ಸಾವಿನಲ್ಲೂ ಒಂದಾದ ಸೋದರರು; 900 ಕಿ.ಮೀ. ದೂರದಲ್ಲಿದ್ದರೂ ಒಂದೇ ದಿನ ನಿಗೂಢವಾಗಿ ಸಾವನ್ನಪ್ಪಿದ ಅವಳಿಗಳು

ಮೃತಪಟ್ಟವರಲ್ಲಿ ಒಬ್ಬರು ಬರ್ಮರ್‌ನಲ್ಲಿ ಮತ್ತು ಇನ್ನೊಬ್ಬರು ಸೂರತ್‌ನಲ್ಲಿ ವಾಸಿಸುತ್ತಿದ್ದರು. ಒಬ್ಬರು ತಮ್ಮ ಮನೆಯ ಟೆರೇಸ್‌ನಿಂದ ಜಾರಿ ಬಿದ್ದು ಸಾವನ್ನಪ್ಪಿದರೆ ಇನ್ನೊಬ್ಬರು ನೀರಿನ ಟ್ಯಾಂಕ್​ಗೆ ಬಿದ್ದು ಮೃತಪಟ್ಟಿದ್ದಾರೆ.

ಸಾವಿನಲ್ಲೂ ಒಂದಾದ ಸೋದರರು; 900 ಕಿ.ಮೀ. ದೂರದಲ್ಲಿದ್ದರೂ ಒಂದೇ ದಿನ ನಿಗೂಢವಾಗಿ ಸಾವನ್ನಪ್ಪಿದ ಅವಳಿಗಳು
ಸಾಂದರ್ಭಿಕ ಚಿತ್ರ
Edited By:

Updated on: Jan 14, 2023 | 3:32 PM

ಬರ್ಮರ್: ಒಟ್ಟಿಗೇ ಹುಟ್ಟಿದ ಅವಳಿ ಮಕ್ಕಳು ಬೇರೆ ಬೇರೆ ಊರಿನಲ್ಲಿ ಒಂದೇ ದಿನ ಒಂದೇ ರೀತಿ ಮೃತಪಟ್ಟಿರುವ ವಿಚಿತ್ರವಾದ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. ರಾಜಸ್ಥಾನದಲ್ಲಿ 26 ವರ್ಷದ ಅವಳಿ ಮಕ್ಕಳು ಒಂದೇ ದಿನ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಬ್ಬರೂ ಸುಮಾರು 900 ಕಿಮೀ ದೂರದಲ್ಲಿ ಬೇರೆ ಬೇರೆ ಊರಿನಲ್ಲಿ ವಾಸಿಸುತ್ತಿದ್ದರು.

ಮೃತಪಟ್ಟವರಲ್ಲಿ ಒಬ್ಬರು ಬರ್ಮರ್‌ನಲ್ಲಿ ಮತ್ತು ಇನ್ನೊಬ್ಬರು ಸೂರತ್‌ನಲ್ಲಿ ವಾಸಿಸುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಅವಳಿ ಸಹೋದರರು ವಿಚಿತ್ರವಾಗಿ ಸಾವನ್ನಪ್ಪಿದ್ದರಿಂದ ಕುಟುಂಬ ಆಘಾತಕ್ಕೊಳಗಾಗಿದೆ. ಒಬ್ಬರು ತಮ್ಮ ಮನೆಯ ಟೆರೇಸ್‌ನಿಂದ ಜಾರಿ ಬಿದ್ದು ಸಾವನ್ನಪ್ಪಿದರೆ ಇನ್ನೊಬ್ಬರು ನೀರಿನ ಟ್ಯಾಂಕ್​ಗೆ ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Murder: ದೆಹಲಿಯಲ್ಲಿ ಮತ್ತೊಂದು ಬರ್ಬರ ಹತ್ಯೆ; ಮಹಿಳೆಯನ್ನು ಕೊಂದು, ಹೂತಿಟ್ಟ ಹಂತಕರು

ಅವಳಿಗಳಾದ ಸೋಹನ್ ಸಿಂಗ್ ಮತ್ತು ಸುಮೇರ್ ಸಿಂಗ್ ಅವರನ್ನು ಅವರ ಸ್ಥಳೀಯ ಗ್ರಾಮವಾದ ಸಾರ್ನೋ ಕಾ ತಾಲಾದಲ್ಲಿ ಒಂದೇ ಚಿತಾಭಸ್ಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಪೊಲೀಸರ ಪ್ರಕಾರ, ಸುಮೇರ್ ಸಿಂಗ್ ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೋಹನ್ ಸಿಂಗ್ ಜೈಪುರದಲ್ಲಿ ಗ್ರೇಡ್ II ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಬರೆಯಲು ತಯಾರಾಗುತ್ತಿದ್ದರು.

ಬುಧವಾರ ರಾತ್ರಿ ಸುಮೇರ್ ಸಿಂಗ್ ಜಾರಿಬೀಳುವ ಸಂದರ್ಭದಲ್ಲಿ ಫೋನ್​ನಲ್ಲಿ ಮಾತನಾಡುತ್ತಿದ್ದರು ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಸೋಹನ್ ಸಿಂಗ್ ಗುರುವಾರ ಮುಂಜಾನೆ ತನ್ನ ಅವಳಿ ಸಹೋದರನ ಸಾವಿನ ಸುದ್ದಿ ಕೇಳಿ ಮನೆಗೆ ಹಿಂದಿರುಗಿದ ಕೂಡಲೇ ನೀರಿನ ಟ್ಯಾಂಕ್‌ಗೆ ಬಿದ್ದನು. ಹೀಗಾಗಿ, ಸೋಹನ್ ಸಿಂಗ್​ನದ್ದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Murder: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; 18 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು

ಇಬ್ಬರಲ್ಲಿ ಹಿರಿಯವನಾದ ಸೋಹನ್ ಸಿಂಗ್ ತನ್ನ ಮನೆಯಿಂದ ಕೇವಲ 100 ಮೀ ದೂರದಲ್ಲಿರುವ ಟ್ಯಾಂಕ್‌ನಿಂದ ನೀರು ತರಲು ಹೊರಟಿದ್ದ. ನಂತರ, ಅವರು ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಳಿಕ ಅವರ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುಮೇರ್ ತನ್ನ ಸಹೋದರನನ್ನು ಓದಿಸಲು ಹಾಗೂ, ಆತನನ್ನು ಶಿಕ್ಷಕನನ್ನಾಗಿ ಮಾಡಲು ಸೂರತ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ