ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಅಪ್ರಾಪ್ತ ಯುವತಿಯ ಗರ್ಭಧಾರಣೆಯ ಮುಕ್ತಾಯದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದು, ಆಕೆ ಗರ್ಭವತಿಯಾದರೆ ಆ ಗರ್ಭವನ್ನು ಮುಂದುವರೆಸಬೇಕೆಂದು ಒತ್ತಾಯ ಹೇರಲು ಸಾಧ್ಯವಿಲ್ಲ. ಅದು ಆಕೆಯ ವೈಯಕ್ತಿಕ ಆಯ್ಕೆಯಾಗಿರಬೇಕು. ಹೀಗಾಗಿ, ಆದಷ್ಟು ಬೇಗ ಕೇಂದ್ರ ಸರ್ಕಾರ ಈ ಬಗ್ಗೆ ಕಾನೂನಿಗೆ ಬದಲಾವಣೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Supreme Court
Image Credit source: PTI

Updated on: Apr 30, 2026 | 3:33 PM

ನವದೆಹಲಿ, ಏಪ್ರಿಲ್ 30: ಅತ್ಯಾಚಾರಕ್ಕೊಳಗಾದ 15 ವರ್ಷದ ಮಗುವಿನ 31 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಿಂದಿನ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತರಾಟೆಗೆ ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಗರ್ಭಧಾರಣೆಯನ್ನು ಹೊರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅತ್ಯಾಚಾರ ಸಂತ್ರಸ್ತೆ 20 ವಾರಗಳನ್ನು ಮೀರಿದ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿಸಲು ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಪ್ರಾಪ್ತ ಬಾಲಕಿ ಸೇರಿದಂತೆ ಅತ್ಯಾಚಾರದಿಂದ ಗರ್ಭಿಣಿಯಾದವರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿರುತ್ತದೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು 15 ವರ್ಷದ ಬಾಲಕಿಯೊಬ್ಬಳು ತನ್ನ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಏಮ್ಸ್ ಸಲ್ಲಿಸಿದ ಮನವಿಗೆ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿತು. ಆ ಬಾಲಕಿಯ ಗರ್ಭಪಾತಕ್ಕೆ ಅನುವು ಮಾಡಿಕೊಡುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಆಸ್ಪತ್ರೆಯ ಬಗ್ಗೆ ಕೋರ್ಟ್ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್

“ಅತ್ಯಾಚಾರ ಇತ್ಯಾದಿಗಳಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಗರ್ಭಪಾತಕ್ಕೆ ಸಮಯದ ಮಿತಿ ಇರುವುದಿಲ್ಲ ಎಂದು ದಯವಿಟ್ಟು ನಿಮ್ಮ ಕಾನೂನನ್ನು ತಿದ್ದುಪಡಿ ಮಾಡಿ. ಅಂತಹ ಪ್ರಕರಣದ ವಿಚಾರಣೆಗಳು ಒಂದು ವಾರದೊಳಗೆ ಪೂರ್ಣಗೊಳ್ಳುವಂತೆ ಕಾನೂನನ್ನು ತಿದ್ದುಪಡಿ ಮಾಡಿ. ವಿಚಾರಣೆಯ ಬಾಕಿ ಇರುವ ಆಘಾತವನ್ನು ಆ ಮಗು ಏಕೆ ಅನುಭವಿಸಬೇಕು” ಎಂದು ಸಿಜೆಐ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

“ಅತ್ಯಾಚಾರದ ನಂತರ ಆಕೆ ಅನುಭವಿಸಿದ ಸಂಕಟವನ್ನು ಯಾವುದೂ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಇಂದು ಬೆಳಿಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಖಂಡಿಸುತ್ತಾ ಹೇಳಿದ್ದಾರೆ. “ನಾಗರಿಕರಿಗೆ ಗೌರವ ನೀಡಿ, ಮೇಡಂ. ನಿಮಗೆ ನ್ಯಾಯಾಲಯದ ಆದೇಶ ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ. ಸಂತ್ರಸ್ತೆ ಅಥವಾ ಅವರ ಕುಟುಂಬ ಮಾತ್ರ ಪ್ರಶ್ನಿಸಬಹುದು. ನಾವು ಜನರ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುತ್ತೇವೆ. ಅದನ್ನು ನೀವು ಸಹ ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ಈ ಹಿಂದೆ ಅಪ್ರಾಪ್ತ ವಯಸ್ಕಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿತ್ತು. ಗರ್ಭಧಾರಣೆಯನ್ನು ಮುಂದುವರಿಸಲು ಅನುಮತಿ ನೀಡುವುದು ಆಕೆಯ ಘನತೆಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us