AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ

West Bengal Assembly Elections 2021: 4-5 ಜನರಿಂದ ದಾಳಿ ಆಗಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Apr 06, 2022 | 7:14 PM

Share

ಕೋಲ್ಕತ್ತಾ: ನಂದಿಗ್ರಾಮದಲ್ಲಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇಂದು (ಮಾರ್ಚ್ 9) ನಾಮಪತ್ರ ಸಲ್ಲಿಕೆ ಬಳಿಕ ನಂದಿಗ್ರಾಮದಲ್ಲಿ ಮಮತಾ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಆ ವೇಳೆ ನಡೆದ ಹಲ್ಲೆಯಿಂದ ಮಮತಾ ಬ್ಯಾನರ್ಜಿ ಕಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಹಲ್ಲೆ ವೇಳೆ ಯಾವೊಬ್ಬ ಪೊಲೀಸರು ಇರಲಿಲ್ಲವೆಂದು ಆರೋಪಿಸಿರುವ ಮಮತಾ, ಘಟನೆ ಬಳಿಕ ಕೋಲ್ಕತ್ತಾಗೆ ವಾಪಸಾಗಿದ್ದಾರೆ.

ನಂದಿಗ್ರಾಮದಲ್ಲಿ ಮಾಧ್ಯಮದ ಜತೆ ಮಾತನಾಡಿದ ಮಮತಾ ಬ್ಯಾನರ್ಜಿ, ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದೆ. ಕಾರ್​ನಲ್ಲಿ ಕುಳಿತಾಗ ಬಲವಂತವಾಗಿ ಕಾರ್ ಬಾಗಿಲು ಹಾಕಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಸ್ಥಳದಲ್ಲಿ ಇರಲಿಲ್ಲ. ಘಟನೆಯಿಂದ ಕಾಲಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ. 4-5 ಜನರಿಂದ ದಾಳಿ ಆಗಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮಮತಾ ಬ್ಯಾನರ್ಜಿ ಡ್ರಾಮಾ ಮಾಡುತ್ತಿದ್ದಾರೆ. ಅವರ ಸುತ್ತಮುತ್ತ ಪೊಲೀಸರು ಇರುತ್ತಾರೆ. ಹಾಗಿರುವಾಗ ಯಾರು ಕೂಡ ಅವರನ್ನು ಸುಲಭವಾಗಿ ತಲುಪಲು ಸಾಧ್ಯವಿಲ್ಲ. ನಾಲ್ಕು ಐಪಿಎಸ್ ಅಧಿಕಾರಿಗಳೂ ಇರುತ್ತಾರೆ ಅವರನ್ನು ಅಮಾನತು ಮಾಡಬೇಕು. ಜನರ ಕರುಣೆ ಗಿಟ್ಟಿಸಿಕೊಳ್ಳಲು ಬ್ಯಾನರ್ಜಿ ನಾಟಕ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಈ ಮೊದಲು ಭವಾನಿಪುರದಿಂದ ಸ್ಪರ್ಧಿಸುತ್ತಿದ್ದರು. ಈ ಬಾರಿ ತಾವು ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದರು. ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಬಿಜೆಪಿ ಮಾರ್ಚ್ 6ರಂದು ಘೋಷಿಸಿಕೊಂಡಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.

ಮುಂದಿನ ತಿಂಗಳಿನಲ್ಲಿ ನಡೆಯಲಿರುವ ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯ ಪೈಕಿ, ಪಶ್ಚಿಮ ಬಂಗಾಳ ಚುನಾವಣಾ ಕಣ ಭರ್ಜರಿ ರಂಗು ಪಡೆದುಕೊಂಡಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ಪ್ರಬಲ ಪೈಪೋಟಿ ನಡೆಯುವ ಸೂಚನೆ ಲಭಿಸಿದೆ. ಇದೀಗ, ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವೆ ಚುನಾವಣಾ ಕಣ ರಂಗೇರುವ ಸೂಚನೆ ಖಚಿತವಾಗಿದೆ.

ತೃಣಮೂಲ ಕಾಂಗ್ರೆಸ್​ನ ಮಾಜಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಕಳೆದ ಡಿಸೆಂಬರ್​ನಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನಂದಿಗ್ರಾಮದಲ್ಲಿ 50,000 ಮತಗಳಿಂದ ಸೋಲಿಸಲಿದೆ ಎಂದು ಅವರು ಹೇಳಿದ್ದರು. ಪಶ್ಚಿಮ ಬಂಗಾಳ ಈ ಬಾರಿ 8 ಹಂತದ ಮತದಾನವನ್ನು ಎದುರಿಸಲಿದೆ. ಮಾರ್ಚ್ 27ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದಲ್ಲಿ ಒಟ್ಟು 7,34,07,832 ಮತದಾರರಿದ್ದು, ಯಾರ ಕೈಗೆ ಆಡಳಿತದ ಚುಕ್ಕಾಣಿ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತಿದೆ? ಪಶ್ಚಿಮ ಬಂಗಾಳದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಟಿಎಂಸಿ, ಒಟ್ಟು 294 ಸೀಟ್​ಗಳ ಪೈಕಿ 154 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತಕ್ಕಾಗಿ 147 ಸ್ಥಾನ ಬೇಕು. ಟಿಎಂಸಿ 154 ಗೆಲ್ಲಬಹುದು ಎನ್ನಲಾಗುತ್ತಿದೆ. ಬಿಜೆಪಿ ಬರೋಬ್ಬರಿ 107 ಕ್ಷೇತ್ರಗಳನ್ನು ಗೆಲ್ಲಬಹುದು ಎಂದೂ ಸಮೀಕ್ಷೆ ತಿಳಿಸಿದೆ. ಪ್ರಸ್ತುತ ಟಿಎಂಸಿ 202 ಸ್ಥಾನ ಮತ್ತು ಬಿಜೆಪಿ 34 ಹೊಂದಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ವಿಜಯ ಸಾಧಿಸಬಹುದು ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ

Published On - 7:05 pm, Wed, 10 March 21