Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake

MS Dhoni:ಧೋನಿಯಂತಹ ಜನಪ್ರಿಯ ಆಟಗಾರ ಈ ಬಗ್ಗೆ ಹೇಳಿಕೆ ನೀಡಿದ್ದರೆ, ಖಂಡಿತವಾಗಿಯೂ ಅದು ಸುದ್ದಿಯಾಗುತ್ತಿತ್ತು. ಇದರ ಬಗ್ಗೆ ಯಾವ ಮಾಧ್ಯಮದಲ್ಲಿಯೂ ವರದಿ ಆಗಿಲ್ಲ. ಧೋನಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸುವ ಯಾವುದೇ ಹೇಳಿಕೆ ಕಾಣಿಸಿಲ್ಲ.

Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake
ಧೋನಿ ಹೇಳಿದ್ದಾರೆ ಎನ್ನಲಾದ ಹೇಳಿಕೆ ಫೇಕ್
ರಶ್ಮಿ ಕಲ್ಲಕಟ್ಟ

Updated on: Jun 05, 2023 | 8:53 PM

ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ (Wrestlers Protest) ಕ್ರೀಡಾಪಟುಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬೆಂಬಲ ಸೂಚಿಸಿದ್ದಾರೆ ಎಂದು ಹೇಳುವ ಪೋಸ್ಟ್​​ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಪ್ರತಿಭಟನೆಯಲ್ಲಿ ನಿರತರಾಗಿರುವ ಫೋಟೊ ಜತೆ ಒಂದು ಕಡೆ, ಇನ್ನೊಂದು ಬದಿಯಲ್ಲಿ ಧೋನಿ ಚಿತ್ರ. ಅದರ ಜತೆಗೆ  ‘ನಾನು ಮಹಿಳಾ ಕುಸ್ತಿಪಟುಗಳ ಜತೆಗಿದ್ದೇನೆ, ಬೇಕಾದರೆ ನಾನೂ ನನ್ನ ಪದಕವನ್ನು ತ್ಯಜಿಸುತ್ತೇನೆ’ ಎಂದು ಬರೆದಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಸಾಕ್ಷಿ ಮಲಿಕ್ ಅವರು ಟ್ವೀಟ್ ಮೂಲಕ ಧೋನಿಗೆ ಕುಟುಕಿದ್ದರು. ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಾಗ ಟ್ವೀಟ್ ಮಾಡಿದ್ದ ಸಾಕ್ಷಿ, ಎಂಎಸ್ ಧೋನಿ ಮತ್ತು ಸಿಎಸ್‌ಕೆಗೆ ಅಭಿನಂದನೆಗಳು. ಕನಿಷ್ಠ ಕೆಲವು ಕ್ರೀಡಾ ಪಟುಗಳಿಗೆ ಅರ್ಹವಾದ ಗೌರವ ಮತ್ತು ಪ್ರೀತಿ ಸಿಗುತ್ತಿದೆ ಎಂದು ನಾವು ಸಂತೋಷಪಡುತ್ತೇವೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಇನ್ನೂ ನಡೆಯುತ್ತಿದೆ ಎಂದಿದ್ದರು.


ಈ ಟ್ವೀಟ್ ಬಳಿಕ ಹಲವರು ಧೋನಿಗೆ ಕುಸ್ತಿಪಟುಗಳನ್ನು ಬೆಂಬಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಇದೆಲ್ಲದರ ನಡುವೆಯೇ ಧೋನಿ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎನ್ನುವ ಪೋಸ್ಟ್ ಹರಿದಾಡುತ್ತಿದ್ದು,ಇದನ್ನು ಮೆಚ್ಚಿ ಹಲವರು ಧನ್ಯವಾದವನ್ನೂ ಸಲ್ಲಿಸುತ್ತಿದ್ದಾರೆ.

ಆದಾಗ್ಯೂ, ಧೋನಿ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಪದಕವನ್ನೂ ತ್ಯಾಗ ಮಾಡಲು ಸಿದ್ಧ ಎಂದು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಅವರು ಟ್ವೀಟ್ ಅಥವಾ ಹೇಳಿಕೆಯನ್ನು ನೀಡಿಲ್ಲ.

ಫ್ಯಾಕ್ಟ್ ಚೆಕ್

ಕುಸ್ತಿಪಟುಗಳ ಪ್ರತಿಭಟನೆ ದಿನಾ ಸುದ್ದಿಯಾಗುತ್ತಿದೆ. ಹಿಂದಿನ ವಾರ 1983ರ ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಹಲವಾರು ಸದಸ್ಯರು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು. ಇದಲ್ಲದೇ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್ ಕೂಡ ಧರಣಿ ನಿರತ ಕುಸ್ತಿಪಟುಗಳ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ಹೀಗಿರುವಾಗ ಧೋನಿಯಂತಹ ಜನಪ್ರಿಯ ಆಟಗಾರ ಈ ಬಗ್ಗೆ ಹೇಳಿಕೆ ನೀಡಿದ್ದರೆ, ಖಂಡಿತವಾಗಿಯೂ ಅದು ಸುದ್ದಿಯಾಗುತ್ತಿತ್ತು. ಇದರ ಬಗ್ಗೆ ಯಾವ ಮಾಧ್ಯಮದಲ್ಲಿಯೂ ವರದಿ ಆಗಿಲ್ಲ. ಧೋನಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸುವ ಯಾವುದೇ ಹೇಳಿಕೆ ಕಾಣಿಸಿಲ್ಲ.

ಇದನ್ನೂ ಓದಿ: ನಮ್ಮ ಹೋರಾಟಕ್ಕೆ ಉದ್ಯೋಗ ಅಡ್ಡಿಯಾಗುವುದಾದರೆ ಅದನ್ನು ಬಿಡುವುದಕ್ಕೂ ನಾವು ಹಿಂಜರಿಯುವುದಿಲ್ಲ: ಕುಸ್ತಿಪಟುಗಳು

ಕ್ರೀಡಾ ಪತ್ರಕರ್ತರು ಹೇಳಿದ್ದೇನು?

ಈ ಬಗ್ಗೆ ಮಾಹಿತಿ ಪಡೆಯಲು ಕೆಲ ಕ್ರೀಡಾ ಪತ್ರಕರ್ತರನ್ನು ಸಂಪರ್ಕಿಸಿದ್ದೆವು. ಧೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿರುವುದಾಗಿ ಆಜ್ ತಕ್ ವರದಿ ಮಾಡಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us