Fact Check: ಮಗಳನ್ನು ಹಿಂದೂ ಹುಡುಗನಿಗೆ ಮದುವೆ ಮಾಡಿಕೊಟ್ಟ ಕೇರಳದ ಮುಸ್ಲಿಂ ದಂಪತಿ; ವೈರಲ್ ಚಿತ್ರದ ಹಿಂದಿನ ಸತ್ಯಾಸತ್ಯತೆ ಏನು?

ಮುಸ್ಲಿಂ ದಂಪತಿಯ ಪಾದಗಳಿಗೆ ನವ ವಧು ನಮಸ್ಕರಿಸುತ್ತಿರುವ ಫೋಟೊ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭ ದ್ದಾಗಿದೆ. ಇಲ್ಲಿ ಹಿಂದೂ ಕುಟುಂಬದ ಅನಾಥ ಹುಡುಗಿಯ ಮದುವೆಯನ್ನು ಮುಸ್ಲಿಂ ಕುಟುಂಬ ನಡೆಸಿಕೊಟ್ಟು ಮತ ಸೌಹಾರ್ದತೆ ಮೆರೆದಿತ್ತು.

Fact Check: ಮಗಳನ್ನು ಹಿಂದೂ ಹುಡುಗನಿಗೆ ಮದುವೆ ಮಾಡಿಕೊಟ್ಟ ಕೇರಳದ ಮುಸ್ಲಿಂ ದಂಪತಿ; ವೈರಲ್ ಚಿತ್ರದ ಹಿಂದಿನ ಸತ್ಯಾಸತ್ಯತೆ ಏನು?
ವೈರಲ್ ಆಗಿರುವ ಚಿತ್ರ
ರಶ್ಮಿ ಕಲ್ಲಕಟ್ಟ

Updated on: Apr 07, 2021 | 7:26 PM

ಕೇರಳದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳನ್ನು ಸನಾತನ ಹಿಂದೂ ಯುವಕನಿಗೆ ಮದುವೆ ಮಾಡಿಕೊಟ್ಟಿದೆ. ಮಗಳು ಹಿಂದೂ ಕುಟುಂಬದಲ್ಲಿ ಸುರಕ್ಷಿತಳಾಗಿರುತ್ತಾಳೆ. ಜೈ ಶ್ರೀರಾಮ್ ಎಂಬ ಸಾಲಿನೊಂದಿಗೆ ನವದಂಪತಿಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂ ದಂಪತಿಯ ಪಾದಗಳಿಗೆ ನವ ವಧು ನಮಸ್ಕರಿಸುವ ಫೋಟೊ ಇದಾಗಿದೆ. ಆದರೆ ವೈರಲ್ ಪೋಸ್ಟ್ ನಲ್ಲಿ ಹೇಳಿದಂತೆ ಮುಸ್ಲಿಂ ಕುಟುಂಬ ತಮ್ಮ ಮಗಳನ್ನು ಹಿಂದೂ ಹುಡುಗನಿಗೆ ಮದುವೆ ಮಾಡಿಕೊಟ್ಟಿಲ್ಲ. ಫೋಟೊ ಕೇರಳದ್ದು ಆಗಿದ್ದರೂ ಇದರ ಹಿಂದಿನ ಸತ್ಯ ಬೇರೆಯೇ ಇದೆ.

ಫ್ಯಾಕ್ಟ್ ಚೆಕ್
ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್​ಚೆಕ್ ಮಾಡಿದ ಬೂಮ್ ಲೈವ್ ಈ ಫೋಟೊ ಕೇರಳದ್ದು ಎಂದು ಹೇಳಿದೆ. ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2020 ಫೆಬ್ರವರಿ 18ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ‘Kerala: Muslim man marries off his Hindu foster daughter’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ ಈ ಫೋಟೊ ಬಳಕೆಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ

ಈ ಸುದ್ದಿ ಪ್ರಕಾರ ಕೇರಳದ ಕಾಸರಗೋಡು ಜಿಲ್ಲೆಯ ಮೇಲ್ಪರಂಬದ ಅಬ್ದುಲ್ಲ ರಹಿಮಾನ್ ಎಂಬವರು ರಾಜೇಶ್ವರಿಯನ್ನು ದತ್ತು ಪಡೆದಿದ್ದರು. ತಮಿಳುನಾಡು ಮೂಲದ ಕೃಷಿ ಕಾರ್ಮಿಕರ ಮಗಳು ರಾಜೇಶ್ವರಿ 10 ವರ್ಷದವಳಿದ್ದಾಗ ಪೋಷಕರನ್ನು ಕಳೆದುಕೊಂಡಿದ್ದಳು.


2020 ಫೆಬ್ರವರಿ 17ರಂದು ಮಾತೃಭೂಮಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ರಾಜೇಶ್ವರಿ ಅವರ ಅಪ್ಪ ಅಬ್ದುಲ್ಲ ಅವರ ಮನೆಯಲ್ಲಿ ಕೆಲಸದಾಳು ಆಗಿದ್ದರು. ಅಬ್ದುಲ್ಲ ಅವರಿಗೆ ಕುನ್ನರಿಯಂ ನಲ್ಲಿ ತೋಟ ಇದ್ದು, ಅಲ್ಲಿ ಈ ದಂಪತಿ ಕೆಲಸ ಮಾಡುತ್ತಿದ್ದರು. ಹಾಗಾಗಿ ರಾಜೇಶ್ವರಿ ಬಾಲ್ಯದಿಂದಲೇ ಅಬ್ದುಲ್ಲ ಅವರ ಕುಟುಂಬದೊಂದಿಗೆ ನಂಟು ಹೊಂದಿದ್ದಳು.

ರಾಜೇಶ್ವರಿ ಅವರ ವರ ವಿಷ್ಣು ಅವರ ಕುಟುಂಬ ದೇವಸ್ಥಾನದಲ್ಲಿಯೇ ಮದುವೆಯಾಗಬೇಕು ಎಂದು ಹಠ ಹಿಡಿದಿದ್ದರಿಂದ ಕಾಞಂಗಾಡ್ ನ ಮಣ್ಯೋಟ್ ದೇವಾಲಯದಲ್ಲಿ ಅವರ ಮದುವೆ ನಡೆದಿತ್ತು. ಈ ದೇವಾಲಯದಲ್ಲಿ ಎಲ್ಲ ಧರ್ಮದ ಜನರಿಗೆ ಪ್ರವೇಶವಿದೆ. ಹಿಂದೂ ಮತ್ತು ಮುಸ್ಲಿಂ ಕುಟುಂಬ ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ಫೆಬ್ರವರಿ 16ರಂದು ರಾಜೇಶ್ವರಿ ಮತ್ತು ವಿಷ್ಣು ಪ್ರಸಾದ್ ಅವರ ವಿವಾಹ ನಡೆದಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನೂ ಓದಿ:  Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ

Fact Check:ಕರ್ನಾಟಕದಲ್ಲಿ ಕೊವಿಡ್ ನಿರ್ಬಂಧ; ಸಾಮಾಜಿಕ ತಾಣದಲ್ಲಿ ವೈರಲ್ ಆಯ್ತು ಹಳೇ ವಿಡಿಯೊ

(Fact Check Viral Photo of Hindu couple seeking blessings of an Elderly Muslim couple)

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us