
ನವದೆಹಲಿ, ಜುಲೈ 30: ದೆಹಲಿಯಲ್ಲಿ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪ ಭಾರಿ ರಾಜಕೀಯ ಕಾಡ್ಗಿಚ್ಚು ಹೊತ್ತಿಸಿರುವ ಬೆನ್ನಲ್ಲೇ, ಸಿಆರ್ಪಿಎಫ್ (CRPF) ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ (ಜಿ.ಪಿ.) ಸಿಂಗ್ ಅವರು ತಮ್ಮ ಸಿಬ್ಬಂದಿಯ ಬೆನ್ನಿಗೆ ನಿಂತಿದ್ದಾರೆ. ಸಾರ್ವಜನಿಕ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಾಗ ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾನೇ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ಮುಂದುವರೆಸಿ ಎಂದು ಅವರು ಪಡೆಗಳಿಗೆ ಕರೆ ನೀಡಿದ್ದಾರೆ.
ಸೋಮವಾರ ನಡೆದ ಸಿಆರ್ಪಿಎಫ್ ಸಂಸ್ಥಾಪನಾ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಜಿ.ಪಿ. ಸಿಂಗ್, “ಅದು ಕಾರ್ಯಾಚರಣೆಯ ಬೆಟಾಲಿಯನ್ ಆಗಿರಲಿ ಅಥವಾ ಕಾನೂನು ಸುವ್ಯವಸ್ಥೆ ಕಾಯುವ ಘಟಕವಾಗಿರಲಿ, ದೇಶ ಮತ್ತು ಪಡೆಯ ಹಿತಾಸಕ್ತಿಗಾಗಿ ನೀವು ನಿಯಮಾನುಸಾರ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ಮಹಾನಿರ್ದೇಶಕನಾಗಿ (DG) ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಯಾರೂ ಅಂಜಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಪ್ರತಿಭಟನಾ ನಿರತ ಅಮಾಯಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತು ಆರ್ಎಎಫ್ ಸಿಬ್ಬಂದಿ ಪೆಲೆಟ್ ಗನ್ಗಳನ್ನು ಹಾರಿಸಿದ್ದಾರೆ. ಅಲ್ಲದೆ, ವಿದ್ಯುತ್ ಚಾರ್ಜ್ ಮಾಡಿದ ಲಾಠಿ ಹಾಗೂ ಕಬ್ಬಿಣದ ಮೊಳೆಗಳನ್ನು ಜೋಡಿಸಲಾಗಿದ್ದ ಆಘಾತಕಾರಿ ಲಾಠಿಗಳನ್ನು ಬಳಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು.
ಮತ್ತಷ್ಟು ಓದಿ:
ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆಯಲ್ಲಿ 2,823 ಕ್ರಿಮಿನಲ್ಗಳು ಪತ್ತೆ: ದೆಹಲಿ ಪೊಲೀಸರಿಂದ ಕಾರ್ಯಾಚರಣೆ
ಕ್ಷಿಪ್ರ ಕಾರ್ಯಪಡೆ ಎಂಬುದು ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರತ್ಯೇಕ ವಿಭಾಗವಾಗಿದ್ದು, ಗಲಭೆ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ತರಬೇತಿ ಪಡೆದಿರುತ್ತದೆ. ಜುಲೈ 20 ರಂದು ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಭಾರಿ ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರು.
ಯಾವುದೇ ಪ್ರಮುಖ ಗಲಭೆ ಅಥವಾ ಸಾರ್ವಜನಿಕ ಅಶಾಂತಿಯನ್ನು ಹತೋಟಿಗೆ ತಂದ ನಂತರ, ಸಿಬ್ಬಂದಿಯ ಪ್ರತಿಕ್ರಿಯೆ ಮತ್ತು ಬಲಪ್ರಯೋಗದ ಪ್ರಮಾಣ ಸರಿಯಾಗಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವುದು ಸಿಆರ್ಪಿಎಫ್ನ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಭಾಗವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ