ಮಹಾರಾಷ್ಟ್ರದಲ್ಲಿ ಬಾಲಕನ ಅಪಹರಣ, 25 ಲಕ್ಷ ರೂ.ಗೆ ಬೇಡಿಕೆ, ಗೋಣಿಚೀಲದಲ್ಲಿ ಶವ ಪತ್ತೆ

ಮಹಾರಾಷ್ಟ್ರದಲ್ಲಿ ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಾಲಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ವೇಳೆ ಆತನನ್ನು ಅಪಹರಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಬಾಲಕನ ಅಪಹರಣ, 25 ಲಕ್ಷ ರೂ.ಗೆ ಬೇಡಿಕೆ, ಗೋಣಿಚೀಲದಲ್ಲಿ ಶವ ಪತ್ತೆ
ಅಪಹರಣ
Image Credit source: Shutterstock

Updated on: Mar 26, 2024 | 8:18 AM

ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಗೋಣಿಚೀಲದಲ್ಲಿ ಶವ ಪತ್ತೆಯಾಗಿದೆ.
ಮಹಾರಾಷ್ಟ್ರದ ಬದ್ಲಾಪುರ್‌ನಲ್ಲಿ ಒಂಬತ್ತು ವರ್ಷದ ಬಾಲಕನನ್ನು ಮಸೀದಿಯಲ್ಲಿ ಸಂಜೆಯ ಪ್ರಾರ್ಥನೆಯ ವೇಳೆ ದುಷ್ಕರ್ಮಿಗಳು ಎಳೆದೊಯ್ದಿದ್ದಾರೆ. ಆರೋಪಿಯ ಮನೆಯಲ್ಲಿ ಗೋಣಿಚೀಲದಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

4ನೇ ತರಗತಿಯಲ್ಲಿ ಓದುತ್ತಿದ್ದ ಇಬಾದ್, ರಂಜಾನ್ ಹಬ್ಬದ ಪ್ರಯುಕ್ತ ಸಂಜೆ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ತೆರಳಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಆತಂಕಗೊಂಡು ಅಕ್ಕಪಕ್ಕದಲ್ಲಿ ಹುಡುಕಾಟ ಆರಂಭಿಸಿದ್ದರು.

ಬಳಿಕ ಇಬಾದ್‌ನ ಪೋಷಕರಿಗೆ ಅನಾಮಧೇಯ ಕರೆ ಬಂದಿದ್ದು, ಆತನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಅಪಹರಣಕಾರರು ಹೇಳಿದ್ದಲ್ಲದೆ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಟೈಲರ್ ಆಗಿರುವ ಆತನ ತಂದೆ ಮುದಾಸಿರ್ ಬುಬರ್ ಕುಲಗಾಂವ್ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್.ಸ್ವಾಮಿ ನೇತೃತ್ವದಲ್ಲಿ ಬದ್ಲಾಪುರ ಪೊಲೀಸರು ಹಾಗೂ ಅಪರಾಧ ವಿಭಾಗದ ಪೊಲೀಸರು ಗೋರೆಗಾಂವ್ ಪ್ರದೇಶದಲ್ಲಿ ರಾತ್ರಿಯಿಡೀ ಇಬಾದ್‌ಗಾಗಿ ಹುಡುಕಾಟ ನಡೆಸಿದ್ದರು. ಪೊಲೀಸರು ಕರೆ ಬಂದ ನಂಬರ್ ಟ್ರೇಸ್ ಮಾಡಿ ಅಪಹರಣಕಾರನ ಮನೆ ತಲುಪಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರು ತಮ್ಮ ಮನೆಗೆ ಬರುತ್ತಿರುವುದು ಆರೋಪಿಗೆ ಅರಿವಾಗಿತ್ತು.

ಮತ್ತಷ್ಟು ಓದಿ: ತನ್ನನ್ನು ಗೇಲಿ ಮಾಡಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ

ಪೊಲೀಸರು ತಮ್ಮ ಮನೆಗೆ ಬಂದು ತನಿಖೆ ನಡೆಸುತ್ತಾರೆ ಎಂಬ ಭಯದಿಂದ ಆರೋಪಿಗಳು ಇಬಾದ್ ನನ್ನು ಕೊಂದು ಗೋಣಿಚೀಲದಲ್ಲಿ ಶವವನ್ನು ತುಂಬಿ ಮನೆಯ ಹಿಂದೆ ಬಚ್ಚಿಟ್ಟಿದ್ದರು. ನಂತರ ಪೊಲೀಸರು ಗೋಣಿಚೀಲವನ್ನು ವಶಪಡಿಸಿಕೊಂಡರು.

ಇಬಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಡಿಎಸ್ ಸ್ವಾಮಿ ತಿಳಿಸಿದ್ದಾರೆ. ಅಪರಾಧದ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ