ತಜೀಂದರ್ ಬಗ್ಗಾ ಬಂಧನ : ಹೇಬಿಯಸ್ ಕಾರ್ಪಸ್ ಅರ್ಜಿ ಆಲಿಸಲಿರುವ ಹೈಕೋರ್ಟ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​(Arvind Kejriwal)ಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ(Tajinder Pal Singh Bagga) ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಶನಿವಾರ ಆಲಿಸಲಿದೆ.

ತಜೀಂದರ್ ಬಗ್ಗಾ ಬಂಧನ : ಹೇಬಿಯಸ್ ಕಾರ್ಪಸ್ ಅರ್ಜಿ ಆಲಿಸಲಿರುವ ಹೈಕೋರ್ಟ್
ತಜೀಂದರ್ ಬಗ್ಗಾ
Updated By: ನಯನಾ ರಾಜೀವ್

Updated on: May 07, 2022 | 12:40 PM

ಪಂಬಾಜ್:  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​(Arvind Kejriwal)ಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ(Tajinder Pal Singh Bagga) ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಶನಿವಾರ ಆಲಿಸಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ಬಿಜೆಪಿ ಮುಖಂಡ ತಜೀಂದರ್ ಬಗ್ಗಾ ಅವರನ್ನು ಬಂಧಿಸಿದ್ದಾರೆ.

ಪಂಜಾಬ್ ಪೊಲೀಸರು ತನ್ನ ಸೈಬರ್ ಸೆಲ್‌ನಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಬಿಜೆಪಿ ಮುಖಂಡ ತಜೀಂದರ್  ಪಾಲ್ ಸಿಂಗ್ ಬಗ್ಗಾ ಅವರನ್ನು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದರು. ವಿಡಿಯೋ ಹೇಳಿಕೆಯಲ್ಲಿ ದೆಹಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಅವರು ಸುಮಾರು 50 ಪೊಲೀಸರ ಜತೆ ಬೆಳಿಗ್ಗೆ 8:30 ರ ಸುಮಾರಿಗೆ ಬಗ್ಗಾ ಅವರ ದೆಹಲಿ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ತಜೀಂದರ್  ಪಾಲ್ ಸಿಂಗ್ ಬಗ್ಗಾ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಲ್ಲದೇ, ವದಂತಿಗಳನ್ನು ಹರಡಿದ್ದಾರೆ ಮತ್ತು ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಎಎಪಿ ನಾಯಕ ಸನ್ನಿ ಸಿಂಗ್ ದೂರು ದಾಖಲಿಸಿದ ನಂತರ ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿರುದ್ಧ ಕಳೆದ ತಿಂಗಳು ಪ್ರಕರಣ ದಾಖಲಿಸಲಾಗಿತ್ತು.

ಮಾರ್ಚ್ 30ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತಜೀಂದರ್  ಸಿಂಗ್ ಬಗ್ಗಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಬೆದರಿಕೆ ಹಾಕಿದ್ದರು. ದೂರುದಾರರು ಬಗ್ಗಾ ಅವರ ಹೇಳಿಕೆಗಳು ಹಾಗೂ ವಿಡಿಯೋ ತುಣುಕುಗಳನ್ನು ಪೊಲೀಸರಿಗೆ ನೀಡಿದ್ದಾರೆ.

ತಜೀಂದರ್  ಪಾಲ್ ಸಿಂಗ್ ಬಗ್ಗಾ ಅವರು ದೆಹಲಿ ಬಿಜೆಪಿಯ ವಕ್ತಾರರಾಗಿದ್ದಾರೆ ಮತ್ತು ಪ್ರಸ್ತುತ ಯುವ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಸನ್ನಿ ಸಿಂಗ್ ಅವರು ಬಗ್ಗಾ ವಿರುದ್ಧ ದೂರು ದಾಖಲಿಸಿದ್ದು, ಈ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

‘‘ಬೆಳಗ್ಗೆ ಸುಮಾರು 10ರಿಂದ 15 ಮಂದಿ ಪಂಜಾಬ್ ಪೊಲೀಸರು ಮನೆಗೆ ಬಂದರು, ನಾನು ವಿಡಿಯೋ ಮಾಡಲು ಹೋದಾಗ ನನ್ನ ಮುಖಕ್ಕೆ ಹೊಡೆದ ಪೊಲೀಸರು ಮೊಬೈಲ್ ಕಸಿದುಕೊಂಡರು. ಸುಮಾರು 8.30ರ ಸುಮಾರಿಗೆ ತಜೀಂದರ್ ಬಗ್ಗಾನನ್ನು ಬಂಧಿಸಿ ಕರೆದೊಯ್ದಿದ್ದಾರೆ’’ ಎಂದು ಅವರ ತಂದೆ ಕೃಪಾಲ್ ಸಿಂಗ್ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ