ದೆಹಲಿ ದಂಗೆ: ಬಿಡುಗಡೆ ಆದೇಶ ಮುಂದೂಡಿದ್ದರಿಂದ ವಿದ್ಯಾರ್ಥಿ ಹೋರಾಟಗಾರರಿಗಿಲ್ಲ ಬಿಡುಗಡೆ ಭಾಗ್ಯ

Delhi Riots Case:ಕಳೆದ ವರ್ಷ ಮೇ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ನರ್ವಾಲ್, ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ತನ್ಹಾ ಅವರಿಗೆ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದ್ದು ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅದೇ ರೀತಿಯ ಎರಡು ಜಾಮೀನುಗಳನ್ನು ನೀಡುವಂತೆ ಅವರಿಗೆ ನಿರ್ದೇಶನ ನೀಡಿತ್ತು.

ದೆಹಲಿ ದಂಗೆ: ಬಿಡುಗಡೆ ಆದೇಶ ಮುಂದೂಡಿದ್ದರಿಂದ ವಿದ್ಯಾರ್ಥಿ ಹೋರಾಟಗಾರರಿಗಿಲ್ಲ ಬಿಡುಗಡೆ ಭಾಗ್ಯ
ದೇವಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ
Updated By: ರಶ್ಮಿ ಕಲ್ಲಕಟ್ಟ

Updated on: Jun 17, 2021 | 10:53 AM

ದೆಹಲಿ: ಈಶಾನ್ಯ ದೆಹಲಿ ಗಲಭೆ ‘ಪಿತೂರಿ’ ಪ್ರಕರಣದಲ್ಲಿ ನವದೆಹಲಿಯಲ್ಲಿ ಹೈಕೋರ್ಟ್ ಜಾಮೀನು ಪಡೆದಿದ್ದರೂ ವಿದ್ಯಾರ್ಥಿ ಕಾರ್ಯಕರ್ತರಾದ ದೇವಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರು ಜೈಲಿನಲ್ಲಿಯೇ ಇರಲಿದ್ದಾರೆ. ಜಾಮೀನು ಅರ್ಜಿಗಳಿಗೆ ಸಹಿ ಹಾಕದೇ ಇರುವ ಕಾರಣ ಬಿಡುಗಡೆ ಆದೇಶ ನೀಡಲಾಗಿಲ್ಲ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆದೇಶಕ್ಕಾಗಿ ಹಾಜರಾಗಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಿವಿಂದರ್ ಬೇಡಿ ಹೇಳಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳಾದ ಕಲಿತಾ ಮತ್ತು ನರ್ವಾಲ್ ಅವರು ಜೈಲಿನಿಂದ ತಕ್ಷಣ ಬಿಡುಗಡೆಯಾಗಬೇಕೆಂದು ಕೋರಿ ನವದೆಹಲಿಯ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ವಿಚಾರಣೆಯ ಸಮಯದಲ್ಲಿ ದೆಹಲಿ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಅವರ ವಿಳಾಸ, ಜಾಮೀನುಗಳು ಮತ್ತುಆಧಾರ್ ಕಾರ್ಡ್‌ಗಳ  ದೃಢೀಕರಣವನ್ನು ಪರಿಶೀಲಿಸಲು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದರು ಮತ್ತು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೂರು ದಿನಗಳ ಅಗತ್ಯವಿದೆ ಎಂದು ಹೇಳಿದರು. ಆರೋಪಿಗಳನ್ನು ಪ್ರತಿನಿಧಿಸಿದ ವಕೀಲ ಆದಿತ್ ಪೂಜಾರಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೈಕೋರ್ಟ್ ಆದೇಶದ ಹೊರತಾಗಿಯೂ ಪೊಲೀಸರು ಉದ್ದೇಶಪೂರ್ವಕವಾಗಿ ಅವರ ಬಿಡುಗಡೆಯನ್ನು ವಿಳಂಬ ಮಾಡುತ್ತಿದ್ದಾರೆ ಆದಿತ್ ಆರೋಪಿಸಿದರು.

“ನೀವು ಅವರನ್ನು ಅಕ್ರಮ ಬಂಧನದಲ್ಲಿರಿಸುತ್ತಿದ್ದೀರಿ. ನನಗೆ ಜಾಮೀನು ನೀಡಲಾಗಿದೆ ಮತ್ತು ಅಂದಿನಿಂದ 24 ಗಂಟೆಗಳು ಕಳೆದಿವೆ” ಎಂದು ಅವರು ಹೇಳಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ನರ್ವಾಲ್, ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ತನ್ಹಾ ಅವರಿಗೆ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದ್ದು ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅದೇ ರೀತಿಯ ಎರಡು ಜಾಮೀನುಗಳನ್ನು ನೀಡುವಂತೆ ಅವರಿಗೆ ನಿರ್ದೇಶನ ನೀಡಿತ್ತು.

ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್, ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರು 2020 ರ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ಸ್ ಎಂದು ಆರೋಪಿಸಲಾಗಿದೆ. ದೆಹಲಿ ದಂಗೆಯಲ್ಲಿ 53 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದರು. ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಜಾಮೀನು ಪಡೆದ ನಂತರ, ಕಲಿತಾ ಮತ್ತು ನರ್ವಾಲ್ ಅವರನ್ನು ಜೈಲಿನಿಂದ ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ದೆಹಲಿ ದಂಗೆ: ದೇವಾಂಗನ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾಗೆ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ದೆಹಲಿ ಪೊಲೀಸ್

ಇದನ್ನೂ ಓದಿ: ದೆಹಲಿ ದಂಗೆ: ದೇವಾಂಗನ ಕಲಿತಾ, ನತಾಶಾ ಮತ್ತು ಆಸಿಫ್ ಇಕ್ಬಾಲ್ ತನ್ಹಾಗೆ ಹೈಕೋರ್ಟ್ ಜಾಮೀನು

Published On - 10:46 am, Thu, 17 June 21