Ghulam Nabi Azad: ಕಾಂಗ್ರೆಸ್​ನಲ್ಲಿ ಬಂಡಾಯ; ಹಲವು ಸಮಿತಿಗಳಿಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 17, 2022 | 8:34 AM

ಈ ಮೊದಲು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರನ್ನೇ ಅಧ್ಯಕ್ಷರಾಗಿ ನೇಮಿಸಲಾಗುವುದು ಎಂಬ ಮಾತುಗಳು ಹರಿದಾಡುತ್ತಿದ್ದವು.

Ghulam Nabi Azad: ಕಾಂಗ್ರೆಸ್​ನಲ್ಲಿ ಬಂಡಾಯ; ಹಲವು ಸಮಿತಿಗಳಿಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ
ಸೋನಿಯಾ ಗಾಂಧಿ ಅವರೊಂದಿಗೆ ಗುಲಾಂ ನಬಿ ಆಜಾದ್ (ಸಂಗ್ರಹ ಚಿತ್ರ)
Follow us on

ದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ (Ghulam Nabi Azad) ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ಸಮಿತಿಗಳಿಗೆ (Congress Party) ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಕ್ಷದ ಉನ್ನತ ನಾಯಕತ್ವದ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿದ್ದಾರೆ. ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ (JKCC) ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದಾರೆ.

ಈ ನೇಮಕಾತಿಯ ಬಗ್ಗೆ ಆಜಾದ್ ಅಸಮಾಧಾನ ಹೊಂದಿದ್ದರು. ಕಾಂಗ್ರೆಸ್​ನ ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರಾಗಿದ್ದ ಅವರು ರಾಜ್ಯಮಟ್ಟದ ಸಮಿತಿಗೆ ನೇಮಿಸಿದ್ದನ್ನು ಹಿಂಬಡ್ತಿ (demotion) ಎಂದೇ ಪರಿಗಣಸಿದ್ದರು. ತಮ್ಮ ರಾಜೀನಾಮೆಗೆ ಆರೋಗ್ಯದ ಕಾರಣಗಳನ್ನು ಆಜಾದ್ ಮುಂದಿಟ್ಟಿದ್ದಾರೆ. ಆದರೆ ಅವರ ರಾಜೀನಾಮೆಯ ನಿಜವಾದ ಕಾರಣಗಳು ಬೇರೆಯೇ ಇವೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರ ಆಪ್ತ ಗುಲಾಂ ಅಹ್ಮದ್‌ ಮಿರ್‌ ಈ ಹಿಂದೆ ಅಧ್ಯಕ್ಷರಾಗಿದ್ದರು. ಜುಲೈ 6ರಂದು ಮಿರ್‌ ಸಲ್ಲಿಸಿದ್ದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದರು. ನಿನ್ನೆಯಷ್ಟೇ ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರಾಗಿ ವಿಕರ್ ರಸೂಲ್ ವಾನಿ ಅವರನ್ನು ನೇಮಿಸಲಾಗಿತ್ತು. ಈ ಬೆಳವಣಿಗೆಯೂ ಗುಲಾಂ ನಬಿ ಆಜಾದ್ ಅವರಿಗೆ ಸರಿಕಂಡಿರಲಿಲ್ಲ.

ಈ ಮೊದಲು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರನ್ನೇ ಅಧ್ಯಕ್ಷರಾಗಿ ನೇಮಿಸಲಾಗುವುದು ಎಂಬ ಮಾತುಗಳು ಹರಿದಾಡುತ್ತಿದ್ದವು.

ಆಜಾದ್ ಅಧ್ಯಕ್ಷರಾಗಿ ಮತ್ತು ತಾರಿಕ್ ಹಮೀದ್ ಕರ್ ಉಪಾಧ್ಯಕ್ಷರಾಗಿ 11 ಸದಸ್ಯರನ್ನು ಒಳಗೊಂಡ ಪ್ರಚಾರ ಸಮಿತಿಯನ್ನು ಕಾಂಗ್ರೆಸ್‌ ರಚಿಸಿತ್ತು. ಆದರೆ, ಪಿಸಿಸಿ ಮುಖ್ಯಸ್ಥರ ನೇಮಕ ಮಾಡಿರುವುದು ಪಕ್ಷದ ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಮುಂdಇನ ವಿಧಾನಸಭಾ ಚುನಾವಣೆಯಲ್ಲಿ ಆಜಾದ್ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಏಕಾಏಕಿ ಈ ತೀರ್ಮಾನ ಬದಲಾಗಿತ್ತು.

ಜಮ್ಮು ಕಾಶ್ಮೀರದಲ್ಲಿ ತಕ್ಕಮಟ್ಟಿಗೆ ಪ್ರಭಾವ ಹೊಂದಿರುವ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯು ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಒಂದು ಗುಲಾಂ ನಬಿ ಅವರು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರೆ, ಬಿಜೆಪಿ ಅಥವಾ ಇತರ ಪಕ್ಷಗಳ ಪರವಾಗಿ ಒಲವು ತೋರಿದರೆ ಅದರ ಪರಿಣಾಮ ತೀವ್ರವಾಗಿಯೇ ಇರುತ್ತವೆ ಎಂದು ಹೇಳಲಾಗುತ್ತಿದೆ.

ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಸೋನಿಯಾ ಗಾಂಧಿ ಅವರು ಪ್ರಚಾರ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಸಂಯೋಜನಾ ಸಮಿತಿ, ಪ್ರಣಾಳಿಕೆ ಸಮಿತಿ, ಪ್ರಕಾಶನಾ ಸಮಿತಿ, ಶಿಸ್ತು ಸಮಿತಿ ಮತ್ತು ಪ್ರದೇಶ ಚುನಾವಣಾ ಸಮಿತಿಗಳನ್ನು ರಚಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾರರ ಪಟ್ಟಿ ಮತ್ತು ಕ್ಷೇತ್ರ ಪುನರ್​ವಿಂಗಡನೆ ಪ್ರಯತ್ನಗಳು ಅಂತಿಮಗೊಂಡ ನಂತರ ಚುನಾವಣೆ ನಡೆಯಲಿದೆ. ಇದೇ ವರ್ಷದಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಆದರೆ ಕಾಶ್ಮೀರದಲ್ಲಿ ಚಳಿ ತೀವ್ರಗೊಳ್ಳುವ ಮೊದಲು ಈ ಕ್ಷೇತ್ರ ಪುನರ್​ವಿಂಗಡನೆ ಶಿಷ್ಟಾಚಾರಗಳು ಅಂತಿಮಗೊಳ್ಳದಿದ್ದರೆ ಚುನಾವಣೆ ಒಂದು ವರ್ಷ ಮುಂದಕ್ಕೆ ತಡವಾಗಬಹುದು.