ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು ಹೇಳಿದ್ದೇನು?

| Updated By: ಗಣಪತಿ ಶರ್ಮ

Updated on: Aug 31, 2023 | 6:50 PM

Cauvery water dispute; ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ಕರ್ನಾಟಕ ಹೆಚ್ಚುವರಿ ನೀರು ಹರಿಸಿದೆ. ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಲಭ್ಯತೆ ಮಾಹಿತಿ ಆಧಾರದಲ್ಲಿ ನೀರು ಹರಿಸಲಿ ಎಂದು ತಮಿಳುನಾಡು ಸರ್ಕಾರ ಅಫಿಡವಿಟ್​ನಲ್ಲಿ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದೆ.

ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಆಗಸ್ಟ್ 31: ಕಾವೇರಿ ನೀರು ಹಂಚಿಕೆ ವಿವಾದಕ್ಕೆ (Cauvery water dispute) ಸಂಬಂಧಿಸಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್​​ನಲ್ಲಿ (Supreme Court) ಶುಕ್ರವಾರ ನಡೆಯಲಿದ್ದು, ಈ ವಿಚಾರವಾಗಿ ತಮಿಳುನಾಡು (Tamil Nadu) ಸರ್ಕಾರ ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಜೂನ್, ಜುಲೈ, ಆಗಸ್ಟ್​ ತಿಂಗಳಲ್ಲಿ ಕರ್ನಾಟಕವು 80 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಕೇವಲ 30 ಟಿಎಂಸಿ ನೀರು ಮಾತ್ರ ಹರಿಸಲಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದರೂ ಮಳೆ ಕೊರತೆ ನೆಪ ಹೇಳಿ ಪೂರ್ಣಪ್ರಮಾಣದ ನೀರು ಬಿಡುಗಡೆ ಮಾಡಿಲ್ಲ ಎಂದು ಅಫಿಡವಿಟ್​​ನಲ್ಲಿ ತಮಿಳುನಾಡು ಉಲ್ಲೇಖಿಸಿದೆ.

ಆಗಸ್ಟ್ 11ರಂದು 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿತ್ತು. ಅದನ್ನು ಕರ್ನಾಟಕ ಪಾಲಿಸಿಲ್ಲ. ಆದೇಶ ಹೊರಡಿಸಿದ 4-5 ದಿನಗಳಲ್ಲಿ 4,000 ಕ್ಯೂಸೆಕ್ ನೀರು ಹರಿಸಿದೆ. ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ಕರ್ನಾಟಕ ಹೆಚ್ಚುವರಿ ನೀರು ಹರಿಸಿದೆ. ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಲಭ್ಯತೆ ಮಾಹಿತಿ ಆಧಾರದಲ್ಲಿ ನೀರು ಹರಿಸಲಿ ಎಂದು ತಮಿಳುನಾಡು ಸರ್ಕಾರ ಅಫಿಡವಿಟ್​ನಲ್ಲಿ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದೆ.

ತಮಿಳುನಾಡಿನ ಕಾವೇರಿ ಪಾತ್ರದ ಪ್ರದೇಶದ ಅಂತರ್ಜಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಕರ್ನಾಟಕದ ವಾದವನ್ನು ಒಪ್ಪಲಾಗದು. ಕುಡಿಯುವ ನೀರಿನ ಅಗತ್ಯಕ್ಕೆ ಅಂತರ್ಜಲ ಬಳಕೆಯಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಅಲ್ಲದೆ, ಮೆಟ್ಟೂರು ಅಣೆಕಟ್ಟೆಯಲ್ಲಿ ನೀರು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ಅಫಿಡೆವಿಟ್​​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ: ಕಾನೂನು ತಜ್ಞರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್​ ಸಭೆ, ಹೇಳಿದ್ದಿಷ್ಟು

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ 5 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕುರುವೈ ಮತ್ತು ಸಾಂಬಾ ಬೆಳೆಯಲಾಗುತ್ತಿದೆ. ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಮೆಟ್ಟೂರಿನಲ್ಲಿ ಸಂಗ್ರಹವಾಗಿರುವ ನೀರನ್ನು ವ್ಯವಸ್ಥಿತವಾಗಿ ಬಿಡುಗಡೆ ಮಾಡಲಾಗುತ್ತದೆ ಮತ್ತು ನೀರಾವರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೀಗಾಗಿ ತಮಿಳುನಾಡು ಸರ್ಕಾರ ನೀರನ್ನು ಪೋಲು ಮಾಡುತ್ತಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಫಿಡವಿಟ್​​ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ತಮಿಳುನಾಡು ಸರ್ಕಾರವು ಪ್ರಾಧಿಕಾರದ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದೆ.

ಈ ಮಧ್ಯೆ, ಕರ್ನಾಟಕದ ಉಪ ಮುಖ್ಯಮಂತ್ರಿ, ಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್​, ದೆಹಲಿ ವಕೀಲರ ಜೊತೆಗೆ ಚರ್ಚೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ವಾಸ್ತವಾಂಶ ಗಮನಕ್ಕೆ ತಂದಿದ್ದೇವೆ. ಕರ್ನಾಟಕ ರೈತರ ಹಿತ ಕಾಯುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ