ಇಂಡಿಯಾ ಮೈತ್ರಿಕೂಟದಲ್ಲಿ ಸಂಚಾಲಕ ಹುದ್ದೆ ನನಗೆ ಬೇಡ, ಯಾವುದೇ ಸ್ಥಾನದ ಆಕಾಂಕ್ಷಿ ನಾನಲ್ಲ: ನಿತೀಶ್ ಕುಮಾರ್

|

Updated on: Aug 28, 2023 | 2:47 PM

2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂಬೈನಲ್ಲಿ ಪ್ರತಿಪಕ್ಷದ ಬಣ I.N.D.I.A ಯ ಸಭೆಯ ಮೇಲೆ ಎಲ್ಲರ ಗಮನ ಇದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ಕ್ಕೆ ನಡೆಯುವ ಸಭೆಯಲ್ಲಿ ಒಕ್ಕೂಟದ ಲಾಂಛನವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಮತ್ತು ಸೀಟು ಹಂಚಿಕೆ ಸೇರಿದಂತೆ ಕಾರ್ಯತಂತ್ರದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಇಂಡಿಯಾ ಮೈತ್ರಿಕೂಟದಲ್ಲಿ ಸಂಚಾಲಕ ಹುದ್ದೆ ನನಗೆ ಬೇಡ, ಯಾವುದೇ ಸ್ಥಾನದ ಆಕಾಂಕ್ಷಿ ನಾನಲ್ಲ: ನಿತೀಶ್ ಕುಮಾರ್
ನಿತೀಶ್ ಕುಮಾರ್
Follow us on

ದೆಹಲಿ ಆಗಸ್ಟ್ 28: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A)ದಲ್ಲಿ ತಾನು ಯಾವುದೇ ಹುದ್ದೆಯನ್ನು ಬಯಸುವುದಿಲ್ಲ ಎಂದು ಬಿಹಾರದ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಪುನರುಚ್ಚರಿಸಿದ್ದಾರೆ. ನಾನು ಏನನ್ನೂ ಬಯಸುವುದಿಲ್ಲ. ಇದನ್ನು ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನನಗೆ ಅಂತಹ ಆಸೆ ಇಲ್ಲ. ನಾನು ಎಲ್ಲರನ್ನೂ ಒಗ್ಗೂಡಿಸಲು ಬಯಸುತ್ತೇನೆ ಎಂದು ಪಾಟ್ನಾದಲ್ಲಿ ತಮ್ಮ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಹೇಳಿದ್ದಾರೆ.

ಸಂಚಾಲಕನ ಪಾತ್ರವನ್ನು ನೀಡಿದರೆ ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಹಮ್​​​ಕೊ ಕುಚ್ ನಹೀ ಬನ್ನಾ ಹೈ. ಹುಮಾರಿ ಕೋಯಿ ಇಚ್ಚಾ ನಹೀ ಹೈಂ. ದೂಸ್ರೆ ಲೋಗೋ ಕೋ ಬನಾಯಾ ಜಾಯೇಗಾ (ನನಗೆ ಏನೂ ಆಗಲು ಇಷ್ಟವಿಲ್ಲ. ನನಗೆ ಅಂತಹ ಯಾವುದೇ ಆಸೆ ಇಲ್ಲ. ಇತರರನ್ನು ಸಂಚಾಲಕರನ್ನಾಗಿ ಮಾಡಲಾಗುವುದು) ಎಂದು ಅವರು ಹೇಳಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಕ್ರಮದ ನೇತೃತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ, ನನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ. ನಾನು ಪಕ್ಷಗಳನ್ನು ಒಗ್ಗೂಡಿಸಲು ಮಾತ್ರ ಬಯಸುತ್ತೇನೆ ಎಂದಿದ್ದಾರೆ. ಭಾರತ ನಿಜವಾಗಿಯೂ 1947 ರಲ್ಲಿ ಸ್ವತಂತ್ರವಾಗಲಿಲ್ಲ, ಆದರೆ ಜೆಪಿ ಚಳುವಳಿಯ ನಂತರ 1977 ರಲ್ಲಿ ಆಗಿದ್ದು ಎಂದು ಬಿಹಾರದ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, ಯಾರಾದರೂ ಹೇಳಿದರೆ ನಾನು ಯಾವುದಕ್ಕೂ ಗಮನ ಕೊಡುವುದಿಲ್ಲ. ಸ್ವಾತಂತ್ರ್ಯದ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದಾದರೆ ಅವರು ಎಷ್ಟು ಅಪ್ರಸ್ತುತರು ಎಂಬುದನ್ನು ಅದು ತೋರಿಸುತ್ತದೆ ಎಂದಿದ್ದಾರೆ.


2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂಬೈನಲ್ಲಿ ಪ್ರತಿಪಕ್ಷದ ಬಣ I.N.D.I.A ಯ ಸಭೆಯ ಮೇಲೆ ಎಲ್ಲರ ಗಮನ ಇದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ಕ್ಕೆ ನಡೆಯುವ ಸಭೆಯಲ್ಲಿ ಒಕ್ಕೂಟದ ಲಾಂಛನವನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಮತ್ತು ಸೀಟು ಹಂಚಿಕೆ ಸೇರಿದಂತೆ ಕಾರ್ಯತಂತ್ರದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಬಿಜೆಪಿ-ಶಿವಸೇನೆ ಸರ್ಕಾರವು ಮಹಾರಾಷ್ಟ್ರದ ರಾಜಧಾನಿಯಲ್ಲಿ ಆಗಸ್ಟ್ 31 ರಿಂದ ಪ್ರಾರಂಭವಾಗುವ ಎರಡು ದಿನಗಳ ಸಮಾವೇಶಕ್ಕೆ ವಿರೋಧ ಪಕ್ಷದ ಉನ್ನತ ನಾಯಕರು ಮುಂಬೈನಲ್ಲಿ ಸೇರುತ್ತಿದ್ದಾರೆ. ಬಣದ ಮೊದಲ ಸಭೆ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದರೆ, ಎರಡನೆಯದು ಜುಲೈ ಮಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡಲಾಗಿತ್ತು.

ಮುಂಬೈ ಸಭೆಯ ಮೊದಲು, ಮುಂಬರುವ ಸಭೆಯಲ್ಲಿ ಇನ್ನೂ ಕೆಲವು ರಾಜಕೀಯ ಪಕ್ಷಗಳು ವಿರೋಧ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ನಿತೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.

ಆದಾಗ್ಯೂ, ಬಿಜೆಪಿಯನ್ನು ವಿರೋಧಿಸುವ ವಿವಿಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೆಡಿಯು ನಾಯಕ, ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ಸೀಟು ಹಂಚಿಕೆಯಂತಹ ಚುನಾವಣಾ ಸಂಬಂಧಿತ ವಿಧಾನಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಮುಂಬೈನಲ್ಲಿ ಮುಂಬರುವ ಸಭೆಯಲ್ಲಿ ನಾವು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಬಣದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುತ್ತೇವೆ. ಸೀಟು ಹಂಚಿಕೆಯಂತಹ ವಿಷಯಗಳ ಬಗ್ಗೆ ಚರ್ಚಿಸಲಾಗುವುದ. ಹಲವಾರು ಇತರ ಕಾರ್ಯಸೂಚಿಗಳನ್ನು ಅಂತಿಮಗೊಳಿಸಲಾಗುವುದು. ಇನ್ನೂ ಕೆಲವು ರಾಜಕೀಯ ಪಕ್ಷಗಳು ನಮ್ಮ ಸಮ್ಮಿಶ್ರಕ್ಕೆ ಸೇರಿಕೊಳ್ಳುತ್ತೇವೆ.

2024ರ ಲೋಕಸಭೆ ಚುನಾವಣೆಗೂ ಮುನ್ನ ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಒಗ್ಗೂಡಿಸಲು ನಾನು ಇಚ್ಛಿಸುತ್ತೇನೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಹುದ್ದೆ ಬಗ್ಗೆ ನನಗೆ ಯಾವುದೇ ಆಸೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಆಗಸ್ಟ್ 31 ರಂದು ಇಂಡಿಯಾ ಲೋಗೋ ಅನಾವರಣ ಸಾಧ್ಯತೆ: ಕಾಂಗ್ರೆಸ್ ನಾಯಕ ಅಶೋಕ್ ಚವಾಣ್

ಎರಡು ದಿನಗಳ ಕೂಟದಲ್ಲಿ ಹೊಸ ರಾಜಕೀಯ ಪಕ್ಷಗಳು, ವಿಶೇಷವಾಗಿ ಈಶಾನ್ಯ ಭಾರತದ ಪಕ್ಷಗಳು ಭಾಗವಹಿಸುವ ಸಾಧ್ಯತೆಯಿದೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಕಳೆದ ವಾರ ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಭಾರತ ಮೈತ್ರಿಕೂಟದ ನಾಯಕರು ಮುಂಬೈನ ಉಪನಗರದಲ್ಲಿರುವ ಐಷಾರಾಮಿ ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ಬಣದ ಮೂರನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದರು ಹೇಳಿದ್ದಾರೆ.

ಇಂಡಿಯಾ (ಮೈತ್ರಿಕೂಟ) ಲೋಗೋವನ್ನು (ಸಭೆಯ ಸಮಯದಲ್ಲಿ) ಅನಾವರಣಗೊಳಿಸಲಾಗುವುದು. ಅದಕ್ಕಾಗಿ ಚರ್ಚೆಗಳು ನಡೆಯುತ್ತಿವೆ. ನಾವು 140 ಕೋಟಿ ಭಾರತೀಯರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಲೋಗೋ ದೇಶವನ್ನು, ಅದರ ಏಕತೆಯನ್ನು ಸಂಕೇತಿಸುತ್ತದೆ ಮತ್ತು ದೇಶವನ್ನು ಒಟ್ಟಿಗೆ ಇರಿಸಲುಗತ್ಯವಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ರಾವುತ್ ಹೇಳಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಅವರು 2024 ರ ಲೋಕಸಭಾ ಚುನಾವಣೆಗೆ ಮೈತ್ರಿ ಪಾಲುದಾರರ ನಡುವೆ ಸೀಟು ಹಂಚಿಕೆಯನ್ನು ಹಲವು ರಾಜ್ಯಗಳಲ್ಲಿ ಹೆಚ್ಚು ಕಡಿಮೆ ಅಂತಿಮಗೊಳಿಸಲಾಗಿದೆ ಮತ್ತು ಕೆಲವೇ ರಾಜ್ಯಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Mon, 28 August 23