದ್ಯರ ಹೇಳಿಕೆ

ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ

Published On - 2:14 pm, Thu, 11 March 21