ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ರಿವಾಲ್ವರ್​​ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ ವಧು; ವರ ತಬ್ಬಿಬ್ಬು

|

Updated on: Apr 10, 2023 | 4:58 PM

ವಧುವಿನ ಕುಟುಂಬದವರು ಎಂದು ಹೇಳುವ ಕಪ್ಪು ಶರ್ಟ್‌ ಧರಿಸಿದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಹತ್ತಿ ವಧುವಿನ ಬಳಿ ನಿಂತರು. ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದ ಅವರು ಸೊಂಟದಿಂದ ಬಂದೂಕನ್ನು ಹೊರತೆಗೆದು ಆಕೆಯ ಕೈಗೆ ಕೊಟ್ಟಿದ್ದಾರೆ.

ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ರಿವಾಲ್ವರ್​​ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ ವಧು; ವರ ತಬ್ಬಿಬ್ಬು
ಗಾಳಿಯಲ್ಲಿ ಗುಂಡು ಹಾರಿಸಿದ ವಧು
Follow us on

ಲಕ್ನೋ: ಉತ್ತರ ಪ್ರದೇಶದ (Uttar Pradesh) ಹತ್ರಾಸ್‌ನಲ್ಲಿ (Hathras) ವೇದಿಕೆಯ ಮೇಲಿದ್ದ ವಧು ರಿವಾಲ್ವರ್‌ನಿಂದ ಐದು ಸೆಕೆಂಡ್‌ಗಳಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ ವಿಡಿಯೊ ವೈರಲ್ (Viral Video) ಆಗಿದ್ದು, ಮಹಿಳೆ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬ ವಧುವಿಗೆ ಲೋಡ್ ಮಾಡಿದ ರಿವಾಲ್ವರ್​​ನ್ನು ಕೊಡುತ್ತಿರುವುದು ವಿಡಿಯೊದಲ್ಲಿದೆ. ವರನ ಜತೆ ವೇದಿಕೆಯಲ್ಲಿ ಕುಳಿತಿದ್ದ ವಧು ಮೇಲೆ ನೋಡಿ ನಾಲ್ಕು ಬಾರಿ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಅಲ್ಲಿ ಏನು ನಡೆಯಿತು ಎಂಬುದನ್ನು ತಿಳಿಯದಂತೆ ವರ ದಿಗ್ಭ್ರಮೆಗೊಂಡಿರುವುದೂ ಕಾಣಿಸುತ್ತದೆ. ನಂತರ ವಧು ರಿವಾಲ್ವರ್ ಅನ್ನು ಆ ವ್ಯಕ್ತಿಗೆ ಹಿಂತಿರುಗಿಸುತ್ತಾಳೆ. ಇನ್ನೊಬ್ಬ ವ್ಯಕ್ತಿ ಹಿನ್ನಲೆಯಲ್ಲಿ ನಗುತ್ತಿರುವುದನ್ನು ಕೂಡಾ ವಿಡಿಯೊದಲ್ಲಿ ಕಾಣಬಹುದು. ಶುಕ್ರವಾರ ರಾತ್ರಿ ಹತ್ರಾಸ್ ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದ ಅತಿಥಿ ಗೃಹದಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ವಿಡಿಯೋವನ್ನು ಪರಿಶೀಲಿಸುತ್ತಿದ್ದಾರೆ.

ವಧುವಿನ ಕುಟುಂಬದವರು ಎಂದು ಹೇಳುವ ಕಪ್ಪು ಶರ್ಟ್‌ ಧರಿಸಿದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಹತ್ತಿ ವಧುವಿನ ಬಳಿ ನಿಂತರು. ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದ ಅವರು ಸೊಂಟದಿಂದ ಬಂದೂಕನ್ನು ಹೊರತೆಗೆದು ಆಕೆಯ ಕೈಗೆ ಕೊಟ್ಟಿದ್ದಾರೆ. ದಂಪತಿಗಳು ಪರಸ್ಪರ ಹಾರ ಹಾಕಿ, ಸಂಬಂಧಿಕರಿಂದ ಆಶೀರ್ವಾದ ಪಡೆದರು. ಇದಾದ ನಂತರ ಫೋಟೊಗಳಿಗೆ ಪೋಸ್ ನೀಡಿದ ಹಾರ ಬದಲಿಸುವ ಸಮಾರಂಭದ ನಂತರ ಗುಂಡು ಹಾರಾಟ ನಡೆದಿದೆ.

ವಿಡಿಯೊ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು ಎಂದು ಹತ್ರಾಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಬಂದೂಕು ಹಿಡಿದಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ವಿವಾಹ ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದು ಉತ್ತರ ಭಾರತದಲ್ಲಿ ಸಾಮಾನ್ಯವಾಗಿದ್ದರೂ, ಇದರಿಂದಾಗಿ ಸಾವು , ನೋವುಗಳು ಸಂಭವಿಸುವುದರಿಂದ ಇದಕ್ಕೆ ಕಾನೂನಿನ ನಿಷೇಧವಿದೆ.ಸಾರ್ವಜನಿಕ ಸಭೆಗಳು, ಧಾರ್ಮಿಕ ಸ್ಥಳಗಳು, ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಪರವಾನಗಿ ಪಡೆದ ಬಂದೂಕುಗಳಿಂದ ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದರೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ₹ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸುವ ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಕೇಂದ್ರವು ಡಿಸೆಂಬರ್ 2019 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತಂದಿದೆ. ಯಾರಿಗೂ ಗಾಯವಾಗದಿದ್ದರೂ ಪ್ರಕರಣ ದಾಖಲಿಸಬಹುದು.

ಇದನ್ನೂ ಓದಿ:Nitin Gadkari: ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಏಷ್ಯಾದ ಅತಿ ಉದ್ದದ ಸುರಂಗ ಮಾರ್ಗ ಕಾಮಗಾರಿ ಪರಿಶೀಲಿಸಿದ ನಿತಿನ್ ಗಡ್ಕರಿ

ಯಾವುದೇ ಔಪಚಾರಿಕ ದೂರು ಇಲ್ಲದಿದ್ದರೂ, ಸಂಭ್ರಮಾಚರಣೆ ವೇಳೆ ಗುಂಡು ಹಾರಾಟ ಮಾಡಿದರೆ ಪ್ರಕರಣ ದಾಖಲಿಸುವಂತೆ 2016ರಲ್ಲಿ ಲಕ್ನೋದ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Mon, 10 April 23