
ಕೋಲ್ಕತ್ತಾ, ಜೂನ್ 07: ಭಾರತೀಯ ರೈಲ್ವೆ ವಲಯದಲ್ಲಿ ಹೊಸ ಕ್ರಾಂತಿ ಹಾಗೂ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪಶ್ಚಿಮ ಬಂಗಾಳಕ್ಕೆ ಅತ್ಯಂತ ಐತಿಹಾಸಿಕ ಮತ್ತು ಭರವಸೆಯ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಕಾರಿಡಾರ್ ಯಶಸ್ಸಿನ ನಂತರ, ದೇಶದ ಎರಡನೇ ಅತ್ಯಾಧುನಿಕ ಬುಲೆಟ್ ರೈಲು(Bullet Train) ಯೋಜನೆಯು ದೆಹಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿ ನಡುವೆ ಚಲಿಸಲಿದೆ ಎಂದು ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ಉತ್ತರ ಭಾರತವನ್ನು ಈಶಾನ್ಯ ಭಾರತದೊಂದಿಗೆ ಅತ್ಯಂತ ವೇಗವಾಗಿ ಜೋಡಿಸಲಿದ್ದು, ಬಂಗಾಳದ ರೈಲ್ವೆ ಯೋಜನೆಗಳಿಗಾಗಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೂಡಿಕೆ ಮಾಡಲಾಗುತ್ತಿದೆ. ಈ ರೈಲು ಲಕ್ನೋ, ವಾರಾಣಸಿ ಮತ್ತು ಪಾಟ್ನಾ ಮೂಲಕ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುತ್ತದೆ.
ಕೇವಲ 6 ಗಂಟೆಗಳಲ್ಲಿ 1,500 ಕಿಲೋಮೀಟರ್ ಪ್ರಯಾಣ
ಪ್ರಸ್ತುತ ದೆಹಲಿಯಿಂದ ಸಿಲಿಗುರಿಗೆ ರಾಜಧಾನಿ ಅಥವಾ ಡುರೊಂಟೊ ಎಕ್ಸ್ಪ್ರೆಸ್ ರೈಲುಗಳ ಮೂಲಕ ಪ್ರಯಾಣಿಸಲು ಸುಮಾರು 18 ರಿಂದ 20 ಗಂಟೆಗಳ ಸುದೀರ್ಘ ಸಮಯ ಬೇಕಾಗುತ್ತದೆ. ಆದರೆ, ಗಂಟೆಗೆ 250 ರಿಂದ300ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ನೂತನ ಬುಲೆಟ್ ರೈಲು ಕಾರಿಡಾರ್ ಪೂರ್ಣಗೊಂಡ ನಂತರ ಈ ಇಡೀ ಪ್ರಯಾಣದ ಸಮಯ ಕೇವಲ ೬ ಗಂಟೆಗಳಿಗೆ ಕುಸಿಯಲಿದೆ!
ಪ್ರಮುಖ ನಗರಗಳ ಮಹಾ ಸಮ್ಮಿಲನ: ಈ ಬುಲೆಟ್ ರೈಲು ನವದೆಹಲಿಯಿಂದ ಪ್ರಾರಂಭವಾಗಿ ನೋಯ್ಡಾದ ಜೇವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಥುರಾ, ಆಗ್ರಾ, ಇಟಾವಾ, ಲಕ್ನೋ, ಪ್ರಯಾಗ್ರಾಜ್, ವಾರಾಣಸಿ, ಘಾಜಿಪುರ, ಪಾಟ್ನಾ ಮೂಲಕ ಸಾಗಿ ಸಿಲಿಗುರಿಯ ನ್ಯೂ ಜಲ್ಪೈಗುರಿಯನ್ನು ತಲುಪಲಿದೆ.
ಈ ಕಾರಿಡಾರ್ ಮೂಲಕ ದೆಹಲಿಯಿಂದ ಸಾಂಸ್ಕೃತಿಕ ನಗರಿ ವಾರಣಾಸಿಗೆ ಕೇವಲ3.5 ಗಂಟೆಗಳಲ್ಲಿ ಮತ್ತು ವಾರಣಾಸಿಯಿಂದ ಸಿಲಿಗುರಿಗೆ 3ಗಂಟೆಗಿಂತ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ. ಭವಿಷ್ಯದಲ್ಲಿ ಈ ಮಾರ್ಗವನ್ನು ಅಸ್ಸಾಂನ ಗುವಾಹಟಿಗೂ ವಿಸ್ತರಿಸುವ ಅದ್ಭುತ ಯೋಜನೆ ಇದೆ.
ಸಿಲಿಗುರಿಯು ಭಾರತದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ತಂತ್ರಜ್ಞಾನ ವಲಯವಾದ ‘ಚಿಕನ್ ನೆಕ್’ ಕಾರಿಡಾರ್ ಅನ್ನು ಒಳಗೊಂಡಿದೆ, ಇದು ಈಶಾನ್ಯ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಹೆಬ್ಬಾಗಿಲಾಗಿದೆ.
ಮತ್ತಷ್ಟು ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಬಹುಮುಖಿ ಲಾಭಗಳು: ಈ ಹೈ-ಸ್ಪೀಡ್ ರೈಲು ಜಾಲವು ಉತ್ತರ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ, ಮುಕ್ತ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಲಿದೆ. ಜೊತೆಗೆ, ಗಡಿ ಭಾಗಗಳಲ್ಲಿ ಭಾರತೀಯ ಸೇನೆಯ ಮಿಲಿಟರಿ ಚಲನವಲನಗಳನ್ನು ಅತ್ಯಂತ ವೇಗವಾಗಿ ಮತ್ತು ಸುಲಭಗೊಳಿಸಲು ಇದು ದೇಶಕ್ಕೆ ರಕ್ಷಣಾತ್ಮಕವಾಗಿ ದೊಡ್ಡ ಶಕ್ತಿಯನ್ನು ನೀಡಲಿದೆ.
ಬಂಗಾಳದ ಅಭಿವೃದ್ಧಿಗೆ ಭರಪೂರ ನಿಧಿ ಹಂಚಿಕೆ
ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಸಾರಿಗೆ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಂಪೂರ್ಣ ಬದ್ಧವಾಗಿದೆ. ಈ ಹಿಂದೆ ಬಂಗಾಳಕ್ಕೆ ರೈಲ್ವೆಯಿಂದ ಕೇವಲ 4,000 ಕೋಟಿ ಸಿಗುತ್ತಿತ್ತು, ಆದರೆ ಪ್ರಸ್ತುತ ಎನ್ಡಿಎ (NDA) ಸರ್ಕಾರದ ಅಡಿಯಲ್ಲಿ 2026-27ರ ಸಾಲಿಗೆ ದಾಖಲೆಯ 14,205 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಕೋಲ್ಕತ್ತಾ ಮೆಟ್ರೋಗೆ 60 ಅತ್ಯಾಧುನಿಕ ‘ನೆಕ್ಸ್ಟ್ ಜನರೇಷನ್’ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 100 ಕ್ಕೂ ಹೆಚ್ಚು ರೈಲ್ವೆ ಯೋಜನೆಗಳಿಗೆ ಹೊಸ ಉತ್ತೇಜನ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ಎಲ್ಲಾ ರೈಲು ಯೋಜನೆಗಳಿಗೆ ಆರಂಭಿಕ ಅನುಮೋದನೆ ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
ಉತ್ತರ ಭಾರತದ ಜನನಿಬಿಡ ರಾಜ್ಯಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಚಿಕನ್ ನೆಕ್ ಪ್ರದೇಶದ ಕಠಿಣ ಭೂಪ್ರದೇಶ, ಭಾರೀ ಮಳೆಯಂತಹ ಪರಿಸ್ಥಿತಿಗಳಲ್ಲಿ ಹಳಿಗಳನ್ನು ಹಾಕುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ, ಭಾರತೀಯ ರೈಲ್ವೆಯ ತಾಂತ್ರಿಕ ತಜ್ಞರು ಮತ್ತು ಎಂಜಿನಿಯರ್ಗಳು ಆಧುನಿಕ ತಂತ್ರಜ್ಞಾನದ ಮೂಲಕ ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭದ್ರವಾದ ವಿನ್ಯಾಸಗಳನ್ನು ಸಿದ್ಧಪಡಿಸುತ್ತಿದ್ದಾರೆ.
ದೆಹಲಿ ಮತ್ತು ವಾರಾಣಸಿಯಲ್ಲಿ ಭೂಸ್ವಾಧೀನ ಕಾರ್ಯವು ಶೀಘ್ರದಲ್ಲೇ ಅತ್ಯಂತ ವೇಗವಾಗಿ ಪ್ರಾರಂಭವಾಗಲಿದ್ದು, 2028 ರಲ್ಲಿ ಈ ಯೋಜನೆಯ ಭೂಮಿ ಪೂಜೆ ನೆರವೇರಲಿದೆ. ಈ ಬುಲೆಟ್ ರೈಲು ಭಾರತದ ಇತಿಹಾಸದಲ್ಲಿ ಪ್ರಗತಿ ಮತ್ತು ಆಧುನಿಕತೆಯ ಹೊಸ ಶಕೆಯನ್ನು ಬರೆಯುವುದು ನಿಶ್ಚಿತವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ