ಹಸುಗಳ ಸಗಣಿ, ಮೂತ್ರದಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ: ಶಿವರಾಜ್​ ಸಿಂಗ್​ ಚೌಹಾಣ್​

| Updated By: Lakshmi Hegde

Updated on: Nov 14, 2021 | 10:30 AM

ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಶವಗಳ ಬದಲಿಗೆ ಮರಗಳ ಕಟ್ಟಿಗೆ ಬದಲು ಸಗಣಿಗಳನ್ನು ಒಣಗಿಸಿ ಮಾಡಲಾದ ದಿಮ್ಮಿಗಳನ್ನು ಬಳಸಲಾಗುತ್ತಿದೆ ಎಂದು ಶಿವರಾಜ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

ಹಸುಗಳ ಸಗಣಿ, ಮೂತ್ರದಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ: ಶಿವರಾಜ್​ ಸಿಂಗ್​ ಚೌಹಾಣ್​
ಶಿವರಾಜ್​ ಸಿಂಗ್ ಚೌಹಾಣ್​
Follow us on

ಹಸುವಿನ ಸಗಣಿ ಮತ್ತು ಮೂತ್ರ ಒಬ್ಬ ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುವ ಜತೆಗೆ ದೇಶದ ಆರ್ಥಿಕತೆಯನ್ನೂ ಬಲಿಷ್ಠಪಡಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ಹೇಳಿದ್ದಾರೆ.  ಭಾರತೀಯ ಪಶುವೈದ್ಯಕೀಯ ಸಂಘ ಏರ್ಪಡಿಸಿದ್ದ ಶಕ್ತಿ 2021 ಎಂಬ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದರು.  ಹಸುಗಳ ಸಗಣಿ, ಮೂತ್ರದಿಂದ ನಾವು ನಮ್ಮ ಸ್ವಂತ ಆರ್ಥಿಕತೆ ಸದೃಢಗೊಳಿಸಿಕೊಳ್ಳುವ ಜತೆ, ದೇಶದ ಆರ್ಥಿಕತೆಯನ್ನೂ ಪ್ರಬಲಗೊಳಿಸಬಹುದು. ಸರ್ಕಾರಗಳು ಹಸು ಸಂರಕ್ಷಿತ ಪ್ರದೇಶಗಳು ಮತ್ತು ಗೋಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಕೇವಲ ಸರ್ಕಾರವೊಂದೇ ಅದನ್ನು ನಡೆಸಲು ಸಾಧ್ಯವಿಲ್ಲ ಜನರ ಬೆಂಬಲವೂ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಶವಗಳ ಬದಲಿಗೆ ಮರಗಳ ಕಟ್ಟಿಗೆ ಬದಲು ಸಗಣಿಗಳನ್ನು ಒಣಗಿಸಿ ಮಾಡಲಾದ ದಿಮ್ಮಿಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ ಶಿವರಾಜ್​ ಸಿಂಗ್ ಚೌಹಾಣ್​,  ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸುಗಳ ಸಾಕಣೆ ಹೇಗೆಲ್ಲ ಲಾಭದಾಯಕವಾಗಬಹುದು ಎಂಬ ಬಗ್ಗೆ ತಜ್ಞರು, ಪಶುವೈದ್ಯರು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್​ ರೂಪಾಲಾ ಮಾತನಾಡಿ, ಗುಜರಾತ್​ನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಹಿಳೆಯರು ಪಶುಸಾಕಣೆ ನಡೆಸುತ್ತಿದ್ದಾರೆ. ಡೇರಿ ವ್ಯವಹಾರದ ಯಶಸ್ಸಿಗೆ ಇದೂ ಕಾರಣವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ಶುಲ್ಕ ಆದೇಶಕ್ಕೆ ಖಾಸಗಿ ಶಾಲೆಗಳು ಗರಂ; ಕೋರ್ಟ್ ಮೆಟ್ಟಿಲೇರಲು ನಿರ್ಧಾರ