ಮೋದಿಯನ್ನು ಪುಟಿನ್​ಗೆ ಹೋಲಿಸಿದ ಠಾಕ್ರೆ; ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆರೆಸ್ಸೆಸ್ ನಿಷೇಧಿಸ್ತಾರೆ ಎಂದ ಮಾಜಿ ಸಿಎಂ

BJP may ban RSS in 3rd term, says Uddhav Thackeray: ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಬಿಜೆಪಿಗೆ ಇಲ್ಲಿಯವರೆಗೆ ಆರೆಸ್ಸೆಸ್ ಬೆಂಬಲ ಬೇಕಿತ್ತು. ಈಗ ಆರೆಸ್ಸೆಸ್ ಬೆಳೆದಿದೆ ಎಂದು ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ ಈ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರು ಶಿವಸೇನಾ ಪಕ್ಷವನ್ನು ಬಳಸಿ ಬಿಸಾಡಲು ಯತ್ನಿಸಿದರು. ಅದೇ ರೀತಿಯ ಆಟವನ್ನು ಆರೆಸ್ಸೆಸ್ ಜೊತೆಗೂ ಆಡುತ್ತಾರೆ ಎಂದು ಠಾಕ್ರೆ ಹೇಳಿದ್ದಾರೆ.

ಮೋದಿಯನ್ನು ಪುಟಿನ್​ಗೆ ಹೋಲಿಸಿದ ಠಾಕ್ರೆ; ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆರೆಸ್ಸೆಸ್ ನಿಷೇಧಿಸ್ತಾರೆ ಎಂದ ಮಾಜಿ ಸಿಎಂ
ಉದ್ಧವ್ ಠಾಕ್ರೆ

Updated on: May 19, 2024 | 6:27 PM

ಮುಂಬೈ, ಮೇ 19: ಬಿಜೆಪಿ ಅಧಿಕಾರಕ್ಕೆ ಮರಳಿದರೆ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸುತ್ತಾರೆ ಎಂದು ಶಿವಸೇನಾ ಯುಬಿಟಿ ಬಣದ ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಎಚ್ಚರಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಗೆ ಈಗ ಆರೆಸ್ಸೆಸ್ ಬೇಕಿಲ್ಲ. ಬಿಜೆಪಿ ಇನ್ನೂ ಎಳಸಿದ್ದಾಗ ಆರೆಸ್ಸೆಸ್ ಬೇಕಿತ್ತು. ಈಗ ಅದು ಬೆಳೆದಿದ್ದು ಆರೆಸ್ಸೆಸ್ ಬೆಂಬಲ ಬೇಕಾಗಿಲ್ಲ ಎಂದು ಹೇಳಿದ್ದಾರೆ. ನ್ಯೂಸ್18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

‘ಅವರು ಶಿವಸೇನಾ ಪಕ್ಷವನ್ನು ಬಳಸಿ ಬಿಸಾಡಲು ಯತ್ನಿಸಿದರು. ಮುಂದಿನ ದಿನಗಳಲ್ಲಿ ಅದೇ ರೀತಿಯ ಆಟವನ್ನು ಆರೆಸ್ಸೆಸ್ ಜೊತೆ ಆಡಲಿದ್ದಾರೆ. ಅದರ ಸುಳಿವನ್ನು ನಡ್ಡಾ ಕೂಡ ನೀಡಿದ್ದಾರೆ,’ ಎಂದು ಠಾಕ್ರೆ ತಿಳಿಸಿದ್ದಾರೆ.

‘ಇಲ್ಲಿಯವರೆಗೆ ಆರೆಸ್ಸೆಸ್​ನ ಅಗತ್ಯತೆ ಇತ್ತು. ಈಗ ನಾವು ಸಮರ್ಥರಿದ್ದು, ಆರೆಸ್ಸೆಸ್ ಬೇಕಿಲ್ಲ ಎಂದು ನಡ್ಡಾ ಹೇಳುತ್ತಾರೆ. ಅವರು (ಬಿಜೆಪಿ) ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಕಾರ್ಯಕರ್ತರಿಗೆ ಅಪಾಯ ಆಗುತ್ತದೆ. ಯಾಕೆಂದರೆ ಆರೆಸ್ಸೆಸ್ಸನ್ನು ಅವರು ನಿಷೇಧಿಸುತ್ತಾರೆ,’ ಎಂದು ಹೇಳಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಠಾಕ್ರೆ ಅವರು ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರೂ ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ಸಂಗತಿಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಅದಾನಿ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಹೀಗಾಗಿಯೇ ಬಹಿರಂಗ ಚರ್ಚೆಗೆ ಬರ್ತಿಲ್ಲ: ರಾಹುಲ್

ನರೇಂದ್ರ ಮೋದಿಯನ್ನು ಪುಟಿನ್​ಗೆ ಹೋಲಿಸಿದ ಠಾಕ್ರೆ

ಉದ್ಧವ್ ಠಾಕ್ರೆ ಅವರು ಭಾರತದಲ್ಲಿರುವ ಈಗಿನ ಪರಿಸ್ಥಿತಿಯನ್ನು ರಷ್ಯಾಗೆ ಹೋಲಿಸಿದ್ದಾರೆ. ‘ನಮ್ಮ ದೇಶವು ರಷ್ಯಾದಲ್ಲಿನ ಪರಿಸ್ಥಿತಿಗೆ ಹೋಗುತ್ತಿದೆ. ರಷ್ಯಾದಲ್ಲಿರುವ ರಾಜಕೀಯದಂತೆ ನಮ್ಮಲ್ಲಿನ ರಾಜಕೀಯ ಪ್ರಕ್ರಿಯೆಗಳು ಕೇವಲ ಒಬ್ಬ ನಾಯಕನಿಗೋಸ್ಕರ (ನರೇಂದ್ರ ಮೋದಿ) ಇದ್ದಂತಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ನಡುವೆ ಯಾವ ವ್ಯತ್ಯಾಸವೂ ಇಲ್ಲ. ನರೇಂದ್ರ ಮೋದಿ ಅವರು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ನಿಧಾನವಾಗಿ ನಾಶ ಮಾಡುತ್ತಿದ್ದಾರೆ,’ ಎಂದು ಉದ್ಧವ್ ಠಾಕ್ರೆ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us