AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಇಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರ ಹಿಂದೆ ಈ ಉದ್ದೇಶವೂ ಇದೆ: ಅಮಿತ್ ಶಾ ಹೇಳಿದ್ದೇನು?

ಕಾಂಗ್ರೆಸ್ ಈ ದಿನವನ್ನು ಪ್ರತಿಭಟನೆಗಾಗಿ ಆಯ್ಕೆ ಮಾಡಿದ್ದು ಕಪ್ಪು ಬಟ್ಟೆಗಳನ್ನು ಧರಿಸಿದೆ. ಯಾಕೆಂದರೆ ಅವರು ತಮ್ಮ ತುಷ್ಟೀಕರಣದ ರಾಜಕೀಯವನ್ನು ಮತ್ತಷ್ಟು ಉತ್ತೇಜಿಸಲು ಸೂಕ್ಷ್ಮ ಸಂದೇಶವನ್ನು ನೀಡಲು ಬಯಸುತ್ತಾರೆ

ಕಾಂಗ್ರೆಸ್ ಇಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರ ಹಿಂದೆ ಈ ಉದ್ದೇಶವೂ ಇದೆ: ಅಮಿತ್ ಶಾ ಹೇಳಿದ್ದೇನು?
ಅಮಿತ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 05, 2022 | 8:56 PM

ಕಾಂಗ್ರೆಸ್ ಪಕ್ಷದ ನಾಯಕರು ಇಂದು ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ನಡೆಸಿದ್ದರ ಹಿಂದೆ ಹೀಗೂ ಒಂದು ಉದ್ದೇಶವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಕಾಂಗ್ರೆಸ್ (Congress) ಈ ದಿನವನ್ನು ಪ್ರತಿಭಟನೆಗಾಗಿ ಆಯ್ಕೆ ಮಾಡಿದ್ದು ಕಪ್ಪು ಬಟ್ಟೆಗಳನ್ನು ಧರಿಸಿದೆ. ಯಾಕೆಂದರೆ ಅವರು ತಮ್ಮ ತುಷ್ಟೀಕರಣದ ರಾಜಕೀಯವನ್ನು ಮತ್ತಷ್ಟು ಉತ್ತೇಜಿಸಲು ಸೂಕ್ಷ್ಮ ಸಂದೇಶವನ್ನು ನೀಡಲು ಬಯಸುತ್ತಾರೆ. 2020ರಲ್ಲಿ ದಿನವೇ ಪ್ರಧಾನಿ ಮೋದಿ ರಾಮ ಜನ್ಮಭೂಮಿಗೆ ಅಡಿಪಾಯ ಹಾಕಿದ್ದು ಎಂದಿದ್ದಾರೆ ಅಮಿತ್ ಶಾ.ಇಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ram temple in Ayodhya)ಶಂಕುಸ್ಥಾಪನಾ ಸಮಾರಂಭದ ವರ್ಷಾಚರಣೆ ಎಂದ ಅಮಿತ್ ಶಾ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ರಾಮ ಜನ್ಮಭೂಮಿಯ ಪ್ರತಿಷ್ಠಾಪನಾ ಸಮಾರಂಭದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ತುಷ್ಟೀಕರಣ ನೀತಿಯನ್ನು ಮುಂದುವರಿಸುತ್ತಿದ್ದೇವೆ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸುತ್ತಿದೆ ಎಂದಿದ್ದಾರೆ. ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಕಾಂಗ್ರೆಸ್‌ನ “ಚಲೋ ರಾಷ್ಟ್ರಪತಿ ಭವನ” ಮೆರವಣಿಗೆ ಕಳೆದ ವಾರವೇ ಯೋಜಿಸಲಾಗಿತ್ತು. ಪ್ರತಿಭಟನೆಗೆ ಅನುಮತಿ ತಡೆದ ದೆಹಲಿ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.

“ಇದು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ. ಅವರು ಪ್ರತಿದಿನ ಏಕೆ ಪ್ರತಿಭಟನೆಗಳನ್ನು ನಡೆಸುತ್ತಾರೆ? ಕಾಂಗ್ರೆಸ್ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ತುಷ್ಟೀಕರಣ ನೀತಿಯನ್ನು ಮರೆಮಾಚುವ ರೀತಿಯಲ್ಲಿ ವಿಸ್ತರಿಸಿದ್ದಾರೆ ಎಂದು ಶಾ ಹೇಳಿದ್ದಾರೆ. ಪ್ರತಿಭಟನೆಯ ಸಮಯವನ್ನು ಪ್ರಶ್ನಿಸಿದ ಅಮಿತ್ ಶಾ ಇಂದು, ಜಾರಿ ನಿರ್ದೇಶನಾಲಯವು ಯಾರನ್ನೂ ಕರೆದಿಲ್ಲ ಅಥವಾ ಯಾರನ್ನೂ ವಿಚಾರಣೆ ಮಾಡಿಲ್ಲ, ಯಾವುದೇ ದಾಳಿ ನಡೆದಿಲ್ಲ .ಇಂದು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

550 ವರ್ಷಗಳ ಹಿಂದಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಒದಗಿಸಿ, ರಾಮ ಜನ್ಮಭೂಮಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದು ಇದೇ ದಿನ. ದೇಶದಲ್ಲಿ ಎಲ್ಲಿಯೂ ಗಲಭೆ ಹಿಂಸಾಚಾರ ನಡೆದಿಲ್ಲ. ತುಷ್ಟೀಕರಣ ನೀತಿ ದೇಶಕ್ಕಾಗಲೀ, ಕಾಂಗ್ರೆಸ್‌ಗಾಗಲೀ ಒಳ್ಳೆಯದಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಆಪಾದಿತ ಅಕ್ರ ಹಣ ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ರಾಹುಲ್ ಮತ್ತು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದಾಗಿನಿಂದ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಅನೇಕ ಪ್ರತಿಭಟನೆಗಳನ್ನು ನಡೆಸಿದೆ.

ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಇಂದಿನ ಪ್ರತಿಭಟನೆ ಆರಂಭಿಸಿತ್ತು. ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಿಪಕ್ಷ ಗದ್ದಲದ ನಡುವೆಯೇ ಕಲಾಪವನ್ನು ಮುಂದೂಡಲಾಯಿತು.

ಇದಾದ ನಂತರ  ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಪೊಲೀಸರು ನಾಯಕರನ್ನು ತಡೆಯಲು ಮತ್ತು ಬಂಧಿಸಲು ಪ್ರಯತ್ನಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ದರದರನೆ ಎಳೆದೊಯ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ವಿರೋಧ ಪಕ್ಷಗಳು ಪೊಲೀಸರ ಕ್ರಮವನ್ನು ಖಂಡಿಸಿವೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Fri, 5 August 22