ನಾಲ್ಕು ರಾಜ್ಯಗಳ ಚುನಾವಣೆಗೆ ಮುನ್ನ ಏಕ್ ಮೌಕಾ ಕೇಜ್ರಿವಾಲ್ ಕೋ ಅಭಿಯಾನ ಪ್ರಾರಂಭಿಸಿದ ಅರವಿಂದ ಕೇಜ್ರಿವಾಲ್

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎಎಪಿ ಆಡಳಿತದಲ್ಲಿನ ಅಭಿವೃದ್ಧಿಯನ್ನು ಸೆರೆಹಿಡಿಯುವ ವಿಡಿಯೊಗಳನ್ನು ಮಾಡಲು ಮತ್ತು ಪಕ್ಷವನ್ನು ಬೆಂಬಲಿಸಲು ಇತರ ರಾಜ್ಯಗಳ ಜನರನ್ನು ಒತ್ತಾಯಿಸಲು ದೆಹಲಿ ನಿವಾಸಿಗಳಲ್ಲಿ ವಿನಂತಿಸಿದರು

ನಾಲ್ಕು ರಾಜ್ಯಗಳ ಚುನಾವಣೆಗೆ ಮುನ್ನ ಏಕ್ ಮೌಕಾ ಕೇಜ್ರಿವಾಲ್ ಕೋ ಅಭಿಯಾನ ಪ್ರಾರಂಭಿಸಿದ ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Edited By:

Updated on: Jan 24, 2022 | 2:25 PM

ದೆಹಲಿ: ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಸೋಮವಾರ ತಮ್ಮ ಆಮ್ ಆದ್ಮಿ ಪಕ್ಷದ (AAP) ‘ಏಕ್ ಮೌಕಾ ಕೇಜ್ರಿವಾಲ್ ಕೋ’  (ಕೇಜ್ರಿವಾಲ್​​ಗೊಂದು ಅವಕಾಶ ಕೊಡಿ)  ಅಭಿಯಾನವನ್ನು ಪ್ರಾರಂಭಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎಎಪಿ ಆಡಳಿತದಲ್ಲಿನ ಅಭಿವೃದ್ಧಿಯನ್ನು ಸೆರೆಹಿಡಿಯುವ ವಿಡಿಯೊಗಳನ್ನು ಮಾಡಲು ಮತ್ತು ಪಕ್ಷವನ್ನು ಬೆಂಬಲಿಸಲು ಇತರ ರಾಜ್ಯಗಳ ಜನರನ್ನು ಒತ್ತಾಯಿಸಲು ದೆಹಲಿ ನಿವಾಸಿಗಳಲ್ಲಿ ವಿನಂತಿಸಿದರು. “ಕಳೆದ 7 ವರ್ಷಗಳಲ್ಲಿ, ದೆಹಲಿಯ ಎಎಪಿ ಸರ್ಕಾರವು ಗಮನಾರ್ಹವಾದ ಕೆಲಸವನ್ನು ಮಾಡಿದೆ ಮತ್ತು ಈ ಕೆಲಸವನ್ನು ಪ್ರಪಂಚದಾದ್ಯಂತ ಚರ್ಚಿಸಲಾಗಿದೆ. ವಿಶ್ವಸಂಸ್ಥೆಯ ಅಧಿಕಾರಿಗಳು ನಮ್ಮ ಮೊಹಲ್ಲಾ ಚಿಕಿತ್ಸಾಲಯಗಳಿಗೆ ಭೇಟಿ ನೀಡಿದ್ದರು. ಮಾಜಿ ಫಸ್ಟ್ ಲೇಡಿ ನಮ್ಮ ಶಾಲೆಗಳಿಗೆ ಭೇಟಿ ನೀಡಿದ್ದರು. ದೆಹಲಿಯಲ್ಲಿ 24X7 ವಿದ್ಯುತ್ ಇದೆ. ನೀವು ನಮಗೆ ಅವಕಾಶ ನೀಡಿದ್ದರಿಂದ ನಾವು ಇದನ್ನು ಮಾಡಲು ಸಾಧ್ಯವಾಯಿತು ಎಂದು ಕೇಜ್ರಿವಾಲ್ ಹೇಳಿದರು.  “ದಯವಿಟ್ಟು ವಿಡಿಯೊವನ್ನು ಶೂಟ್ ಮಾಡಿ ಮತ್ತು ನೀವು ಎಎಪಿ ಯ ಯಾವ ಅಭಿವೃದ್ಧಿ ಕಾರ್ಯಗಳನ್ನು ಇಷ್ಟಪಟ್ಟಿದ್ದೀರಿ ಎಂಬುದನ್ನು ನಮಗೆ ತಿಳಿಸಿ. ಯಾವ ಕೆಲಸವು ನಿಮಗೆ ಯಾವ ರೀತಿಯಲ್ಲಿ ಪ್ರಯೋಜನವನ್ನು ನೀಡಿದೆ. ನಿಮ್ಮ ಪ್ರದೇಶದಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳು ತೆರೆದಿವೆಯೇ ಮತ್ತು ಅವು ನಿಮಗೆ ಹೇಗೆ ಪ್ರಯೋಜನವನ್ನು ನೀಡಿವೆ? ಸರ್ಕಾರಿ ಶಾಲೆಗಳ ಸುಧಾರಣೆ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪ್ರಯೋಜನವಾಗಿದೆಯೇ? ದಯವಿಟ್ಟು ವೀಡಿಯೊದಲ್ಲಿ ಉಲ್ಲೇಖಿಸಿ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.


ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿಡಿಯೊವನ್ನು ಅಪ್‌ಲೋಡ್ ಮಾಡುವಂತೆ ಕೇಜ್ರಿವಾಲ್ ದೆಹಲಿ ನಿವಾಸಿಗಳಿಗೆ ವಿನಂತಿಸಿದ್ದಾರೆ. ಅಂತಹ ವೀಡಿಯೊಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ಅವರು ಎಎಪಿಯ ಸ್ವಯಂಸೇವಕರಿಗೆ ಮನವಿ ಮಾಡಿದರು.

“ದೆಹಲಿ ಸರ್ಕಾರದ ಉತ್ತಮ ಕಾರ್ಯಗಳ ಕುರಿತು ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಮತ್ತು ಟ್ವಿಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನೀವು ಹೇಗೆ ಪ್ರಯೋಜನ ಪಡೆದಿದ್ದೀರಿ ಎಂಬುದನ್ನು ಜನರಿಗೆ ತಿಳಿಸಿ. ಅಲ್ಲದೆ ಈ ರಾಜ್ಯಗಳಲ್ಲಿ ನಿಮಗೆ ತಿಳಿದಿರುವವರಿಗೆ ವಾಟ್ಸಾಪ್ ಮಾಡಿ. ವೈರಲ್ ಆದ ಐವತ್ತು ವಿಡಿಯೊಗಳನ್ನು ಮಾಡಿದವರಿಗೆ ಚುನಾವಣೆ ನಂತರ ನನ್ನ ಜತೆ ರಾತ್ರಿ ಭೋಜನ ಮಾಡುವ ಅವಕಾಶ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮಣಿಪುರ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಕಣದಲ್ಲಿದೆ.
2017 ರಲ್ಲಿ ಪಂಜಾಬ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಎಎಪಿ ಧುರಿ ಕ್ಷೇತ್ರದಿಂದ ಭಗವಂತ್ ಮಾನ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಗೋವಾದಲ್ಲಿ ಎಎಪಿ ಮೊದಲ ಬಾರಿಗೆ ಪ್ರವೇಶಿಸಿ ಹಲವಾರು ಭರವಸೆಗಳನ್ನು ಘೋಷಿಸಿದೆ, ವಕೀಲ-ರಾಜಕಾರಣಿ ಅಮಿತ್ ಪಾಲೇಕರ್ ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರತಿನಿಧಿಸುವ ಸೇಂಟ್ ಕ್ರೂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಮತ್ತೊಂದೆಡೆ, ಅರವಿಂದ ಕೇಜ್ರಿವಾಲ್ ಅವರ ಪಕ್ಷವು ಉತ್ತರಾಖಂಡದಲ್ಲಿ ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ.  ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಎಪಿ ಈವರೆಗೆ ಘೋಷಿಸಿಲ್ಲ.

ಇದನ್ನೂ ಓದಿ: ಕೇಂದ್ರ ಸಚಿವ, ರಾಜಸ್ಥಾನ ರಾಜ್ಯಪಾಲರ ಟ್ವಿಟರ್ ಅಕೌಂಟ್​ಗಳೆಲ್ಲ ಹ್ಯಾಕ್​; ಅರೇಬಿಕ್​, ಉರ್ದು ಭಾಷೆಯಲ್ಲಿ ಪೋಸ್ಟ್​ ಮಾಡಿದ ಕಿಡಿಗೇಡಿಗಳು

Published On - 1:39 pm, Mon, 24 January 22