ಇಷ್ಟೊಂದು ಅವಮಾನ ಮಾಡಿದ್ರು, ನಮ್ಮ ಪದಕ, ಪ್ರಶಸ್ತಿಗಳನ್ನು ವಾಪಸ್ ತೆಗೆದುಕೊಳ್ಳಿ: ನೊಂದು ನುಡಿದ ಕುಸ್ತಿಪಟುಗಳು

Wrestlers Protest: ಅಲ್ಲಿ ನಾನು ಮಾತ್ರವಲ್ಲ. ಸಾಕ್ಷಿ ಕೂಡ ಅಲ್ಲೇ ಕುಳಿತಿದ್ದಳು.ಕುಸ್ತಿಪಟುಗಳ ಜತೆ ಈ ರೀತಿ ನಡೆದುಕೊಂಡರೆ ಪದಕಗಳಿಂದ ನಮಗೇನಾಗಬೇಕು? ನಾವು ಸಾಮಾನ್ಯರಂತೆ ಜೀವನವನ್ನು ನಡೆಸುತ್ತೇವೆ. ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ ಎಂದು ಪುನಿಯಾ ಹೇಳಿದ್ದಾರೆ

ಇಷ್ಟೊಂದು ಅವಮಾನ ಮಾಡಿದ್ರು, ನಮ್ಮ ಪದಕ, ಪ್ರಶಸ್ತಿಗಳನ್ನು ವಾಪಸ್ ತೆಗೆದುಕೊಳ್ಳಿ: ನೊಂದು ನುಡಿದ ಕುಸ್ತಿಪಟುಗಳು
ಕಣ್ಣೀರಿಟ್ಟ ಕುಸ್ತಿಪಟುಗಳು
Follow us
|

Updated on:May 04, 2023 | 2:52 PM

ದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕುಸ್ತಿಪಟುಗಳು(Wrestlers Protest) ತಮ್ಮ ಜತೆ ದೆಹಲಿ ಪೊಲೀಸರು ಕೆಟ್ಟದಾಗಿ ವರ್ತಿಸಿರುವುದಾಗಿ ಗುರುವಾರ ಆರೋಪಿಸಿದ್ದು ಭಾರತ ಸರ್ಕಾರದಿಂದ ತಮಗೆ ನೀಡಿದ ಗೌರವದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ದಿಲ್ಲಿಯ ಜಂತರ್ ಮಂತರ್‌ನಲ್ಲಿ ಬುಧವಾರ ರಾತ್ರಿ ಕೆಲವು ಪ್ರತಿಭಟನಾಕಾರರು ಮಡಚಿಡುವ ಮಂಚಗಳನ್ನು ಪ್ರತಿಭಟನಾ ಸ್ಥಳಕ್ಕೆ ತರಲು ಪ್ರಯತ್ನಿಸಿದಾಗ ಕೆಲವು ಪೊಲೀಸ್ ಸಿಬ್ಬಂದಿಗಳು ಕೆಟ್ಟದಾಗಿ ವರ್ತಿಸಿದ್ದಾರೆ. ಪೊಲೀಸರು ಕುಡಿದ ಅಮಲಿನಲ್ಲಿ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಮಗೆ ಸಿಕ್ಕ ಪ್ರಶಸ್ತಿ ಪುರಸ್ಕಾರ ಹಿಂದಿರುಗಿಸುವುದಾಗಿ ಹೇಳಿದ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಅವರು (ಪೊಲೀಸರು) ನಮ್ಮನ್ನು ಅಮಾನುಷವಾಗಿ ನಿಂದನೆ ಮಾಡುವಾಗ, ಕುಸ್ತಿಪಟುಗಳು ಪದ್ಮಶ್ರೀ (ಪ್ರಶಸ್ತಿ ಪುರಸ್ಕೃತರು) ಎಂದು ನೋಡಲು ಸಾಧ್ಯವಾಗಲಿಲ್ಲವೇ” ಎಂದು ಹೇಳಿದರು.

ಅಲ್ಲಿ ನಾನು ಮಾತ್ರವಲ್ಲ. ಸಾಕ್ಷಿ ಕೂಡ ಅಲ್ಲೇ ಕುಳಿತಿದ್ದಳು.ಕುಸ್ತಿಪಟುಗಳ ಜತೆ ಈ ರೀತಿ ನಡೆದುಕೊಂಡರೆ ಪದಕಗಳಿಂದ ನಮಗೇನಾಗಬೇಕು? ನಾವು ಸಾಮಾನ್ಯರಂತೆ ಜೀವನವನ್ನು ನಡೆಸುತ್ತೇವೆ. ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ ಎಂದು ಪುನಿಯಾ ಹೇಳಿದ್ದಾರೆ.

ನೀವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಗೆದ್ದ ಪದಕಗಳ ಬಗ್ಗೆ ಅಥವಾ ಸರ್ಕಾರ ನೀಡಿದ ಗೌರವದ ಬಗ್ಗೆ ಮಾತನಾಡುತ್ತೀರಾ ಎಂದು ಮಾಧ್ಯಮದವರೊಬ್ಬರು ಕೇಳಿದಾಗ ಮಧ್ಯ ಪ್ರವೇಶಿಸಿದ ವಿನೇಶ್ ಫೋಗಟ್,  ಸಾರೇ ಲೇ ಜಾವೋ. ಇತ್ನಿ ಬೀಜ್ಜತಿ ತೋ ಕರ್ ದಿ ಹಮಾರಿ. ಕುಚ್ ಭಿ ಛೋಡಾ ನಹಿ (ಎಲ್ಲವನ್ನೂ ತೆಗೆದುಕೊಂಡು ಹೋಗಿ. ನೀವು ಈಗಾಗಲೇ ನಮ್ಮನ್ನು ತುಂಬಾ ಅವಮಾನಿಸಿದ್ದೀರಿ. ಇನ್ನೇನೂ ಉಳಿದಿಲ್ಲ) ಎಂದಿದ್ದಾರೆ.

ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಗೆ ಹಲವಾರು ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ತನ್ನ ಶಾಸಕರು, ಕೌನ್ಸಿಲರ್‌ಗಳು ಮತ್ತು ಪಕ್ಷದ ಅಧಿಕಾರಿಗಳ ಸಭೆಯನ್ನು ಕರೆದಿದೆ.

ಇದನ್ನೂ ಓದಿ: Modi Road Show: ಶನಿವಾರ ಮಾತ್ರವಲ್ಲ ಭಾನುವಾರವೂ ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ: ಇಲ್ಲಿದೆ ರೂಟ್​ ಮ್ಯಾಪ್

ಪ್ರತಿಭಟನೆಯನ್ನು ರಾಜಕೀಯ ಪಕ್ಷಗಳು ಹೈಜಾಕ್ ಮಾಡಿವೆಯೇ ಎಂದು ಕೇಳಿದಾಗ, ಕೈ ಮುಗಿದ ವಿನೇಶ್ ಫೋಗಟ್ ಕೇಳಿ, ಇದು ರಾಜಕೀಯ. ದಯವಿಟ್ಟು ಪ್ರಧಾನಿಯವರು ನಮ್ಮೊಂದಿಗೆ ಮಾತನಾಡಲಿ. ನಮಗೆ ಕರೆ ಮಾಡಲು ಗೃಹ ಸಚಿವರನ್ನು ಕೇಳಿ. ನಮಗೆ ನ್ಯಾಯ ಕೊಡಿಸಿ. ನಾವು ನಮ್ಮ ವೃತ್ತಿ ಮತ್ತು ನಮ್ಮ ಜೀವನವನ್ನು ಪಣಕ್ಕಿಡುತ್ತಿದ್ದೇವೆ ಎಂದಿದ್ದಾರೆ.

ಜಂತರ್ ಮಂತರ್ ಗಲಾಟೆ:  ಕುಸ್ತಿಪಟುಗಳನ್ನು ಭೇಟಿ ಮಾಡಿದ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಗುರುವಾರ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಭೇಟಿಯಾದರು.  ಸಭೆಗೂ ಮುನ್ನ ಮಲಿವಾಲ್ ಅವರು ಕುಸ್ತಿಪಟುಗಳನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.  ತಾನು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದೇನೆ. ಪ್ರತಿಭಟನಾಕಾರರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳುತ್ತಿರುವ ವಿಡಿಯೊವನ್ನು ಸ್ವಾತಿ ಟ್ವೀಟ್ ಮಾಡಿದ್ದಾರೆ.

ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನವದೆಹಲಿಯ ಡಿಸಿಪಿ,  ಡಿಸಿಡಬ್ಲ್ಯೂನ ಗೌರವಾನ್ವಿತ ಅಧ್ಯಕ್ಷೆ ಅವರನ್ನು ಬ್ಯಾರಿಕೇಡ್‌ನಲ್ಲಿ ಅಧಿಕಾರಿಯೊಬ್ಬರು ತಡೆದರು. ಆಮೇಲೆ ಹೋಗಲು ಬಿಟ್ಟರು. ಅವರು ಪ್ರಸ್ತುತ ಪ್ರತಿಭಟನಾ ಸ್ಥಳದಲ್ಲಿದ್ದಾರೆ. ಜಂತರ್‌ ಮಂತರ್  ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ.

ನಾನು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳೊಂದಿಗೆ ಕುಳಿತಿದ್ದೇನೆ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿದ್ದ ಕೆಲವು ಪೊಲೀಸ್ ಸಿಬ್ಬಂದಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ನನಗೆ ಹೇಳುತ್ತಿದ್ದಾರೆ. ಈ ದೂರುಗಳನ್ನು ಆಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು  ಮಲಿವಾಲ್  ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Thu, 4 May 23