29 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ಎಸ್​ಐಆರ್​ಗಾಗಿ ಬದುಕಿ ಬಂದ್ರು

ಮೂವತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆಂದು ನಂಬಲಾದ ಷರೀಫ್ ಎಂಬ ವ್ಯಕ್ತಿ 28 ವರ್ಷಗಳ ನಂತರ ತಮ್ಮ ಪೂರ್ವಜರ ಮನೆಗೆ ಮರಳಿದ್ದಾರೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ದಾಖಲೆಗಳನ್ನು ಸಂಗ್ರಹಿಸಲು ಬಂದ ಇವರನ್ನು ಕಂಡು ಕುಟುಂಬ ಸದಸ್ಯರು ಆಶ್ಚರ್ಯಚಕಿತರಾದರು. ಕಳೆದುಹೋದ ಮಗ ಮನೆಗೆ ಮರಳಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಪುನರ್ಮಿಲನ ಮುಜಫರ್‌ನಗರದಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿಸಿದೆ.

29 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ಎಸ್​ಐಆರ್​ಗಾಗಿ ಬದುಕಿ ಬಂದ್ರು
ಷರೀಫ್

Updated on: Jan 01, 2026 | 7:41 AM

ಲಕ್ನೋ, ಜನವರಿ 01: ಸುಮಾರು ಮೂರು ದಶಕಗಳ ಹಿಂದೆಯೇ ಸತ್ತಿದ್ದಾರೆಂದು ಭಾವಿಸಲಾದ ಹಿರಿಯ ವ್ಯಕ್ತಿಯೊಬ್ಬರು ಮನೆಗೆ ಬಂದಾಗ ಸದಸ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ಮನೆ ಬಿಟ್ಟು ಹೋದಾಗಿನಿಂದ ಅವರನ್ನು ಹುಡುಕದೇ ಇರುವ ಸ್ಥಳವೇ ಇರಲಿಲ್ಲ, ಕೊನೆಗೆ ಮೃತಪಟ್ಟಿರಬಹುದು ಎಂದು ಭಾವಿಸಿ ಕೈ ಚೆಲ್ಲಿದ್ದರು. ಈಗ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR)ಗೆ ದಾಖಲೆಗಳನ್ನು ಪಡೆಯಲು ಊರಿಗೆ ಮರಳಿದಾಗ ಅವರನ್ನು ಕಂಡು ಕುಟುಂಬ ಸದಸ್ಯರು ಆಶ್ಚರ್ಯಚಕಿತರಾದರು.

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಖತೌಲಿ ಪಟ್ಟಣದ ಮೊಹಲ್ಲಾ ಬಲ್ಕಾರಾಂ ನಿವಾಸಿ ಶರೀಫ್ 28 ವರ್ಷಗಳ ನಂತರ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು. ಅವರನ್ನು ನೋಡಿದ ಸಂಬಂಧಿಕರು ಮತ್ತು ಸ್ಥಳೀಯರು ಕಣ್ಣೀರು ಹಾಕಿದರು.ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವ ಸಮಯದಲ್ಲಿ ಈ ಪುನರ್ಮಿಲನ ನಡೆಯಿತು.

1997 ರಲ್ಲಿ ಪಶ್ಚಿಮ ಬಂಗಾಳಕ್ಕೆ ಸ್ಥಳಾಂತರಗೊಂಡಿದ್ದರು
ಷರೀಫ್ ಅವರ ಮೊದಲ ಪತ್ನಿ 1997 ರಲ್ಲಿ ನಿಧನರಾದರು. ನಂತರ ಅವರು ಮರುಮದುವೆಯಾಗಿ ತಮ್ಮ ಹೊಸ ಪತ್ನಿಯೊಂದಿಗೆ ಪಶ್ಚಿಮ ಬಂಗಾಳಕ್ಕೆ ತೆರಳಿದರು. ಸ್ವಲ್ಪ ಸಮಯದವರೆಗೆ, ಅವರು ಲ್ಯಾಂಡ್​ಲೈನ್ ಮೂಲಕ ಕುಟುಂಬದವರೊಂದಿಗೆ ಸಂಪರ್ಕ ನಡೆಸುತ್ತಿದ್ದರು. ಕಾಲ ಕ್ರಮೇಣ ಕರೆ ಮಾಡುವುದನ್ನೇ ನಿಲ್ಲಿಸಿದರು. ಆಗ ಕುಟುಂಬ ಸದಸ್ಯರು ಅವರನ್ನು ಹುಡುಕಿದ್ದಾರೆ. ಎಲ್ಲಿಯೂ ಅವರು ಪತ್ತೆಯಾಗಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಅವರು ನೀಡಿದ ವಿಳಾಸದಲ್ಲಿ ಕುಟುಂಬವು ಅವರನ್ನು ಪತ್ತೆಹಚ್ಚಲು ಹಲವಾರು ಬಾರಿ ಪ್ರಯತ್ನಿಸಿತು, ಆದರೆ ಯಾವುದೇ ಸುಳಿವು ಸಿಗಲಿಲ್ಲ. ಅಂತಿಮವಾಗಿ, ಷರೀಫ್ ನಮ್ಮೊಂದಿಗೆ ಇಲ್ಲ ಎಂದು ಕುಟುಂಬ ಒಪ್ಪಿಕೊಂಡರು.

ಮತ್ತಷ್ಟು ಓದಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ವಿಶೇಷ ಪಟ್ಟಿ ಪರಿಶೀಲನೆಯೇ ಅವರು ಊರಿಗೆ ಮರಳಲು ಕಾರಣ
SIR ಪ್ರಕ್ರಿಯೆಗೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಲು ಷರೀಫ್ ಎರಡು ದಿನಗಳ ಹಿಂದೆ ಖತೌಲಿಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಮರಳಿದರು. 28 ವರ್ಷಗಳ ನಂತರ ಅವರ ಹಠಾತ್ ಆಗಮನವು ಅವರ ಕುಟುಂಬ, ನೆರೆಹೊರೆಯವರು ಮತ್ತು ಸಂಬಂಧಿಕರನ್ನು ಆಶ್ಚರ್ಯಗೊಳಿಸಿತು ಮತ್ತು ಸಂತೋಷಪಡಿಸಿತು. ವರ್ಷಗಳಲ್ಲಿ ಅವರ ಅನೇಕ ನಿಕಟ ಸಂಬಂಧಿಗಳು ನಿಧನರಾಗಿದ್ದಾರೆ ಎಂದು ಷರೀಫ್‌ಗೆ ತಿಳಿದುಬಂದಿದೆ.

ಷರೀಫ್ ಅವರ ಸೋದರಳಿಯ ಮೊಹಮ್ಮದ್ ಅಕ್ಲಿಮ್, ಕುಟುಂಬವು ಖರಗ್‌ಪುರ ಮತ್ತು ಅಸನ್ಸೋಲ್ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ 15-20 ವರ್ಷಗಳಿಂದ ಅವರನ್ನು ಹುಡುಕಿದೆ, ಆದರೆ ಅವರ ಯಾವುದೇ ಸುಳಿವು ಸಿಗಲಿಲ್ಲ ಎಂದು ಹೇಳಿದರು. ಷರೀಫ್ ಹಿಂತಿರುಗಿದ್ದಾರೆ ಎಂಬ ಸುದ್ದಿ ಬಂದಾಗ, ಆರಂಭದಲ್ಲಿ ಯಾರೂ ಅದನ್ನು ನಂಬಲಿಲ್ಲ. ದೂರದ ಸಂಬಂಧಿಕರು ವೀಡಿಯೊ ಕರೆಯ ಮೂಲಕ ಅವರೊಂದಿಗೆ ಮಾತನಾಡಿದ್ದಾರೆ.

ಸರ್ಕಾರಿ ದಾಖಲೆಗಳ ಅಗತ್ಯವಿದ್ದ ಕಾರಣ ಮಾತ್ರ ಅವರು ಹಿಂತಿರುಗಿದ್ದಾರೆ, ಅವರು ತಮ್ಮ ಊರಿಗೆ ಮರಳಲಿದ್ದಾರೆ ಎಂದು ಅವರು ಹೇಳಿದರು. ವರದಿಗಳ ಪ್ರಕಾರ, ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಸಂಬಂಧಿಕರನ್ನು ಭೇಟಿಯಾದ ನಂತರ, ಷರೀಫ್ ಪಶ್ಚಿಮ ಬಂಗಾಳಕ್ಕೆ ಮರಳಿದ್ದಾರೆ, ಅಲ್ಲಿ ಅವರು ಕಳೆದ ಮೂರು ದಶಕಗಳಿಂದ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ