ಆರ್ಯನ್ ಖಾನ್​ ಕೇಸ್​​ನ ಪ್ರಮುಖ ಸಾಕ್ಷಿ ಪ್ರಭಾಕರ್ ಸೇಲ್ ಸಾವಿನ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹ ಸಚಿವರಿಂದ ಆದೇಶ !

ಪ್ರಭಾಕರ್ ಸೇಲ್ ಸಾವಿನ ಬಗ್ಗೆ ಕುಟುಂಬ ಯಾವುದೇ ರೀತಿಯ ಅನುಮಾನವನ್ನೂ ವ್ಯಕ್ತಪಡಿಸಿಲ್ಲ ಎಂದು ವಕೀಲರಾದ ತುಷಾರ್​ ಖಂಡಾರೆ ತಿಳಿಸಿದ್ದಾರೆ.  ಹಾಗಿದ್ದಾಗ್ಯೂ ತನಿಖೆ ಪ್ರಾರಂಭವಾಗಲಿದೆ.

ಆರ್ಯನ್ ಖಾನ್​ ಕೇಸ್​​ನ ಪ್ರಮುಖ ಸಾಕ್ಷಿ ಪ್ರಭಾಕರ್ ಸೇಲ್ ಸಾವಿನ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹ ಸಚಿವರಿಂದ ಆದೇಶ !
ಪ್ರಭಾಕರ್ ಸೇಲ್​
Follow us
| Updated By: Lakshmi Hegde

Updated on:Apr 03, 2022 | 3:56 PM

ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​  ಮುಹುಲ್​ ಏರಿಯಾದಲ್ಲಿರುವ ಚೆಂಬೂರ್​​ನಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಅವರ ನಿಧನವೀಗ ಬಹುವಾಗಿ ಚರ್ಚೆಯಾಗುತ್ತಿದೆ. ಇದು ಸಹಜವಾದ ಸಾವಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ.  ಇದರ ಬೆನ್ನಲ್ಲೇ ಪ್ರಭಾಕರ್ ಸೇಲ್​ ನಿಧನದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್​ ವಾಲ್ಸೆ ಪಾಟೀಲ್ ಆದೇಶಿಸಿದ್ದಾರೆ. ಹೀಗಾಗಿ ಪ್ರಭಾಕರ್ ಸೇಲ್​ ಸಾವಿನ ತನಿಖೆ ಡಿಜಿಪಿ ನೇತೃತ್ವದ ತಂಡದಿಂದ ನಡೆಯಲಿದೆ. ಇನ್ನು ಪ್ರಭಾಕರ್ ಸೇಲ್ ಸಾವಿನ ಬಗ್ಗೆ ಕುಟುಂಬ ಯಾವುದೇ ರೀತಿಯ ಅನುಮಾನವನ್ನೂ ವ್ಯಕ್ತಪಡಿಸಿಲ್ಲ ಎಂದು ವಕೀಲರಾದ ತುಷಾರ್​ ಖಂಡಾರೆ ತಿಳಿಸಿದ್ದಾರೆ.  

ಆರ್ಯನ್​ ಖಾನ್​ ಸಿಕ್ಕಿಬಿದ್ದ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಭಾಕರ್​ ಅವರನ್ನೂ ಎನ್​ಸಿಬಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದರು.  ಇವರೊಬ್ಬ ಸ್ವತಂತ್ರ ಸಾಕ್ಷಿಯಾಗಿದ್ದಿದ್ದು, ಇನ್ನೊಬ್ಬ ಸಾಕ್ಷಿದಾರ ಕಿರಣ್​ ಗೋಸಾವಿ ಮತ್ತು ಈ ಪ್ರಕರಣ ಬೇಧಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ  ಸಮೀರ್ ವಾಂಖೆಡೆ (ಆಗ ಎನ್​ಸಿಬಿಯ ಅಧಿಕಾರಿಯಾಗಿದ್ದರು) ವಿರುದ್ಧವೂ ಆರೋಪ ಮಾಡಿದ್ದರು. ಎನ್​ಸಿಬಿ ಅಧಿಕಾರಿಗಳು ಸುಮಾರು 10 ಖಾಲಿ ಪೇಪರ್​ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯನ್ನೂ ನಾನು ಕೇಳಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, ಕಿರಣ್​ ಗೋಸಾವಿಗೆ ತಾನು ಬಾಡಿಗಾರ್ಡ್ ಆಗಿದ್ದೆ, ಆದರೆ ಅವರ ಬಳಿ ಕೆಲಸ ಮಾಡುತ್ತಿದ್ದ ಇನ್ನಿತರರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.

ಕಿರಣ್​ ಗೋಸಾವಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಆದರೆ ನಂತರ ಇವರ ವರುದ್ಧವೇ ಹಣ ಪಡೆದ ಆರೋಪ ಕೇಳಿಬಂದಿತ್ತು. ಮುಂಬೈ ಐಷಾರಾಮಿ ಹಡಗಿನ ಮೇಲೆ ದಾಳಿಯಾಗುತ್ತಿದ್ದಂತೆ ಕಿರಣ್​ ಗೋಸಾವಿ 50 ಲಕ್ಷ ರೂಪಾಯಿ ಪಡೆದಿದ್ದಾಗಿ ಇದೇ ಪ್ರಭಾಕರ್ ಸೇಲ್​ ಆರೋಪ ಮಾಡಿದ್ದರು. ಹೀಗಾಗಿ ಎನ್​ಸಿಬಿ ಪ್ರಭಾಕರ್​ ಅವರನ್ನು ಒಂದು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿಕೊಂಡಿತ್ತು. ಅಂದರೆ ಈ ಪ್ರಕರಣದಲ್ಲಿ ಪ್ರಭಾಕರ್​ ಸೇಲ್​ ತಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಭಾವಿಸಿದ್ದ ಎನ್​ಸಿಬಿಗೆ ಇವರು ಉಲ್ಟಾ ಹೊಡೆದಿದ್ದರು. ಎನ್​ಸಿಬಿ ವಿರುದ್ಧವೇ ಆರೋಪವನ್ನು ಮಾಡಿದ್ದರು.

ಇದನ್ನೂ ಓದಿ: ಲಷ್ಕರ್​ ಇ ತೊಯ್ಬಾ ಉಗ್ರರಿಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ ಬಂಡಿಪೋರಾ ಪೊಲೀಸರು !

Published On - 3:54 pm, Sun, 3 April 22