ಬೆಟ್ಟಿಂಗ್ ಆ್ಯಪ್​ ಪ್ರವರ್ತಕರಿಂದ 508 ಕೋಟಿ ಪಡೆದ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್​: ಇ.ಡಿ ಗಂಭೀರ ಆರೋಪ

| Updated By: ಗಣಪತಿ ಶರ್ಮ

Updated on: Nov 04, 2023 | 12:20 PM

ಮಹದೇವ್ ಆ್ಯಪ್‌ನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಶುಭಂ ಸೋನಿ (ಅಲಿಯಾಸ್ ಪಿಂಟು) ತನಗೆ 5.39 ಕೋಟಿ ರೂಪಾಯಿ ನಗದು ನೀಡಿದ್ದರು ಮತ್ತು ಇದನ್ನು ಛತ್ತೀಸ್​​ಗಢದ ಮುಖ್ಯಮಂತ್ರಿಯವರ ಸಹವರ್ತಿಗಳಿಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದರು ಎಂದು ವಿಚಾರಣೆಯ ಸಮಯದಲ್ಲಿ ದಾಸ್ ಒಪ್ಪಿಕೊಂಡಿದ್ದಾನೆ ಎಂದು ಇಡಿ ಹೇಳಿಕೊಂಡಿದೆ.

ಬೆಟ್ಟಿಂಗ್ ಆ್ಯಪ್​ ಪ್ರವರ್ತಕರಿಂದ 508 ಕೋಟಿ ಪಡೆದ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್​: ಇ.ಡಿ ಗಂಭೀರ ಆರೋಪ
ಭೂಪೇಶ್ ಬಘೇಲ್
Follow us on

ನವದೆಹಲಿ, ನವೆಂಬರ್ 4: ಛತ್ತೀಸ್​ಗಢದಲ್ಲಿ ಇನ್ನೇನು ಚುನಾವಣೆ ಸಮೀಪಿಸುತ್ತಿರುವಾಗಲೇ ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರಿಗೆ ಸಂಕಷ್ಟ ಎದುರಾಗಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್​ ಪ್ರವರ್ತಕರಿಂದ ಬಘೇಲ್ ಅವರು 508 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ ಎಂದಿದೆ. ಆದರೆ, ಆರೋಪಗಳನ್ನು ಬಘೇಲ್ ಅಲ್ಲಗಳೆದಿದ್ದಾರೆ. ಇದೊಂದು ತಮಾಷೆ ಎಂದು ಅವರು ಲೇವಡಿ ಮಾಡಿದ್ದಾರೆ.

‘ಕ್ಯಾಷ್ ಕೊರಿಯರ್’ನ ಅಸೀಮ್ ದಾಸ್ ಹೇಳಿಕೆ, ಮಹದೇವ್ ಆ್ಯಪ್​ನ ಉನ್ನತ ಕಾರ್ಯನಿರ್ವಹಣಾಧಿಕಾರಿ ಶುಭಂ ಸೋನಿ ಅವರ ಫೋನ್ ಮತ್ತು ಇಮೇಲ್‌ಗಳ ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಹೇಳಿಕೆ ನೀಡಿದೆ.

ಅಸೀಮ್ ದಾಸ್​ನನ್ನು ಗುರುವಾರ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಮಹದೇವ್ ಆ್ಯಪ್‌ನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಶುಭಂ ಸೋನಿ (ಅಲಿಯಾಸ್ ಪಿಂಟು) ತನಗೆ 5.39 ಕೋಟಿ ರೂಪಾಯಿ ನಗದು ನೀಡಿದ್ದರು ಮತ್ತು ಇದನ್ನು ಛತ್ತೀಸ್​​ಗಢದ ಮುಖ್ಯಮಂತ್ರಿಯವರ ಸಹವರ್ತಿಗಳಿಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದರು ಎಂದು ವಿಚಾರಣೆಯ ಸಮಯದಲ್ಲಿ ದಾಸ್ ಒಪ್ಪಿಕೊಂಡಿದ್ದಾನೆ ಎಂದು ಇಡಿ ಹೇಳಿಕೊಂಡಿದೆ.

ಅಸೀಂ ದಾಸ್‌ನಿಂದ ವಶಪಡಿಸಿಕೊಳ್ಳಲಾದ ಫೋನ್‌ನಿಂದ ವಶಪಡಿಸಿಕೊಂಡ ಫೊರೆನ್ಸಿಕ್ ಮತ್ತು ಡಿಜಿಟಲ್ ಸಾಕ್ಷ್ಯಗಳು ಸಹ ಅವರು ಮಾಡಿದ ಆರೋಪಗಳನ್ನು ದೃಢೀಕರಿಸುತ್ತವೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ಹಿಂದೆ ನಿಯಮಿತ ಪಾವತಿಗಳನ್ನು ಮಾಡಲಾಗಿದೆ ಮತ್ತು ಇದುವರೆಗೆ ಸುಮಾರು 508 ಕೋಟಿ ರೂ.ಗಳನ್ನು ಮಹದೇವ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಪಾವತಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇದನ್ನೂ ಓದಿ: ರಾಜಸ್ಥಾನ: ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಪಿಎಫ್​ಐನ ಇಬ್ಬರು ಸದಸ್ಯರನ್ನು ಬಂಧಿಸಿದ ಎನ್​ಐಎ

ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಬಘೇಲ್ ತಿರಸ್ಕಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ತಮ್ಮ ಸರ್ಕಾರವೇ ಆರಂಭಿಸಿತ್ತು ಎಂದು ಅವರು ತಿರುಗೇಟು ನೀಡಿದ್ದಾರೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೆವು ಮತ್ತು 400 ಜನರನ್ನು ಬಂಧಿಸಿದ್ದೇವೆ. ಲುಕ್ಔಟ್ ನೋಟಿಸ್ ಸಹ ಹೊರಡಿಸಲಾಗಿದೆ. ಕೇಂದ್ರ ಸರ್ಕಾರವು ಪ್ರವರ್ತಕರ ವಿರುದ್ಧ ಏಕೆ ರೆಡ್-ಕಾರ್ನರ್ ನೋಟಿಸ್ ಹೊರಡಿಸುತ್ತಿಲ್ಲ? ಅವರು ಯಾಕೆ ಆ್ಯಪ್ ಅನ್ನು ಬ್ಯಾನ್ ಮಾಡುತ್ತಿಲ್ಲ ಎಂದು ಬಘೇಲ್ ಪ್ರಶ್ನಿಸಿದ್ದಾರೆ.

ಛತ್ತೀಸ್​ಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ