ಚಂದ್ರಬಾಬು ನಾಯ್ಡುಗೆ ಸದ್ಯಕ್ಕೆ ಇಲ್ಲ ರಿಲೀಫ್; ಸುಪ್ರೀಂಕೋರ್ಟ್​​ನಲ್ಲಿ ಅಕ್ಟೋಬರ್​​ 9ರಂದು ಮುಂದಿನ ವಿಚಾರಣೆ

|

Updated on: Oct 03, 2023 | 2:12 PM

Chandrababu Naidu: ಕೌಶಲ್ಯಾಭಿವೃದ್ಧಿ ಹಗರಣ ಆರೋಪ ಎದುರಿಸುತ್ತಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕನಿಷ್ಠ ಆರು ದಿನಗಳ ಕಾಲ ಜೈಲಿನಲ್ಲಿ ಇರಲಿದ್ದಾರೆ. ಅಕ್ಟೋಬರ್ 9 ರಂದು ನಾಯ್ಡು ಅವರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ನ್ಯಾಯಾಲಯದ ಮುಂದೆ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಸಂಬಂಧಪಟ್ಟ ಎಲ್ಲಾ ಕಕ್ಷಿದಾರರರಲ್ಲಿ ಹೇಳಿದೆ.

ಚಂದ್ರಬಾಬು ನಾಯ್ಡುಗೆ ಸದ್ಯಕ್ಕೆ ಇಲ್ಲ ರಿಲೀಫ್; ಸುಪ್ರೀಂಕೋರ್ಟ್​​ನಲ್ಲಿ ಅಕ್ಟೋಬರ್​​ 9ರಂದು ಮುಂದಿನ ವಿಚಾರಣೆ
ಚಂದ್ರಬಾಬು ನಾಯ್ಡು
Follow us on

ದೆಹಲಿ ಅಕ್ಟೋಬರ್ 03: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು (N Chandrababu Naidu) ಅವರು ಕೌಶಲ್ಯಾಭಿವೃದ್ಧಿ ಹಗರಣಕ್ಕೆ (skill development scam) ಸಂಬಂಧಿಸಿದಂತೆ ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court )ಇಂದು (ಮಂಗಳವಾರ) ವಿಚಾರಣೆ ನಡೆಸಿದೆ. ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಾಯ್ಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 9ಕ್ಕೆ ಮುಂದೂಡಿದೆ. ಅದೇ ವೇಳೆ ಹೈಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಸಂಪೂರ್ಣ ಸಂಗ್ರಹವನ್ನು ತನ್ನ ಮುಂದೆ ಇಡುವಂತೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರವನ್ನು ಕೇಳಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. ಕಳೆದ ವಾರ, ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ಅವರ ಅರ್ಜಿಯನ್ನು ಮುಂದೂಡಲಾಯಿತು.

ಎಫ್‌ಐಆರ್ ರದ್ದುಪಡಿಸುವ ತಮ್ಮ ಅರ್ಜಿಯನ್ನು ವಜಾಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್‌ನ 22.09.2023ರ ತೀರ್ಪನ್ನು ಪ್ರಶ್ನಿಸಿ ನಾಯ್ಡು ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ. ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿದ್ದು ಅವರು ಅಂದಿನಿಂದ ಬಂಧನದಲ್ಲಿದ್ದಾರೆ.

ಇದನ್ನೂ ಓದಿ:  ಜೈಲಿನಲ್ಲಿ ಚಂದ್ರಬಾಬು ನಾಯ್ಡು ದೀಕ್ಷೆ ಮುಂದುವರಿಕೆ, ಗಾಂಧಿ ಜಯಂತಿ ದಿನ ಟಿಡಿಪಿ ಪದಾಧಿಕಾರಿಗಳ ಸತ್ಯಮೇವ ಜಯತೆ ತಾರಕಕ್ಕೆ

ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಕೆ ಶ್ರೀನಿವಾಸ ರೆಡ್ಡಿ ಅವರ ಪೀಠವು 2021 ರಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿನ ತನಿಖೆ ಬಹುತೇಕ ಅಂತಿಮ ಹಂತದಲ್ಲಿದೆ. ಸುಮಾರು 140 ಸಾಕ್ಷಿಗಳನ್ನು ಪರೀಕ್ಷಿಸಿ 4000 ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಗಮನಿಸುವ ಮೂಲಕ ನಾಯ್ಡು ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಇಂತಹ ಮುಂದುವರಿದ ಹಂತದಲ್ಲಿ ತನಿಖೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಮಂಜೂರಾತಿ ಕೊರತೆಯಿಂದಾಗಿ ಎಫ್‌ಐಆರ್ ಸಮರ್ಥನೀಯವಲ್ಲ ಎಂದು ನಾಯ್ಡು ಎತ್ತಿದ ಕಾನೂನು ವಾದವನ್ನೂ ಹೈಕೋರ್ಟ್ ತಿರಸ್ಕರಿಸಿದೆ. ದಾಖಲೆಗಳ ತಯಾರಿಕೆ ಮತ್ತು ಹಣ ದುರುಪಯೋಗಕ್ಕೆ ಸಂಬಂಧಿಸಿದ ಆರೋಪಗಳನ್ನು ಅಧಿಕೃತ ಕಾರ್ಯಗಳ ಭಾಗವಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಆದ್ದರಿಂದ ಸೆಕ್ಷನ್ 17A ಅಡಿಯಲ್ಲಿ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಪೀಠವು ಗಮನಿಸಿತ್ತು.

ಇಂದು ನಡೆದ ವಿಚಾರಣೆ ವೇಳೆ ವಕೀಲರಾದ ಗುಂಟೂರು ಪ್ರಮೋದ್ ಕುಮಾರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ನಾಯ್ಡು ವಿರುದ್ಧ ಸಲ್ಲಿಸಲಾಗಿರುವ ಎಫ್‌ಐಆರ್ ರಾಜ್ಯದಲ್ಲಿನ ಅತಿದೊಡ್ಡ ಪ್ರತಿಪಕ್ಷವನ್ನು ಹಳಿತಪ್ಪಿಸಲು ಆಡಳಿತದ ಸೇಡಿನ ಸಂಯೋಜಿತ ಅಭಿಯಾನವಾಗಿದೆ ಎಂದು ಹೇಳಿದೆ.  21 ತಿಂಗಳ ಹಿಂದೆ ದಾಖಲಾದ ಎಫ್‌ಐಆರ್‌ನಲ್ಲಿ ಅರ್ಜಿದಾರ ನಾಯ್ಡು ಅವರನ್ನು ಹೆಸರಿಸಲಾಗಿದೆ. ಆನಂತರ ಅವರನ್ನು ಕಾನೂನುಬಾಹಿರ ರೀತಿಯಲ್ಲಿ ಬಂಧಿಸಲಾಯಿತು. ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಇದು ಕೇವಲ ರಾಜಕೀಯ ಕಾರಣಗಳಿಂದ ಪ್ರೇರೇಪಿಸಲ್ಪಟ್ಟಿದೆ ಅವರ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲದಿದ್ದರೂ, ಅರ್ಜಿದಾರರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲಿ ಅಕ್ರಮ ಮತ್ತು ಪ್ರೇರಿತ ತನಿಖೆಯನ್ನು ಅನುಭವಿಸುವಂತೆ ಮಾಡಲಾಗುತ್ತಿದೆ ಎಂದು ವಿಶೇಷ ರಜೆ ಅರ್ಜಿಯಲ್ಲಿ ಹೇಳಲಾಗಿದೆ.

ಒಂದು ವಾರದ ಹಿಂದೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ 371 ಕೋಟಿ ರೂಪಾಯಿಗಳ ಕೌಶಲ್ಯಾಭಿವೃದ್ಧಿ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಮತ್ತು ನ್ಯಾಯಾಂಗ ಬಂಧನವನ್ನು ಕೊನೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ತನಿಖೆ ಅಂತಿಮ ಹಂತದಲ್ಲಿದ್ದಾಗ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ರದ್ದು ಅರ್ಜಿಯನ್ನು ವಜಾಗೊಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Tue, 3 October 23