ಆಂಧ್ರ ಪ್ರದೇಶದಲ್ಲಿನ ಅನ್ನಮಯ್ಯ ಡ್ಯಾಂನಿಂದ ದಿಢೀರ್​ ಪ್ರವಾಹ;18 ಜನರು ಜಲಸಮಾಧಿ, ಅನೇಕರು ನಾಪತ್ತೆ

S Chandramohan

| Edited By: preethi shettigar

Updated on:Nov 23, 2021 | 12:36 PM

ಅನ್ನಮಯ್ಯ ಡ್ಯಾಂ ಕೆಳಭಾಗದಲ್ಲಿರುವ ಈ ಗ್ರಾಮಗಳ ಹತ್ತಾರು ಮನೆಗಳು ಶಿಥಿಲಗೊಂಡಿವೆ. ಗ್ರಾಮಸ್ಥರು ತಮ್ಮ ಬಟ್ಟೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಕಳೆದುಕೊಂಡಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಕೃಷಿ ಬೆಳೆಗಳು ನಾಶವಾಗಿವೆ. ಹತ್ತಾರು ಜಾನುವಾರುಗಳು ಕೊಚ್ಚಿ ಹೋಗಿವೆ.

ಆಂಧ್ರ ಪ್ರದೇಶದಲ್ಲಿನ ಅನ್ನಮಯ್ಯ ಡ್ಯಾಂನಿಂದ ದಿಢೀರ್​ ಪ್ರವಾಹ;18 ಜನರು ಜಲಸಮಾಧಿ, ಅನೇಕರು ನಾಪತ್ತೆ
ಆಂಧ್ರದಲ್ಲಿ ಪ್ರವಾಹ

ದೆಹಲಿ: ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕಟ್ಟಿದ್ದ ಡ್ಯಾಂ ಈಗ ಅನಾಹುತಕ್ಕೆ ಕಾರಣವಾಗಿದೆ. ಆಂಧ್ರ ಪ್ರದೇಶದಲ್ಲಿನ ಅನ್ನಮಯ್ಯ ಡ್ಯಾಂನಿಂದ ದಿಢೀರ್​ ಪ್ರವಾಹವಾಗಿದ್ದು(Flood), 18 ಜನರು ಜಲಸಮಾಧಿಯಾಗಿದ್ದಾರೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಗ್ರಾಮಗಳಲ್ಲಿ ಕೃಷಿ ಸಮೃದ್ಧಿಗೆ ಕಾರಣವಾಗಬೇಕಾಗಿದ್ದ ಡ್ಯಾಂ ಈಗ ಅನೇಕ ಗ್ರಾಮಗಳಲ್ಲಿ ದುಃಖ, ನೋವಿಗೆ ಕಾರಣವಾಗಿದೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ರಾಜಂಪೇಟೆ ವಿಧಾನಸಭಾ ಕ್ಷೇತ್ರದ ಚೆಯ್ಯೆರು ನದಿಗೆ ಅಡ್ಡಲಾಗಿ ಅನ್ನಮಯ್ಯ ಡ್ಯಾಂ (Annamayya Dam) ಯೋಜನೆ ಕೈಗೆತ್ತಿಕೊಂಡಿದ್ದು, ಈಗ ಅನೇಕ ಹಳ್ಳಿಗಳ ನೋವಿಗೆ ಕಾರಣವಾಗಿದೆ. ತೊಗೂರುಪೇಟೆ, ಮಂದಪಲ್ಲಿ, ಪುಲಪತ್ತೂರು, ಗುಂಡ್ಲೂರು ಗ್ರಾಮಗಳು ಈಗ ಪ್ರವಾಹದಿಂದ ಸಂಪೂರ್ಣ ಹಾಳಾಗಿವೆ.

ಅನ್ನಮಯ್ಯ ಡ್ಯಾಂ ಯೋಜನೆಯ ಕಟ್ಟೆ ಒಡೆದ ಕಾರಣ ಉಂಟಾದ ದಿಢೀರ್ ಪ್ರವಾಹದಿಂದ ಕನಿಷ್ಠ 18 ಜನರು ಜಲಸಮಾಧಿಯಾಗಿದ್ದಾರೆ. ಇನ್ನೂ ಇದೇ ಗ್ರಾಮಗಳಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ. ಶುಕ್ರವಾರದಂದು ಎರಡು ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದಿತ್ತು. ದಿಢೀರನೆ 10 ಅಡಿ ಎತ್ತರಕ್ಕೆ ನೀರು ಹರಿದು ಬಂದಿದ್ದು, ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅನ್ನಮಯ್ಯ ಡ್ಯಾಂ ಕೆಳಭಾಗದಲ್ಲಿರುವ ಈ ಗ್ರಾಮಗಳ ಹತ್ತಾರು ಮನೆಗಳು ಶಿಥಿಲಗೊಂಡಿವೆ. ಗ್ರಾಮಸ್ಥರು ತಮ್ಮ ಬಟ್ಟೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಕಳೆದುಕೊಂಡಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಕೃಷಿ ಬೆಳೆಗಳು ನಾಶವಾಗಿವೆ. ಹತ್ತಾರು ಜಾನುವಾರುಗಳು ಕೊಚ್ಚಿ ಹೋಗಿವೆ.

ಜಲಪ್ರಳಯ ನುಂಗಿ ಹಾಕಿದ್ದರಿಂದ ಗೃಹೋಪಯೋಗಿ ವಸ್ತುಗಳೇನೂ ಉಳಿದಿರಲಿಲ್ಲ. ಇದೆಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು. ಮುಂಬರುವ ಅನಾಹುತದ ಬಗ್ಗೆ ಯಾವುದೇ ಎಚ್ಚರಿಕೆ ಇರಲಿಲ್ಲ . ಈಗ ನಮ್ಮ ಬದುಕು ಸಂಪೂರ್ಣ ಹಾಳಾಗಿದೆ ಎಂದು ತೊಗೂರುಪೇಟೆ, ಮಂದಪಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪುಲಪತ್ತೂರು ಗ್ರಾಮದಲ್ಲಿ 12 ಮಂದಿ, ಮಂದಪಲ್ಲಿಯಲ್ಲಿ ಒಂಬತ್ತು ಮಂದಿ ಹಾಗೂ ಗುಂಡ್ಲೂರಿನಲ್ಲಿ ಐವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಇದುವರೆಗೆ 18 ಮೃತದೇಹಗಳು ಮಾತ್ರ ಪತ್ತೆಯಾಗಿದ್ದು, ಉಳಿದವರ ಗುರುತು ಪತ್ತೆಯಾಗಿಲ್ಲ.

ಅನ್ನಮಯ್ಯ ಒಂದು ಮಧ್ಯಮ ನೀರಾವರಿ ಯೋಜನೆಯಾಗಿದ್ದು, ರಾಜಂಪೇಟೆ ಕ್ಷೇತ್ರದ ಪೆನ್ನಾ ನದಿಯ ಉಪನದಿಯಾದ ಚೆಯ್ಯೆರು ಕೇವಲ 2.24 ಟಿಎಂಸಿ ಅಡಿ ಒಟ್ಟು ಸಾಮರ್ಥ್ಯ ಹೊಂದಿದೆ. ಇದು 22,500 ಎಕರೆ ಪ್ರದೇಶಕ್ಕೆ ನೀರನ್ನು ಪೂರೈಸುತ್ತದೆ. ಜೊತೆಗೆ 140 ಗ್ರಾಮಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತದೆ. ಪಿಂಚಾ ಪ್ರಾಜೆಕ್ಟ್ ಅಪ್‌ಸ್ಟ್ರೀಮ್ ಅನ್ನು ಉಲ್ಲಂಘಿಸಿ, ಎಲ್ಲಾ ಪ್ರವಾಹ ನೀರನ್ನು ಅನ್ನಮಯ್ಯಗೆ ಬಿಡಲಾಯಿತು. ಆದರೆ ಶೇಷಾಚಲಂನ ನೀರು ಕೂಡ ಭಾರೀ ಮಳೆಯ ಕಾರಣದಿಂದ ಹರಿದು ಬಂದಿತು. ಇದರ ಪರಿಣಾಮವಾಗಿ ಒಟ್ಟಾರೆ ಎರಡು ಲಕ್ಷ ಕ್ಯೂಸೆಕ್‌ ನೀರನ್ನು ಹೊರಹಾಕಲಾಯಿತು.

ಇದು ಚೆಯ್ಯೆರು ನದಿಯು ಉಕ್ಕಿ ಹರಿಯುವಂತೆ ಮಾಡಿತು. ರಾಜಂಪೇಟೆ ಮತ್ತು ನಂದಲೂರು ಮಂಡಲಗಳಲ್ಲಿ ಕನಿಷ್ಠ 10 ಹಳ್ಳಿಗಳನ್ನು ಮುಳುಗಿಸಿತು. ಇದು ಆಡಳಿತದ ಘೋರ ದುರಾಡಳಿತವೇ ಹೊರತು ಬೇರೇನೂ ಅಲ್ಲ. ಇಷ್ಟು ಭಾರಿ ಮಳೆಯಾದಾಗ ಪ್ರವಾಹ ಬಂದಿದ್ದು, ಅವರಿಗೆ ಗೊತ್ತಿರಲಿಲ್ಲವೇ? ಅದು ನಮ್ಮನ್ನು ನಾಶಮಾಡುವ ಮೊದಲು ಬರಲಿರುವ ಅಪಾಯದ ಬಗ್ಗೆ ನಮ್ಮನ್ನು ಏಕೆ ಎಚ್ಚರಿಸಲಿಲ್ಲ? ಎಂದು  ಮಂಡಪಲ್ಲಿ ಮತ್ತು ತೊಗುರುಪೇಟೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಕೆಲವು ಸಹೃದಯ ಸ್ವಯಂಸೇವಕರನ್ನು ಹೊರತುಪಡಿಸಿ, ಆಡಳಿತವು ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬಂದಿಲ್ಲ ಎಂದು ಗ್ರಾಮದ ಜನರು ನೋವು ತೋಡಿಕೊಂಡಿದ್ದಾರೆ. ಅನ್ನಮಯ್ಯ ಡ್ಯಾಂ ಯೋಜನೆಯಡಿ ಮೊದಲ ಗ್ರಾಮ ನಮ್ಮದು. ನಾವು ಮನೆ, ದನ, ಸರಕು ಸಾಮಗ್ರಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಗ್ರಾಮದ ಕೆಲವರು ಸಾವನ್ನಪ್ಪಿದ್ದಾರೆ. ನಮಗೆ ಬೇರೆ ಎಲ್ಲೂ ಹೋಗಲು ಯಾವುದೇ ಜಾಗವಿಲ್ಲ ಎಂದು ಸುಮಾರು 500 ಜನ ವಾಸಿಸುವ ತೊಗೂರುಪೇಟೆಯ ನಿವಾಸಿಗಳು ಹೇಳಿದ್ದಾರೆ.

ಹಾಗೋ ಹಾಗೇ ಉಳಿದುಕೊಂಡಿದ್ದ ಸ್ಥಳೀಯ ದೇವಿಯ ದೇವಸ್ಥಾನ ಈಗ ನಿರಾಶ್ರಿತ ಗ್ರಾಮಸ್ಥರ ಏಕೈಕ ಆಶ್ರಯ ಕೇಂದ್ರವಾಗಿ ಬದಲಾಗಿದೆ. ಮಂದಪಳ್ಳಿ ಜನರು ಹೃದಯ ವಿದ್ರಾವಕ ದೃಶ್ಯವನ್ನು ವಿವರಿಸಿದ್ದು, ಪ್ರವಾಹದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರಿಂದ ಎರಡು ಕುಟುಂಬಗಳು ಸಂಪೂರ್ಣ ನಾಶವಾಗಿವೆ. ಮತ್ತೊಂದು ಕುಟುಂಬ ಇಬ್ಬರನ್ನು ಕಳೆದುಕೊಂಡಿದೆ.

ಅಣೆಕಟ್ಟೆ ಒಡೆದಿರುವುದು ಇಂತಹ ದೊಡ್ಡ ಅನಾಹುತಕ್ಕೆ ಕಾರಣ. ನದಿಯ ಹರಿವು ಬದಲಾಯಿತು. ಆದರೆ ಅಣೆಕಟ್ಟು ಒಡೆದು ನಿಜವಾದ ವಿನಾಶಕ್ಕೆ ಕಾರಣವಾಯಿತು. ನಾವು ಇನ್ನೂ ಸುಮಾರು 600 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಇದು ಒಂದು ದೊಡ್ಡ ವಿಪತ್ತು, ಅದರ ಪ್ರಮಾಣವನ್ನು ಊಹಿಸಲು ಸಾಧ್ಯವಿಲ್ಲ ಎಂದು ಕಡಪ ಜಿಲ್ಲಾಧಿಕಾರಿ ವಿಜಯ ರಾಮರಾಜು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಮುಂದುವರಿಯಲಿದೆ ಮಳೆ

ಬಂಗಾಳ ಕೊಲ್ಲಿ ಮೇಲೆ ವಾಯುಭಾರ ಕುಸಿತ, ಭಾರಿ ಮಳೆಯಿಂದಾಗಿ ನಡುಗಡ್ಡೆಯಂತೆ ಕಂಡ ಚೆನೈ ಮಹಾನಗರ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada